ಕೊಲ್ಯ ಅಗಸ್ಟ್ 29 : ರೋಟರಿ ಸಮುದಾಯ ದಳ, ಕೊಲ್ಯ–ಸೋಮೇಶ್ವರದ ಆಶ್ರಯದಲ್ಲಿ, ರೋಟರಿ ಕ್ಲಬ್ ಮಂಗಳೂರು ಪೂರ್ವ, ಬಿಲ್ಲವ ಸೇವಾ ಸಮಾಜ ಟ್ರಸ್ಟ್, ಯುವವಾಹಿನಿ (ರಿ.) ಕೊಲ್ಯ ಘಟಕ ಹಾಗೂ ಜರ್ನಿ ಥಿಯೇಟರ್ ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮವು ಆಗಸ್ಟ್ 29ರಂದು ಕೊಲ್ಯ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಸಂಭ್ರಮದಿಂದ ನಡೆಯಿತು.

ಕರ್ನಾಟಕ ರಾಜ್ಯೋತ್ಸವ ಹಾಗೂ ಶಾಂತಲಾ ನಾಟ್ಯ ಪುರಸ್ಕೃತ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಭಾರತೀಯ ನೃತ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಗುಣವನ್ನು ಯುವಕರು ಬೆಳೆಸಿಕೊಳ್ಳಬೇಕು. ರೋಟರಿ ಸಮುದಾಯ ದಳ ಹಾಗೂ ಯುವವಾಹಿನಿ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ” ಎಂದರು.
ಬಳಿಕ ಮಂಗಳೂರಿನ ನಾದ ನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಅಂಡ್ ಕಲ್ಚರಲ್ ಟ್ರಸ್ಟ್ನ ಡಾ. ಬ್ರಾಹ್ಮರಿ ಶಿವಪ್ರಕಾಶ್ ಅವರ ನಿರ್ದೇಶನದಲ್ಲಿ ಕುಮಾರಿ ಚಿನ್ಮಯಿ ಕೋಟ್ಯಾನ್ ಅವರಿಂದ ಮನೋಜ್ಞ ಭರತನಾಟ್ಯ ಪ್ರದರ್ಶನ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮಂಗಳೂರು ಪೂರ್ವದ ಮಾಜಿ ಅಧ್ಯಕ್ಷರಾದ ರೊ. ಆನಂದ ಶೆಟ್ಟಿ, ಕಾರ್ಯದರ್ಶಿ ರೊ. ಪ್ರಮೋದ್ ಪ್ರಭು, ಆರ್ಸಿಸಿ ಚೇರ್ಮನ್ ರೊ. ಗೋಪಾಲ ಶೆಟ್ಟಿ, ವೈಸ್ ಚೇರ್ಮನ್ ರೊ. ಜೈ ಕುಮಾರ್, ರೋಟರಿ ಸಮುದಾಯ ದಳ ಕೊಲ್ಯ–ಸೋಮೇಶ್ವರದ ಅಧ್ಯಕ್ಷರಾದ ಸೀತಾರಾಮ ಕರ್ಕೇರ, ಕಾರ್ಯದರ್ಶಿ ಜಯದೇವ್, ಆರ್ಸಿಸಿ ಜಿಲ್ಲಾ ಪ್ರತಿನಿಧಿ ಆನಂದ್ ಎಂ. ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷರಾದ ಜೀವನ್ ಕಾಸಿಂಬೆಟ್ಟು ಉಪಸ್ಥಿತರಿದ್ದರು.
ಅತಿಥಿಗಳ ಪ್ರತಿನಿಧಿಯಾಗಿ ಮಾತನಾಡಿದ ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷರಾದ ಜೀವನ್ ಕಾಸಿಂಬೆಟ್ಟು ಅವರು, “ಯುವವಾಹಿನಿ ಹಾಗೂ ರೋಟರಿ ಸಮುದಾಯ ದಳ ಹಲವು ವರ್ಷಗಳಿಂದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕೊಲ್ಯ ಪರಿಸರದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿವೆ. ಬಿಲ್ಲವ ಸೇವಾ ಸಮಾಜದ ಆಶ್ರಯದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳಿಗೆ ಸಮಾಜದ ಸರ್ವರೂ ಬೆಂಬಲವಾಗಿ ನಿಲ್ಲಬೇಕು” ಎಂದರು.
ಈ ಸಂದರ್ಭದಲ್ಲಿ ಪ್ರತಿವರ್ಷ ನೀಡಲಾಗುವ ರೋಟರಿ ಸಮುದಾಯ ಪುರಸ್ಕಾರವನ್ನು ಗಣನೀಯ ಸೇವೆ ಸಲ್ಲಿಸಿದ ರಕ್ಷಿತ್ ಜೆ. ಹಾಗೂ ಯುವವಾಹಿನಿ ಸದಸ್ಯರಾದ ಡಾ. ಅನ್ವಿತಾ ಎ. (ಪಿಟಿ) ಅವರಿಗೆ ನೀಡಿ ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರು ವಿದ್ಯಾರ್ಥಿಗಳಿಗೆ ರೋಟರಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಬಳಿಕ ಮಂಗಳೂರಿನ ಜರ್ನಿ ಥಿಯೇಟರ್ ತಂಡದ ವತಿಯಿಂದ ಸುನಿಲ್ ಪಲ್ಲಮಜಲು ಅವರ ನಿರ್ದೇಶನದಲ್ಲಿ ‘ರಾಮಾಂಜನೇಯ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಿತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಯಕ್ಷಗಾನ ಪ್ರದರ್ಶನವು ಕಲಾಭಿಮಾನಿಗಳ ಮನಸೂರೆಗೊಂಡಿತು. ಯುವವಾಹಿನಿ (ರಿ.) ಕೊಲ್ಯ ಘಟಕದ ಮಾಜಿ ಅಧ್ಯಕ್ಷರಾದ ಕುಸುಮಾಕರ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.


