ಮಾಣಿ, ಸೆ. 3: ನಾರಾಯಣ ಗುರುಗಳ ತತ್ವ ಹಾಗೂ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಂಡಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮದ ಅಂಗವಾಗಿ ದೇರಣ್ಣ ಪೂಜಾರಿ ಹಾಗೂ ಶಮಿತಾ ದೇರಣ್ಣ ಪೂಜಾರಿ ಅವರ ಮನೆಯಲ್ಲಿ ಭಜನೆ, ಸಂಕೀರ್ತನೆ ಹಾಗೂ ಗುರುತತ್ವ ಸಂದೇಶ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ರೇಣುಕಾ ಕಣಿಯೂರು ಅವರು, “ನಾರಾಯಣ ಗುರುಗಳು ಮರೆಯಾದರೂ, ಅವರ ತತ್ವಸಂದೇಶಗಳು ಇಂದಿಗೂ ಜೀವಂತವಾಗಿವೆ. ಅವರು ಸಮಾಜದಲ್ಲಿ ಸಮಾನತೆ, ಮಾನವೀಯತೆ, ಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿಗೆ ಮಹತ್ವ ನೀಡಿದ್ದರು. ಮನುಷ್ಯರನ್ನು ಜಾತಿ, ಧರ್ಮದ ಆಧಾರದ ಮೇಲೆ ವಿಭಜಿಸದೆ, ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು ಎಂಬ ಸಂದೇಶವನ್ನು ಗುರುಗಳು ಸಾರಿದರು” ಎಂದರು.
“ನಾರಾಯಣ ಗುರುಗಳ ತತ್ವಗಳು ಕೇವಲ ಪುಸ್ತಕಗಳಲ್ಲೇ ಉಳಿಯದೆ, ನಮ್ಮ ಜೀವನದ ನಡೆ-ನುಡಿಗಳಲ್ಲಿ ಅಳವಡಿಕೆಯಾಗಬೇಕು. ಇಂದಿನ ಯುವಜನತೆ ಗುರುಗಳ ಆದರ್ಶಗಳನ್ನು ಅರಿತುಕೊಂಡು ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣರಾಗಬೇಕು. ಮನೆ ಮನೆಗೆ ತೆರಳಿ ಗುರುತತ್ವದ ಸಂದೇಶವನ್ನು ತಲುಪಿಸುವ ಈ ಕಾರ್ಯಕ್ರಮ ಕೇವಲ ಒಂದು ಕಾರ್ಯಕ್ರಮವಲ್ಲ; ಪ್ರತಿಯೊಂದು ಕುಟುಂಬದಲ್ಲೂ ಗುರುಗಳ ಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಮಹತ್ವದ ಪ್ರಯತ್ನವಾಗಿದೆ. ಭಜನೆ, ಸಂಕೀರ್ತನೆ ಹಾಗೂ ಗುರುತತ್ವದ ವಿಚಾರಗಳ ಮೂಲಕ ಕುಟುಂಬಗಳನ್ನು ಒಗ್ಗೂಡಿಸುವುದರೊಂದಿಗೆ ಸಮಾಜದಲ್ಲಿ ಉತ್ತಮ ಚಿಂತನೆ ಬೆಳೆಸುವ ಕಾರ್ಯ ಇದಾಗಿದೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಅವರು, ನಾರಾಯಣ ಗುರುಗಳ ತತ್ವ ಹಾಗೂ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರು ಸ್ವಾಗತಿಸಿದರು. ಕಾರ್ಯದರ್ಶಿ ವಂದಿಸಿದರು. ಕೋಶಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು.






