ಶಕ್ತಿನಗರ ಅಗಸ್ಟ್ 29 : ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿಯ ಅಂಗವಾಗಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.), ಕುಂಟಲ್ಪಾಡಿ ಹಾಗೂ ಯುವವಾಹಿನಿ (ರಿ.) ಶಕ್ತಿನಗರ ಘಟಕದ ಸಹಯೋಗದಲ್ಲಿ ಆಗಸ್ಟ್ 29ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜನ್ಮ ಜಯಂತಿ ಮಹೋತ್ಸವ ಹಾಗೂ ಬೃಹತ್ ಶೋಭಾಯಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಮುಂಜಾನೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗಣಹೋಮ ನೆರವೇರಿಸಿ ಮಂದಿರವನ್ನು ಶುದ್ಧೀಕರಿಸಲಾಯಿತು. ಬಳಿಕ ಗುರುಗಳ ಪಂಚಲೋಹದ ಮೂರ್ತಿಗೆ ವಿಶೇಷ ಅಭಿಷೇಕ ಹಾಗೂ ಗುರುಪೂಜೆ ನೆರವೇರಿಸಿ, ಪುಷ್ಪಾಲಂಕಾರ ಮಾಡಲಾಯಿತು.
ನಂತರ ಗುರುಗಳ ಮೂರ್ತಿಯನ್ನು ಮಂದಿರದ ಸದಸ್ಯೆ ಲೀಲಾವತಿ ಕಕ್ಕೆಬೆಟ್ಟು ಅವರ ಮನೆಯಲ್ಲಿ ಪ್ರತಿಷ್ಠಾಪಿಸಿ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ.), ಕುಂಟಲ್ಪಾಡಿ ಹಾಗೂ ಮಹಾಕಾಳಿ ಭಜನಾ ಮಂಡಳಿಯ ಭಜನಾ ತಂಡದಿಂದ ಭಜನೆ, ಸತ್ಸಂಗ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಗುರುಪೂಜೆಯ ಬಳಿಕ ಗುರುಗಳ ಮೂರ್ತಿಯನ್ನು ಭಕ್ತಿಭಾವದಿಂದ ಶೋಭಾಯಾತ್ರೆಗೆ ಕೊಂಡೊಯ್ಯಲಾಯಿತು.
ಚೆಂಡೆ, ತಾಳ ಹಾಗೂ ಮಕ್ಕಳ ಕುಣಿತ ಭಜನೆಯೊಂದಿಗೆ ಸಾಗಿದ ಬೃಹತ್ ಶೋಭಾಯಾತ್ರೆ ಕಕ್ಕೆಬೆಟ್ಟುವಿನಿಂದ ಮಹಾಕಾಳಿ, ಮುತ್ತಪ್ಪ ಗುಡಿ, ರಾಮಾಶಕ್ತಿ ಮಿಷನ್, ನಾಲ್ಯಪದವು ಶ್ರೀಕೃಷ್ಣ ಭಜನಾ ಮಂದಿರ ರಸ್ತೆಯ ಮೂಲಕ ಕುಂಟಲ್ಪಾಡಿಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ತಲುಪಿತು. ಜಾತಿ, ಮತ, ಧರ್ಮದ ಭೇದಭಾವಗಳನ್ನು ಮರೆತು ನೂರಾರು ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿ, “ಒಂದೇ ಜಾತಿ, ಒಂದೇ ಮತ” ಎಂಬ ಗುರು ಸಂದೇಶವನ್ನು ಘೋಷಣೆಗಳ ಮೂಲಕ ಸಾರಿದರು.
ಶೋಭಾಯಾತ್ರೆಯ ಬಳಿಕ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಜನಾ ಸೇವೆ ಸಲ್ಲಿಸಿದ ಶ್ರೀ ಚಂಡ ಚಾಮುಂಡೇಶ್ವರಿ ಭಜನಾ ಮಂಡಳಿ, ಬೊಲ್ಪುಗುಡ್ಡೆ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಬಳಿಕ ಗುರುಪೂಜೆ ಹಾಗೂ ಮಹಾಪೂಜೆ ನೆರವೇರಿಸಿ ಭಕ್ತರು ಗುರುಗಳ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ನಿಕಟಪೂರ್ವ ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಕೇಂದ್ರ ಸಮಿತಿಯ ಸಲಹೆಗಾರರು, ಮಾಜಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಹರೀಶ್ ಪೂಜಾರಿ ಕೊಣಾಜೆ, ಹರೀಶ್ ಪಚ್ಚನಾಡಿ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ.), ಕುಂಟಲ್ಪಾಡಿಯ ಅಧ್ಯಕ್ಷ ತುಕಾರಾಂ ಪೂಜಾರಿ ಹಾಗೂ ಯುವವಾಹಿನಿ (ರಿ.) ಶಕ್ತಿನಗರ ಘಟಕದ ಅಧ್ಯಕ್ಷ ತೇಜಸ್ ವಿ. ಪೂಜಾರಿ ಸೇರಿದಂತೆ ಟ್ರಸ್ಟ್ ಹಾಗೂ ಘಟಕದ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸಮಾರೋಪದಲ್ಲಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಗುರುಗಳ ಪ್ರಸಾದ ವಿತರಿಸಿ, ಅನ್ನಸಂತರ್ಪಣೆ ನೆರವೇರಿಸಲಾಯಿತು. ಭಕ್ತಿಭಾವ, ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.


