Yuvavahini

AUG 06, 2017 3.54 PM IST

ಸಿಂಚನ ವಿಶೇಷಾಂಕ : 2017

ತ್ರಿಕಾಲಾನ್ವಯ ಸಂದೇಶಗಳು

ಸುಮಾರು 1918-20ರ ಸಮಯ. ಕೇರಳದಲ್ಲಿನ ಈಳವ ಮತ್ತು ತೀಯ ಜನಾಂಗದವರು, ಸಾಮೂಹಿಕವಾಗಿ ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದ ಸಾಮಾಜಿಕ ದುರಂತ ಕಾಲವಾಗಿತ್ತು. ಇದರಿಂದ ಬೇಸತ್ತ ಬ್ರಹ್ಮಶ್ರೀ ನಾರಾಯಣಗುರುಗಳ ಶಿಷ್ಯರುಗಳಾದ ಸ್ವಾಮಿ ಬೋಧಾನಂದ, ನ್ಯಾಯವಾದಿ ಪರಮೇಶ್ವರ ಮೆನನ್ (ಮುಂದೆ ಗುರುಗಳಿಂದ ದೀಕ್ಷೆ ಪಡೆದ ಸ್ವಾಮಿ ಧರ್ಮತೀರ್ಥರ್) ಸಿ. ಕೃಷ್ಣ ವಕೀಲ, ನ್ಯಾಯಮೂರ್ತಿ ಅಯ್ಯಾ ಕುಟ್ಟಿ, ಸಹೋದರನ್ ಅಯ್ಯಪ್ಪನ್, ರಾಮವರ್ಮ ತಂಪುರಾನ್ ಮುಂತಾದವರು ಈ ಸಾಮೂಹಿಕ ಮತಾಂತರವನ್ನು ತಪ್ಪಿಸಲು ಶ್ರೀ ನಾರಾಯಣ ಧರ್ಮವೆಂಬ ಹೊಸ ಧರ್ಮವನ್ನು ಸ್ಥಾಪಿಸಿ, ಹಿಂದೂ ಧರ್ಮದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಶೋಷಣೆಗೊಳಗಾದವರನ್ನು ಈ ಧರ್ಮದೆಡೆಗೆ ತರುವ ಚಿಂತನೆ ಮಾಡಿ ನಾರಾಯಣಗುರುಗಳಲ್ಲಿ ವಿಷಯ ಪ್ರಸ್ತಾಪ ಮಾಡಿದರು. ಆಗ ಗುರುಗಳು ದೀರ್ಘವಾದ ಚಿಂತನೆ ನಡೆಸಿ ಹೇಳಿದ ಮಾತುಗಳು ಹೀಗಿದೆ. “ಈಗ ಈ ಪ್ರಪಂಚ ಹೊಸದಾದ ಒಂದು ಧರ್ಮ ಅಥವಾ ಮತವನ್ನು ಬಯಸುವುದಿಲ್ಲ. ಆದರೆ ಈ ವಿಶ್ವಕ್ಕೆ ಒಂದು ಹೊಸ ಸಂಸ್ಕøತಿಯ ಅಗತ್ಯವಿದೆ. ಆ ಸಂಸ್ಕøತಿಯಲ್ಲಿ ಬುದ್ಧನ ಅಹಿಂಸೆ, ಯೇಸುವಿನ ಪ್ರೇಮ, ಮಹಮ್ಮದನ ಸಹೋದರತ್ವ, ಶಂಕರನ ಜ್ಞಾನ ಪುರಾತನದ ನಮ್ಮ ಋಷಿಮುನಿಗಳ ಆಧ್ಯಾತ್ಮಿಕತೆಯ ತಿರುಳಿರಬೇಕು”. ಇದೇ ರೀತಿ ವೈಕಂ ಸತ್ಯಾಗ್ರಹದ ಸಂದರ್ಭದಲ್ಲಿ ಸತ್ಯಾಗ್ರಹಿ ಯುವಕರಿಗೆ ನೀಡಿದ ಸಂದೇಶ ಹೀಗಿದೆ. ‘ಅನುಭವಿಸುವ ಮತ್ತು ತ್ಯಾಗ ಮಾಡುವ ನೈತಿಕ ಶಕ್ತಿ ನಮ್ಮಲ್ಲಿರಬೇಕು. ಇದನ್ನು ಯಾರೂ ಬಲವಂತವಾಗಿ ತುರುಕ ಬೇಕಾಗಿಲ್ಲ.’
“ಆದರ್ಶವಾದದ ಉನ್ನತ ಶಿಖರದ ತುತ್ತತುದಿಗೆ ಏರಿದ ಯುವಕನು ತಮ್ಮ ಆದರ್ಶಗಳನ್ನು ಕಾರ್ಯರೂಪಕ್ಕೆ ತರುವ ಹುಮ್ಮನಸ್ಸಿನಿಂದ ನೇರವಾಗಿ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬಾರದು. ಭೂಮಿಕೆ ಸಿದ್ಧವಾದ ಬಳಿಕವೇ ಆದರ್ಶಗಳ ಆಚರಣೆ ಸಾಧ್ಯ.”
ಮೇಲಿನ ವಾಕ್ಯಪುಂಜಗಳು ಗುರುಗಳು ನೀಡಿದ ಸಂದೇಶ ಮಾತ್ರವಲ್ಲ ಭವಿಷ್ಯದಲ್ಲಿ ಸಂಭವಿಸಬಹುದಾದ ಮಾನವ ಜನಾಂಗದ ದುರಂತದ ಬಗೆಗಿನ ಎಚ್ಚರವೂ ಆಗಿತ್ತು. ಇಂದಿನ ವಾಸ್ತವ ಪ್ರಪಂಚದಲ್ಲಿ ಅಸ್ಥಿತ್ವದಲ್ಲಿರುವ ಧರ್ಮಗಳ ಪ್ರತಿನಿಧಿಗಳಾದ, ಪಾದ್ರಿಗಳು, ಮೌಲಿಗಳು, ಪೀಠಾಧಿಪತಿಗಳು ಧರ್ಮದ ಹೆಸರಿನಲ್ಲಿ ಮಾಡುತ್ತಿರುವುದಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಎಲ್ಲರಿಗೂ ಗೊತ್ತಿರುವುದೆ. ಹಿಂದೂ ಧರ್ಮವನ್ನು ಹೊರತುಪಡಿಸಿದರೆ ಉಳಿದ ಹಲವಾರು ಧರ್ಮಗಳು ಮತಪ್ರಚಾರದ ಸೋಗಿನಲ್ಲಿ ಮಾಡುತ್ತಿರುವ ಮತಾಂತರ ಪ್ರಕ್ರಿಯೆಗಳು, ಜಿಹಾದ್‍ಗಳು ವಿಶ್ವದ ಶಾಂತಿಯನ್ನೇ ಕದಡಿದೆ. ತಾನು ಪ್ರತಿನಿಧಿಸುವ ಧರ್ಮವೇ ಶ್ರೇಷ್ಠ ಉಳಿದವೆಲ್ಲವೂ ನಿಕೃಷ್ಠವೆಂಬ ಭಾವನೆ ಹೊಂದಿದ ಹಲವಾರು ಮತ ಪ್ರಚಾರಕರು, ತಮ್ಮ ಧರ್ಮದಡಿಯಲ್ಲಿಯೇ ವಿಶ್ವಮಾನವ ಜನಾಂಗ ನಿಯಂತ್ರಣದಲ್ಲಿರಬೇಕು ಎಂಬ ಗೊಡ್ಡು ಅಹಂಭಾವವನ್ನು ತಾಳಿದ್ದಾರೆ. ಪರಧರ್ಮ ನಿಂದನೆಯೂ ಧಾರಾಳವಾಗಿ ನಡೆಯುತ್ತಿದೆ. ಬಹಿರಂಗದ ಆಚರಣೆಯಲ್ಲಿ ಧರ್ಮ ಧರ್ಮಗಳಲ್ಲಿ ಪರಸ್ಪರ ಪೈಪೋಟಿ ದಿಗಂತದೆತ್ತರಕ್ಕೇರಿದೆ. ಅಂತಃರಂಗದ ಆಚರಣೆ ಶೂನ್ಯಮಟ್ಟಕ್ಕೇಳಿದಿದೆ. ಇದರ ಪರಿಣಾಮವೇ ಇಂದು ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ಮತ್ತು ವರ್ಗ ಸಂಘರ್ಷಗಳು. ಇದರಿಂದಾಗಿ ಮಾನವ ಸಂಪನ್ಮೂಲಗಳು ದುರುದ್ದೇಶಕ್ಕೆ ವ್ಯಯವಾಗುತ್ತಿದ್ದು ಎಲ್ಲಾ ಧರ್ಮದ ಜನತೆ ನೈತಿಕವಾಗಿ ಕುಬ್ಜರಾಗುತ್ತಿದ್ದಾರೆ. ಅನ್ಯಾಯ, ಅಕ್ರಮ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇಂದು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಾಂಡವವಾಡುತ್ತಿದ್ದು ನಾವು ನಮಗೋಸ್ಕರ ಅಳಿವಿನ ಪ್ರಪಾತವನ್ನು ಸೃಷ್ಟಿಸಿದ್ದೇವೆ ಮತ್ತು ನಮಗರಿವಿಲ್ಲದೆ ಅದರತ್ತ ಸಾಗುತ್ತಿದ್ದೇವೆ. ಭವಿಷ್ಯದ ಸಂಭವನೀಯ ದುರಂತಗಳನ್ನು ಮನಗಂಡ ಗುರುಗಳು ಇದಕ್ಕಾಗಿ ಪ್ರಪಂಚ ಹೊಸ ಧರ್ಮ ಅಥವಾ ಮತವನ್ನು ಬಯಸುವುದಿಲ್ಲ ಎಂದಿದ್ದರು. ನಿಜಕ್ಕೂ ಶತಮಾನದ ಹಿಂದೆ ಅವರು ನೀಡಿದ ಸಂದೇಶ ಇಂದಿಗೂ ಪ್ರಸ್ತುತವಲ್ಲವೇ? ಗುರುಗಳು ಹೇಳಿದ ಸಂಸ್ಕøತಿ ಇಂದು ಎಲ್ಲಾ ಧರ್ಮಗಳಿಗೂ ಅನಿವಾರ್ಯವಾಗಿದೆ. ಧರ್ಮ ಪ್ರಚಾರಕರು ಅವರವರ ಧರ್ಮದ ಒಳತಿರುಳನ್ನು ಮಾತ್ರ ಸರಳವಾಗಿ ಬೋಧಿಸಿ, ಬಹಿರಂಗ ಆಚರಣೆಯಲ್ಲಿನ ಆಡಂಬರ ಪೈಪೋಟಿಗಳನ್ನು ಕೈಬಿಡುತ್ತಿದ್ದರೆ ಇಂದಿನ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಮತಧರ್ಮಗಳು ಕೇವಲ ಮಾನವನ ಉತ್ತಮ ಬದುಕಿಗೆ ಒಂದು ದಾರಿದೀಪ ಎಂಬ ಸತ್ಯವನ್ನು ನಾವೆಲ್ಲರು ಒಪ್ಪಿಕೊಳ್ಳಬೇಕಾಗಿದೆ.
ಇತ್ತೀಚೆಗಿನ ಕೆಲವು ವರ್ಷಗಳಿಂದ ದೇಶದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಲವಾರು ಸಂಘಟನೆಗಳು ಹುಟ್ಟಿಕೊಂಡಿವೆ. ಮೂಲತಃ ಇದರ ಉದ್ದೇಶಗಳು ಜನಹಿತವಾಗಿದ್ದರೂ ಇರಬಹುದು. ಆದರೆ ವಾಸ್ತವವಾಗಿ ಈ ಸಂಘಟನೆಗಳು, ಭಾಷೆ. ಪ್ರಾಂತ್ಯ, ಧರ್ಮ, ರಾಜಕೀಯ ಇತ್ಯಾದಿಗಳ ಹೆಸರಿನಲ್ಲಿ ಮಾಡುವ ಹೋರಾಟಗಳು ಸಮಾಜದ ಶಾಂತಿ ಸೌಹಾರ್ದತೆಗಳನ್ನು ಕದಡಿಸಿವೆ. ಸಹಸ್ರಾರು ಯುವಕರು ಅದರಲ್ಲೂ ಹಿಂದುಳಿದ ಹಾಗೂ ಪರಿಶಿಷ್ಟ ವರ್ಗದ ಮತ್ತು ಆರ್ಥಿಕವಾಗಿ ಹಿಂದುಳಿದ ಯುವಕರು ಇಂತಹ ಸಂಘಟನೆಗಳ ನೇತಾರರ ಮಾತಿಗೆ ಮತ್ತು ಆಮಿಷಗಳಿಗೆ ಬಲಿಯಾಗಿ ಸಮಾಜದ್ರೋಹದ ಕೆಲಸಗಳಲ್ಲಿ ತೊಡಗಿಸಿಕೊಂಡು ಕೊನೆಗೆ ಅನಾಥರಾಗಿದ್ದಾರೆ. ಸಮಾಜದಲ್ಲಿ ಮಾತ್ರವಲ್ಲ ತಮ್ಮ ತಮ್ಮ ಕುಟುಂಬ ವರ್ಗಗಳಲ್ಲಿಯೂ ತಿರಸ್ಕ್ರತರಾಗುವತ್ತಾ ಆತಂಕದ ಬದುಕಿನಲ್ಲಿದ್ದಾರೆ. ಇದಕ್ಕೇ ಗುರುಗಳು ಹೇಳಿದ್ದು “ಅನುಭವಿಸುವ ಮತ್ತು ತ್ಯಾಗ ಮಾಡುವ ನೈತಿಕ ಶಕ್ತಿ ನಮ್ಮಲ್ಲಿರಬೆಕು. ಇದನ್ನು ಯಾರೂ ಬಲವಂತವಾಗಿ ತುರುಕಬೇಕಾಗಿಲ್ಲ” ಎಂದು. ಇಂತಹ ನಾಟಕೀಯ ಆದರ್ಶಗಳನ್ನು ಪಟ್ಟಭದ್ರ ಹಿತಾಸಕ್ತಿಯುಳ್ಳ ನಾಯಕರೆನಿಸಿ (ಸ್ವಯಂಘೋಷಿತ) ಕೊಂಡವರು. ನಮ್ಮ ಯುವಕರ ಬಾಯಿಗೆ ತುರುಕುತ್ತಿದ್ದಾರೆ. ಅವರು ತುರುಕಿದ ತುತ್ತುಗಳನ್ನು ಜೀರ್ಣಿಸಲೂ ಆಗದೆ ಉಗಿಯಲೂ ಆಗದೆ ನಮ್ಮ ಯುವಕರು ಒದ್ದಾಡುತ್ತಿದ್ದಾರೆ. ಇನ್ನಾದರೂ ದೇಶದ ಯುವಶಕ್ತಿ ನಮ್ಮಲ್ಲಿರುವ ಪಟ್ಟಭದ್ರ ಹಿತಾಸಕ್ತರ ಸಾಧನಗಳಾಗದೆ ದೇಶದ ಸತ್ಪ್ರಜೆಗಳಾಗಿ ಬಾಳುವತ್ತ ಹೆಜ್ಜೆ ಇಡುವರೆ?
ಆದರ್ಶವಾದಗಳು ನಮ್ಮ ದೇಶಕ್ಕೇನು ಹೊಸದಲ್ಲ. ಭಾರತ ಮಾತೆಯ ಗರ್ಭದಲ್ಲಿ ಸಹಸ್ರಾರು ದಾರ್ಶನಿಕರು ಆಗಿ ಹೋಗಿದ್ದಾರೆ. ತಮ್ಮ ಆದರ್ಶವಾದಗಳಿಗೆ ಸರಿಯಾದ ಭೂಮಿಕೆ ಸಿದ್ಧಗೊಳಿಸಿದ ನಂತರ ಆಚರಣೆಗೆ ತಂದಿದ್ದಾರೆ. ನಾರಾಯಣ ಗುರುಗಳು ಕೂಡ ಹಲವಾರು ವರ್ಷ ಮಳೆ, ಬಿಸಿಲು, ಚಳಿ ಎನ್ನದೆ ಹಳ್ಳಿಹಳ್ಳಿಗಳಲ್ಲಿ ಸುತ್ತಾಡಿ ಜನಸಾಮಾನ್ಯನ ನೋವು ಕಷ್ಟನಷ್ಟಗಳನ್ನು ಮನನ ಮಾಡಿದ ನಂತರವೇ ಸಾಮಾಜಿಕ ಸುಧಾರಣೆಗಳಿಗೆ ಸೂಕ್ತ ಭೂಮಿಕೆಯ ಸಿದ್ಧತೆಯನ್ನು ಮರುತ್ವಾಮಲೆ ಮತ್ತು ಅರವೀಪುರಂ ಗೊಂಡಾರಣ್ಯದಲ್ಲಿ ಚಿಂತನೆ ನಡೆಸಿ, ಭೂಮಿಕೆಯ ಸ್ಪಷ್ಟ ಚಿತ್ರಣವನ್ನು ಸಿದ್ಧಪಡಿಸಿದ ನಂತರವೇ ಸುಧಾರಣಾ ಪ್ರಕ್ರಿಯೆಗಳನ್ನು ಪ್ರಾರಂಭಿಸಿದರು. ಆದರೆ ಇಂದಿನ ನಮ್ಮ ಯುವಕರಿಗೆ ಅಷ್ಟೊಂದು ತಾಳ್ಮೆ ಇಲ್ಲ. ತಮ್ಮ ಅನಿಸಿಕೆಗಳೇ ಅಂತಿಮ. ಕುಠಿಲ ರಾಜಕಾರಣಿಗಳ, ಧರ್ಮಾಭಿಮಾನಿಗಳ, ಬೋಧನೆಗಳಿಗೆ ಬಲಿಯಾಗಿ ಆದರ್ಶವಾದಿಗಳೆಂಬ ಒಣ ಪ್ರತಿಷ್ಠೆಯಿಂದ ನೇರವಾಗಿ ಕಾರ್ಯಾಚರಣೆಗಿಳಿದು ಮತ್ತೆಂದೂ ಎದ್ದು ಬರಲಾರದ ಪ್ರಪಾತಕ್ಕೆ ಬೀಳುತ್ತಿದ್ದಾರೆ. ಇಂದಿನ ಯುವ ಶಕ್ತಿಗೆ ನೈತಿಕತೆಯ ಸಿಂಚನದ ಅಗತ್ಯವಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ತೀವ್ರ ತರದ ಸುಧಾರಣೆಗಳಾಗಬೇಕಾಗಿದೆ. ಸರಳವಾದ ಧಾರ್ಮಿಕ ರೀತಿ ನೀತಿಗೆ ಅರಿವಿನ ಅಗತ್ಯವಿದೆ. ಆದರೆ ಇದನ್ನು ಇಂದಿನ ವ್ಯವಸ್ಥೆಗಳಲ್ಲಿ ಜನಪ್ರತಿನಿಧಿಗಳಾಗಿ ದರ್ಬಾರ ಮಾಡುತ್ತಿರುವ ರಾಜಕಾರಣಿಗಳಿಂದ ನಿರೀಕ್ಷಿಸಬಹುದೇ? ಧಾರ್ಮಿಕ ಮುಖಂಡರೆನಿಸಿಕೊಂಡು ಕೇವಲ ಮತ ಪ್ರಚಾರ, ಮತಾಂತರ, ಪರಧರ್ಮ ದೂಷಣೆ ಮಾಡುತ್ತಿರುವವರಿಂದ ಸಾಧ್ಯವೇ? ಸಾಮಾಜಿಕ ಮುಖಂಡರೆನಿಸಿಕೊಂಡು ಸಮಾಜವನ್ನೇ ಒಡೆದು ತಮ್ಮ ಪ್ರತಿಷ್ಠೆಯನ್ನು ಮೆರೆಯುತ್ತಿರುವ ಮಂದಿಗಳಿಂದ ಸಾಧ್ಯವೇ? ದೇಶದ ಇತಿಹಾಸ, ಧರ್ಮದ ಆಳವಾದ ಅಧ್ಯಯನ ಮತ್ತು ಆಚರಣೆ, ಪರಂಪರೆಯಿಲ್ಲದ, ಸಂಸ್ಕಾರವಿಲ್ಲದ, ಕೇವಲ ಕೆಲವರ ಕಪ್ಪು ಹಣದ ಪ್ರಭಾವದಿಂದ ಮೆರೆಯುವ ಕೌನಿಧಾರಿಗಳಿಂದ ಸಾಧ್ಯವೇ?
ಈ ವಿಶ್ವದಲ್ಲಿ ಮಾನವ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಸಹಜವಾದ ಮಾನವ ಹಕ್ಕುಗಳಿಗೆ ದಕ್ಕೆ ಬಂದಾಗ ಅದನ್ನು ಯಶಸ್ವಿಯಾಗಿ ಎದುರಿಸಿ ಮರುಸ್ಥಾಪನೆ ಮಾಡಲು ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ, ಚಿಂತನೆ ಮತ್ತು ಬೋಧನೆಗಳು ಮಾನವ ಜನಾಂಗಕ್ಕೆ ದೈವೀ ಪ್ರೇರಣೆಯಂತೆ ಬೆಳಕಾಗಿ ಬರುವುದು.

ನೆಕ್ಕಿದಪುಣಿ ಗೋಪಾಲಕೃಷ್ಣ ಬೆಂಗಳೂರು

One thought on “ತ್ರಿಕಾಲಾನ್ವಯ ಸಂದೇಶಗಳು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!