ಕೊಲ್ಯ, ಸೆ. 13: ಇಂದು ಸಮಸ್ತ ಜಗತ್ತು ಮೊಬೈಲ್ ಯುಗದಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ, ಕುಟುಂಬದ ಸದಸ್ಯರ ನಡುವಿನ ಸಂಬಂಧಗಳು ಸಡಿಲವಾಗುತ್ತಿರುವುದು ಹಾಗೂ ಮಕ್ಕಳು, ಹಿರಿಯರು ಸೇರಿದಂತೆ ಬಹುತೇಕರು ಹೆಚ್ಚಿನ ಸಮಯವನ್ನು ಮೊಬೈಲ್ನಲ್ಲೇ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಕೊಲ್ಯ ಘಟಕವು ಗೌರಿ ಹಬ್ಬದ ಪ್ರಯುಕ್ತ ‘ಮೊಬೈಲ್ ಉಪವಾಸ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ಸೆ. 13ರಂದು ಭಾನುವಾರ ಬೆಳಗ್ಗೆ 7ರಿಂದ ಸಂಜೆ 7ರವರೆಗೆ 12 ಗಂಟೆಗಳ ಕಾಲ ಮೊಬೈಲ್ ಬಳಕೆಯಿಂದ ದೂರವಿರುವಂತೆ ಘಟಕದ ಸದಸ್ಯರು ಹಾಗೂ ಅವರ ಕುಟುಂಬದವರಿಗೆ ಕರೆ ನೀಡಲಾಗಿತ್ತು. ಅತ್ಯಂತ ತುರ್ತು ಕರೆಗಳನ್ನು ಹೊರತುಪಡಿಸಿ ಮೊಬೈಲ್, ಅಂತರ್ಜಾಲ ಹಾಗೂ ವಾಟ್ಸ್ಆ್ಯಪ್ ಬಳಕೆ ಮಾಡದಂತೆ ಸೂಚಿಸಲಾಗಿತ್ತು.
ರಜಾ ದಿನವನ್ನು ಕುಟುಂಬದವರೊಂದಿಗೆ ಕಳೆಯುವುದು, ಪುಸ್ತಕ ಓದುವುದು, ಪರಿಸರ ಸ್ವಚ್ಛಗೊಳಿಸುವುದು, ಮಕ್ಕಳೊಂದಿಗೆ ಸಮಯ ಕಳೆಯುವುದು, ಕಥೆ–ಕವನ ಬರೆಯುವುದು, ಮನೆಯ ತೋಟದ ಆರೈಕೆ ಸೇರಿದಂತೆ ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಕಾರ್ಯಕ್ರಮ ಪ್ರೇರಣೆಯಾಯಿತು.
ಘಟಕದ ಹೆಚ್ಚಿನ ಸದಸ್ಯರು ಉತ್ಸಾಹದಿಂದ ‘ಮೊಬೈಲ್ ಉಪವಾಸ’ದಲ್ಲಿ ಭಾಗವಹಿಸಿದರು. “ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಯಿತು. ಹಲವು ವರ್ಷಗಳ ಬಳಿಕ ಪುಸ್ತಕ ಓದಲು ಅವಕಾಶ ದೊರೆಯಿತು. ಮನೆಯ ತೋಟದ ಆರೈಕೆಗೆ ಸಮಯ ಸಿಕ್ಕಿತು. ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಲು ಸಾಧ್ಯವಾಯಿತು” ಎಂದು ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.
ಮೊಬೈಲ್ನಿಂದ ಸ್ವಲ್ಪ ಸಮಯ ದೂರವಿರುವುದರಿಂದ ಮನಸ್ಸು, ದೇಹ ಹಾಗೂ ಕುಟುಂಬದ ನಡುವಿನ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಲು ಸಹಕಾರಿಯಾಗುತ್ತದೆ. ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ ಇಂತಹ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಮನಸ್ಸಿಗೆ ಉಲ್ಲಾಸ ದೊರೆಯುವುದರ ಜೊತೆಗೆ, ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಸಿಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಅವರು ಧನ್ಯವಾದ ಸಲ್ಲಿಸಿದರು. ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಇಂತಹ ಆರೋಗ್ಯಕರ ಹಾಗೂ ಕುಟುಂಬಸ್ನೇಹಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.






