ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರುಇದರ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಾಣಿ ಘಟಕದ ಆತಿಥ್ಯದಲ್ಲಿ, B.E.W.S. (R.), ಮಂಗಳೂರು ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಯುವ ದಿಕ್ಸೂಚಿ–2026 – ಕನಸುಗಳಿಗೆ ರೆಕ್ಕೆ, ಭವಿಷ್ಯಕ್ಕೆ ದಿಕ್ಕು” ಎಂಬ ಮೂರು ದಿನಗಳ IBPS ಬ್ಯಾಂಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ತರಬೇತಿ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಆಗಸ್ಟ್ 24ರಿಂದ 26ರವರೆಗೆ ಮಂಗಳೂರಿನ ಲಾಲ್ಬಾಗ್ನಲ್ಲಿರುವ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಆಗಸ್ಟ್ 24ರಂದು ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್. ಉದ್ಘಾಟಿಸಿದರು. ಮಾಣಿ ಘಟಕದ ಅಧ್ಯಕ್ಷರು ಗಣೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮೂರು ದಿನಗಳ ತರಬೇತಿಯಲ್ಲಿ ಬೆಂಗಳೂರಿನ ಖ್ಯಾತ ಬ್ಯಾಂಕಿಂಗ್ ತರಬೇತುದಾರ ಹಾಗೂ ವೃತ್ತಿ ಮಾರ್ಗದರ್ಶಕರಾದ ಆರ್.ಕೆ. ಬಾಲಚಂದ್ರ ಚಿಕ್ಕಮಗಳೂರು ಅವರು Quantitative Aptitude, Reasoning, English, General Awareness ಹಾಗೂ Interview Skills ಸೇರಿದಂತೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಆಳವಾದ ಹಾಗೂ ಪ್ರಾಯೋಗಿಕ ತರಬೇತಿ ನೀಡಿದರು.

ವಿದ್ಯಾರ್ಥಿಗಳ ಅನಿಸಿಕೆ ಹಂಚಿಕೆ ವಿಶೇಷ ಆಕರ್ಷಣೆ
ಆಗಸ್ಟ್ 26ರಂದು ಸಂಜೆ ನಡೆದ ಸಮಾರೋಪ ಸಮಾರಂಭವು ವಿದ್ಯಾರ್ಥಿಗಳ ಅನಿಸಿಕೆ ಹಂಚಿಕೆಯ ಮೂಲಕ ವಿಶೇಷ ಗಮನ ಸೆಳೆಯಿತು. ಯಾವುದೇ ಔಪಚಾರಿಕ ಪ್ರಮಾಣಪತ್ರ ವಿತರಣೆ ನಡೆಸದೆ, ತರಬೇತಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ನೀಡಲಾಯಿತು.
ವಿದ್ಯಾರ್ಥಿಗಳು ಮಾತನಾಡಿ, ಮೂರು ದಿನಗಳ ತರಬೇತಿಯಿಂದ IBPS ಪರೀಕ್ಷೆಯ ಕುರಿತಿದ್ದ ಭಯ ನಿವಾರಣೆಯಾಗಿ ಆತ್ಮವಿಶ್ವಾಸ ಹೆಚ್ಚಾಗಿದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಪ್ರವೇಶಿಸಲು ಅಗತ್ಯವಾದ ನಿಖರ ಮಾರ್ಗದರ್ಶನ ದೊರೆತಿದ್ದು, ಕೇವಲ ಪುಸ್ತಕದ ಜ್ಞಾನವಲ್ಲದೆ ಪರೀಕ್ಷೆ ಎದುರಿಸುವ ತಂತ್ರಗಳನ್ನು ಕಲಿಯಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಯುವವಾಹಿನಿ ಉಚಿತವಾಗಿ ಉತ್ತಮ ಗುಣಮಟ್ಟದ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳ ಅನಿಸಿಕೆಗಳಿಗೆ ಪ್ರತಿಕ್ರಿಯಿಸಿದ ತರಬೇತುದಾರ ಆರ್.ಕೆ. ಬಾಲಚಂದ್ರ ಅವರು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ, ನಿರಂತರ ಅಭ್ಯಾಸ ಮತ್ತು ಶಿಸ್ತುಬದ್ಧ ತಯಾರಿಯೇ ಯಶಸ್ಸಿನ ಪ್ರಮುಖ ಕೀಲಿಕೈ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರಿನ ಅಧ್ಯಕ್ಷರು ಅಶೋಕ್ ಕುಮಾರ್ ಪಡ್ಪು ಮಾತನಾಡಿ, ಯುವವಾಹಿನಿ ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಯುವಕರ ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣದಲ್ಲೂ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗಾಧಾರಿತ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸತತ 3 ದಿನಗಳಿಂದ ತರಬೇತಿಯನ್ನು ನೀಡಿದ ಆರ್.ಕೆ ಬಾಲಚಂದ್ರ ಚಿಕ್ಕಮಗಳೂರು ಹಾಗೂ ಕಾರ್ಯಕ್ರಮದ ಮಾರ್ಗದರ್ಶಕರಾದ ಸುರೇಶ್ ಪಣಂಬೂರು ರವರನ್ನು ಅಭಿನಂದಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಆರ್.ಕೆ. ಬಾಲಚಂದ್ರ ಚಿಕ್ಕಮಗಳೂರು, B.E.W.S. (R.) ಮಂಗಳೂರಿನ ಗೌರವಾಧ್ಯಕ್ಷ ಶ್ರೀಧರ್ ಪೂಜಾರಿ, ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ,ಮಾಜಿ ನಿರ್ದೇಶಕರು, B.S.R.B, ಬೆಂಗಳೂರು ಹಾಗೂ ಕೆನರಾ ಬ್ಯಾಂಕಿನ ನಿವೃತ್ತ ಸೀನಿಯರ್ ಮ್ಯಾನೇಜರ್ ಏಮ್.ಕೆ ಸುಬ್ರಾಯ ಪ್ರಭು,ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಹರೀಶ್ ಬಾಕಿಲ ಹಾಗೂ ಮಾಣಿ ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.
ಯುವವಾಹಿನಿ (ರಿ.) ಮಾಣಿ ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಸ್ವಾಗತಿಸಿದರು,ಕೋಶಾಧಿಕಾರಿ ತ್ರಿವೇಣಿ ರಮೇಶ್ ಮುಜಾಲ ವಂದಿಸಿದರು ಹಾಗೂ ರಾಜೇಶ್ ಬಲ್ಯ ಕಾರ್ಯಕ್ರಮ ನಿರೂಪಿಸಿದರು.


