ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಹೇಳಿದರು.

ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ 38ನೇ ವಾರ್ಷಿಕ ಸಮಾವೇಶವನ್ನು ಡಿಸೆಂಬರ್ 21ರಂದು ಮಂಗಳೂರು ಪುರಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಈ ಸಮಾವೇಶವು ಯುವವಾಹಿನಿ ಕೂಳೂರು ಘಟಕದ ಆತಿಥ್ಯದಲ್ಲಿ ಜರುಗಿತು.
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳು ಕೇವಲ ಭಜನೆ–ಪೂಜೆಗಳಿಗೆ ಸೀಮಿತವಾಗದೆ, ಯುವಜನರ ಜೀವನ ರೂಪಿಸಿಕೊಳ್ಳಲು ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ ದೀಪವಾಗಬೇಕು ಎಂದು ಬೆಸ್ಟ್ ಫೌಂಡೇಶನ್ ಸ್ಥಾಪಕ ರಕ್ಷಿತ್ ಶಿವರಾಂ ಆಶಯ ವ್ಯಕ್ತಪಡಿಸಿದರು. ಅವರು ಈ ಸಂದರ್ಭದಲ್ಲಿ ಯುವವಾಹಿನಿಯ ಮುಖವಾಣಿ ಯುವಸಿಂಚನ ವಿಶೇಷಾಂಕ–2025 ಅನ್ನು ಬಿಡುಗಡೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಹಾಗೂ ಅವರ ತಂಡಕ್ಕೆ ಲೋಕೇಶ್ ಕೋಟ್ಯಾನ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ವೇದಿಕೆಯಲ್ಲಿ ಬರೋಡಾ, ಗುಜರಾತ್ನ ಉದ್ಯಮಿ ದಯಾನಂದ ಬೋಂಟ್ರ, ಐರ್ಲೆಂಡ್ನ ಮರ್ಸಿ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಕ್ಷಿತಾ ಎನ್. ಅಂಚನ್, ಯುವವಾಹಿನಿ ಕೂಳೂರು ಘಟಕದ ಮಾರ್ಗದರ್ಶಕ ಜಯಾನಂದ ಅಮೀನ್ ಪುನ್ಕೆಮಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಯುವವಾಹಿನಿಯ ಎಲ್ಲಾ 35 ಘಟಕಗಳ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಮಾವೇಶಕ್ಕೆ ವಿಶೇಷ ಘನತೆ ನೀಡಿದರು.
ಸಾಧನಾ ಶ್ರೀ, ಸಾಧನಾ ಶ್ರೇಷ್ಠ ಪ್ರಶಸ್ತಿ ಪ್ರದಾನ :
ವಾರ್ಷಿಕವಾಗಿ ನೀಡಲಾಗುವ ಸಾಧನಾ ಶ್ರೀ ಪ್ರಶಸ್ತಿಯನ್ನು ಸಮಾಜಸೇವಕ ಹಾಗೂ ಉದ್ಯಮಿ ದಯಾನಂದ ಬೋಂಟ್ರ ಅವರಿಗೆ ಪ್ರದಾನಿಸಲಾಯಿತು. ಸಾಧನಾ ಶ್ರೇಷ್ಠ ಪ್ರಶಸ್ತಿಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್, ಕುದ್ರೋಳಿ (ಮಂಗಳೂರು) ಸಂಸ್ಥೆಗೆ ನೀಡಲಾಯಿತು.

ಯುವವಾಹಿನಿ ಯುವ ಸಾಧನಾ ಪುರಸ್ಕಾರ:
ಯುವವಾಹಿನಿ ಯುವ ಸಾಧನಾ ಪುರಸ್ಕಾರ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಅನೀಶ್ ಪೂಜಾರಿ ಹಾಗೂ ಕಲೆ–ಸಾಹಿತ್ಯ ಕ್ಷೇತ್ರದ ಬಹುಮುಖ ಪ್ರತಿಭೆ ಶೈಲೇಶ್ ಬೈಕಂಪಾಡಿ ಅವರಿಗೆ ನೀಡಿ ಗೌರವಿಸಲಾಯಿತು.

ಯುವವಾಹಿನಿ ಗೌರವ ಅಭಿನಂದನೆ :
ಈ ಸಾಲಿನ ಯುವವಾಹಿನಿ ಗೌರವ ಅಭಿನಂದನೆಯನ್ನು ವೈದ್ಯಕೀಯ ಸೇವೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಉಜ್ವಲ್ ಸುವರ್ಣ, ಸಮಾಜಚಿಂತಕ ಹಾಗೂ ಉದ್ಯಮಿ ಹರೀಶ್ ವೆಂಕಪ್ಪ ಪೂಜಾರಿ, ಡಾಕ್ಟರೇಟ್ ಪದವೀಧರೆ ಪ್ರತೀಕ್ಷ, ವಿಶ್ವ ದಾಖಲೆ ನಿರ್ಮಿಸಿದ ಭರತನಾಟ್ಯ ಕಲಾವಿದೆ ವಿದುಷಿ ದೀಕ್ಷಾ ವಿ. ಇವರಿಗೆ ಪ್ರದಾನ ಮಾಡಲಾಯಿತು

ಯುವವಾಹಿನಿ ಅಭಿನಂದನೆ:
ಡಾಕ್ಟರೇಟ್ ಪದವಿ ಪಡೆದ ಡಾ.ರುಚಿಕಾ ರೋಶನ್, ಡಾ.ವಿಜೇತ ದಂಡಕೇರಿ, ಡಾ.ಅಪೂರ್ವ ಆರ್. ಕೆಂಜಾರ್, ಡಾ.ಅನುಷಾ ಎಲ್. ಮತ್ತು ಡಾ.ಭಾರತಿ ಅವರಿಗೆ ಯುವವಾಹಿನಿ ಅಭಿನಂದನೆ ಪ್ರದಾನಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಬಾಬು ಪೂಜಾರಿ ಪುತ್ತೂರು ವಾರ್ಷಿಕ ವರದಿಯನ್ನು ಮಂಡಿಸಿದರು. ಶ್ರೀರಕ್ಷಾ ಎಸ್.ಎಚ್. ಪೂಜಾರಿ (ಕೊಣಾಜೆ) ಪ್ರಾರ್ಥಿಸಿದರು. ಸಮಾವೇಶ ನಿರ್ದೇಶಕ ಯಶವಂತ ಪೂಜಾರಿ ಕೂಳೂರು ಅತಿಥಿಗಳನ್ನು ಸ್ವಾಗತಿಸಿದರು. ಕೂಳೂರು ಘಟಕದ ಅಧ್ಯಕ್ಷ ಲತೀಶ್ ಪೂಜಾರಿ ವಂದಿಸಿದರು. ಸ್ಮಿತೇಶ್ ಬಾರ್ಯ ಮತ್ತು ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮವನ್ನು ನಿರೂಪಿಸಿದರು.


