
ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ, ಯುವವಾಹಿನಿ (ರಿ.) ಕೊಲ್ಯ ಘಟಕದ ಆತಿಥ್ಯದಲ್ಲಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ಸಖೀ ಸಂವಾದ – 2026” ಸಂವಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಶಿಕ್ಷಣ ಸಾಕಾಗದು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕೌಶಲ್ಯ ಆಧಾರಿತ ಶಿಕ್ಷಣ ಅಗತ್ಯ. ತಾಂತ್ರಿಕ, ಆಡಳಿತಾತ್ಮಕ ಮತ್ತು ನಾಯಕತ್ವದ ಕೌಶಲ್ಯಗಳನ್ನು ಪಡೆದುಕೊಂಡಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ರಾಜಕಾರಣದಲ್ಲಿ ಮಹಿಳೆಯರ ಧ್ವನಿ ಇಲ್ಲದಿದ್ದರೆ ಮಹಿಳಾ ನ್ಯಾಯ ಕೇವಲ ಘೋಷಣೆಯಾಗಿಯೇ ಉಳಿಯುತ್ತದೆ. ಮಹಿಳೆಯರ ಸಮಸ್ಯೆಗಳು, ಹಕ್ಕುಗಳು ಹಾಗೂ ಸುರಕ್ಷತೆ ಕುರಿತು ಶಾಸನಸಭೆಗಳಲ್ಲಿ ಚರ್ಚೆಗಳು ನಡೆಯಬೇಕಾದರೆ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಅವರು ಹೇಳಿದರು.
“ಮಹಿಳೆ ಮನೆಯ ಬೆಳಕಾಗುವುದರ ಜೊತೆಗೆ ದೇಶವನ್ನು ನಡೆಸುವ ಶಕ್ತಿಯೂ ಆಗಬೇಕು. ಆಗ ಮಾತ್ರ ಸಮಾನತೆಯ ಭಾರತ ನಿರ್ಮಾಣ ಸಾಧ್ಯ,” ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ತೇಜಸ್ವಿನಿ ವಿ.ಸಿ., ಎಸ್ಬಿಐ ನಿವೃತ್ತ ವ್ಯವಸ್ಥಾಪಕಿ ಸಂಧ್ಯಾ ಸೋಮೇಶ್ವರ ಹಾಗೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಟ್ರಸ್ಟಿ ಕೃತಿನ್ ಅಮೀನ್ ಭಾಗವಹಿಸಿದ್ದರು.
ಸಖೀ ಸಂವಾದ ಮತ್ತು ಸಂಪನ್ಮೂಲ ವ್ಯಕ್ತಿಗಳು :
ಮಹಿಳಾ ಸುರಕ್ಷತೆ ಮತ್ತು ಹಕ್ಕುಗಳ ಜಾಗೃತಿಯೇ ಸಮಾಜದ ಶಕ್ತಿ : ವಿಜಯ ಕ್ರಾಂತಿ

ಸ್ತ್ರೀ ನ್ಯಾಯ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪೊಲೀಸ್ ಉಪ ಆಯುಕ್ತೆ ವಿಜಯ ಕ್ರಾಂತಿ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿದ್ದು ಕಾನೂನಿನ ಅರಿವು ಹೊಂದಿದಾಗ ಮಾತ್ರ ಶೋಷಣೆಯಿಲ್ಲದ ಸಮಾಜ ನಿರ್ಮಾಣ ಸಾಧ್ಯ. ಮಹಿಳಾ ಸುರಕ್ಷತೆ ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ, ಅದು ಇಡೀ ಸಮಾಜದ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಕಾನೂನು ಅರಿವೇ ಮಹಿಳೆಯರ ನಿಜವಾದ ರಕ್ಷಾಕವಚ : ಮೇಘರಾಣಿ

ಸ್ತ್ರೀ ಕಾನೂನು ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮೇಘರಾಣಿ ಮೂಡುಬಿದಿರೆ ಅವರು ಮಹಿಳೆಯರ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೆಲಸದ ಸ್ಥಳದಲ್ಲಿ ಸುರಕ್ಷತೆ ಕುರಿತ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಸ್ತ್ರೀ ಶಿಕ್ಷಣ ಸಮಾಜದ ಪ್ರಗತಿಯ ಮೂಲಶಕ್ತಿ : ಡಾ. ಬಿ.ಕೆ. ಸರೋಜಿನಿ

ಏನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಬಿ.ಕೆ. ಸರೋಜಿನಿ ಮಾತನಾಡಿ, “ಒಬ್ಬ ಪುರುಷ ಕಲಿತರೆ ಆತ ವ್ಯಕ್ತಿಯಾಗಿ ಬೆಳೆಯುತ್ತಾನೆ; ಆದರೆ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಮಹಿಳೆಯರ ಮಾನಸಿಕ ಸುಸ್ಥಿತಿ ಸುಖೀ ಸಂಸಾರಕ್ಕೆ ಅಡಿಪಾಯ : ಡಾ. ರೇಷ್ಮಾ ಎನ್.ಎಸ್

ಕೆಎಂಸಿ ಆಸ್ಪತ್ರೆಯ ಮನೋವೈದ್ಯೆ ಡಾ. ರೇಷ್ಮಾ ಎನ್.ಎಸ್. ಮಾತನಾಡಿ, ಮಹಿಳೆಯರು ದೈಹಿಕ ಆರೋಗ್ಯಕ್ಕೆ ನೀಡುವಷ್ಟೇ ಆದ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು ಎಂದು ತಿಳಿಸಿದರು.
ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ನಿತಿನ್ ಕರ್ಕೇರಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ನಮ್ಮ ಕುಡ್ಲ ನ್ಯೂಸ್ ಚಾನೆಲ್ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಅನಿಲ್ ಕುಮಾರ್ ಹಾಗೂ ಉದ್ಯಮಿ ರಸಿಕಾ ಮೋಹನ್ ದಾಸ್ ಭಾಗವಹಿಸಿದ್ದರು.
ಈ ಕಾರ್ಯಾಗಾರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಪದವಿ ವಿದ್ಯಾರ್ಥಿನಿಯರು ಹಾಗೂ ವಿವಿಧ ಮಹಿಳಾ ಸಂಘಟನೆಗಳ 600 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಯುವವಾಹಿನಿ ‘ಸಖೀ ಸಂವಾದ’ ನಿರೀಕ್ಷೆಗೂ ಮೀರಿ ಯಶಸ್ವಿ: ವಿದ್ಯಾರ್ಥಿನಿಯರಿಂದ ಪ್ರಶಂಸೆ
‘ಸಖೀ ಸಂವಾದ’ ಕಾರ್ಯಾಗಾರವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಮಹಿಳಾ ಜಾಗೃತಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಸಂವಾದದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ವಿದ್ಯಾರ್ಥಿನಿಯರು, “ಈ ಕಾರ್ಯಾಗಾರವು ನಮ್ಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಯುವವಾಹಿನಿಯಂತಹ ಕ್ರಿಯಾಶೀಲ ಸಂಘಟನೆ ಆಯೋಜಿಸಿದ ಈ ಕಾರ್ಯಕ್ರಮವು ನಮಗೆ ಕೇವಲ ಮಾಹಿತಿಯಲ್ಲದೆ, ಬದುಕಿನ ಅಮೂಲ್ಯ ಅನುಭವದ ಪಾಠಗಳನ್ನು ನೀಡಿದೆ. ಇಂತಹ ‘ಸಖೀ ಸಂವಾದ’ಗಳು ಇನ್ನೂ ಹೆಚ್ಚು ನಡೆಯಬೇಕು ಎನಿಸುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರಿಗೆ ಗೌರವ:
ಕಾರ್ಯಾಗಾರದ ನಾಲ್ಕು ಪ್ರಮುಖ ಗೋಷ್ಠಿಗಳಾದ ಸ್ತ್ರೀ ನ್ಯಾಯ, ಸ್ತ್ರೀ ಕಾನೂನು, ಸ್ತ್ರೀ ಶಿಕ್ಷಣ ಮತ್ತು ಮನದ ಆರೋಗ್ಯ ವಿಭಾಗಗಳಲ್ಲಿ ನಡೆದ ಸಂವಾದದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಅತ್ಯುತ್ತಮ ಪ್ರಶ್ನೆಗಳನ್ನು ಕೇಳಿದ ನಾಲ್ವರು ವಿದ್ಯಾರ್ಥಿನಿಯರನ್ನು ಗುರುತಿಸಿ ವಿಶೇಷವಾಗಿ ಗೌರವಿಸಲಾಯಿತು. ಇದು ವಿದ್ಯಾರ್ಥಿನಿಯರಲ್ಲಿ ವಿಷಯದ ಬಗ್ಗೆ ಇದ್ದ ಆಳವಾದ ಆಸಕ್ತಿ ಮತ್ತು ಜಿಜ್ಞಾಸೆಯನ್ನು ಪ್ರತಿಬಿಂಬಿಸಿತು

ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಹಾಗೂ ಮಹಿಳಾ ಸಂಘಟನಾ ನಿರ್ದೇಶಕಿ ಸುಧಾ ಸುರೇಶ್ ಧನ್ಯವಾದ ಅರ್ಪಿಸಿದರು. ಯುವವಾಹಿನಿ ಕೊಲ್ಯ ಘಟಕದ ಕಾರ್ಯದರ್ಶಿ ಸೌಮ್ಯ ಯೋಗೀಶ್, ಮಹಿಳಾ ಸಂಘಟನಾ ನಿರ್ದೇಶಕಿಯರಾದ ಸವಿತಾ ಬಂಗೇರ ಮತ್ತು ವಿಜಿತಾ ಕೊಲ್ಯ ಉಪಸ್ಥಿತರಿದ್ದರು. ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು.


