ಮಂಗಳೂರು, ಸೆ. 16: ಯುವಕರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ, ಅವರೊಳಗಿರುವ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಬೆಳೆಸಲು ಯುವವಾಹಿನಿ ಸಂಸ್ಥೆಯು ಉತ್ತಮ ವೇದಿಕೆಯನ್ನು ನಿರ್ಮಿಸುತ್ತಿದೆ ಎಂದು ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದ ವ್ಯವಸ್ಥಾಪಕ ಹಾಗೂ ಮುಖ್ಯ ತರಬೇತುದಾರ, ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಹೇಳಿದರು.
ಯುವವಾಹಿನಿ (ರಿ.) ಮಂಗಳೂರು ಘಟಕದ ಸಾಪ್ತಾಹಿಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನದ ಕುರಿತು ಉಪನ್ಯಾಸ ನೀಡಿದ ಅವರು, ಇಂದಿನ ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಲವಾರು ಅವಕಾಶಗಳಿವೆ. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿ ಕೇವಲ ಉಪನ್ಯಾಸಕ್ಕೆ ಸೀಮಿತವಾಗದೆ ಪರಸ್ಪರ ಸಂವಾದ ಹಾಗೂ ಚರ್ಚೆಗಳಿಗೆ ಅವಕಾಶ ಕಲ್ಪಿಸುವುದರಿಂದ ವ್ಯಕ್ತಿಯೊಳಗಿನ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೊರತರುವ ಸಾಧ್ಯತೆ ಇದೆ ಎಂದರು.
ಇಂತಹ ಕಾರ್ಯಕ್ರಮಗಳ ಮೂಲಕ ವೇದಿಕೆಯ ಮೇಲೆ ಮಾತನಾಡುವ ಭಯವನ್ನು ದೂರಮಾಡಿ, ಯುವಕರು ಆತ್ಮವಿಶ್ವಾಸದಿಂದ ಮುಂದೆ ಬರುವಂತೆ ಪ್ರೋತ್ಸಾಹಿಸಬಹುದು. ಸಾಪ್ತಾಹಿಕ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸದಸ್ಯರು ಭಾಗವಹಿಸುವಂತೆ ವಿವಿಧ ಸ್ಪರ್ಧೆಗಳು ಹಾಗೂ ಆಸಕ್ತಿದಾಯಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಸಭೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು ಎಂದು ಸಲಹೆ ನೀಡಿದರು.
ಸೆ. 16ರಂದು ಸಂಜೆ 5.30ರಿಂದ 6.30ರವರೆಗೆ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ 6.30ಕ್ಕೆ ಹರೀಶ್ ಕೆ. ಸುವರ್ಣ ಅವರ ಗುರುಪೂಜಾ ಸೇವೆಯೊಂದಿಗೆ ಸದಾನಂದ ಪೂಜಾರಿ ಕುಳಾಯಿ ಅವರ ನೇತೃತ್ವದಲ್ಲಿ ಗುರುಪೂಜೆ ನೆರವೇರಿತು. ಸಂಜೆ 7 ಗಂಟೆಗೆ ಗುರುಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು.
ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಅಧ್ಯಕ್ಷತೆ ವಹಿಸಿ ಸರ್ವ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಜೀವನ್ ಕೊಲ್ಯ ಅವರನ್ನು ಘಟಕದ ಪರವಾಗಿ ಮಾಜಿ ಅಧ್ಯಕ್ಷ ನವೀನ್ ಚಂದ್ರ ಪೂಜಾರಿ ಪುಷ್ಪ ನೀಡಿ ಸ್ವಾಗತಿಸಿದರು.
ವ್ಯಕ್ತಿತ್ವ ವಿಕಸನ ನಿರ್ದೇಶಕ ಶ್ರೀಕಾಂತ್ ಅಂಚನ್ ಗುರುಸಂದೇಶ ನೀಡಿದರು. ಕಾರ್ಯದರ್ಶಿ ಉಷಾ ಕೆ. ವರದಿ ವಾಚಿಸಿದರು. ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕೋಶಾಧಿಕಾರಿ ಚಂದ್ರಶೇಖರ್ ಕಿನ್ನಿಗೋಳಿ ಧನ್ಯವಾದ ಸಲ್ಲಿಸಿದರು. ಲೋಕಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.






