ಮಂಗಳೂರು ಅಗಸ್ಟ್ 23 : ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಆತಿಥ್ಯದಲ್ಲಿ ನಡೆದ “ಮಾಧವ ಕೀರ್ತನೋತ್ಸವ–2026” ಅಂತರ್ ಘಟಕ ಭಜನಾ ಸ್ಪರ್ಧೆಯು ಅಗಸ್ಟ್ 23ರಂದು ಸಮಾರೋಪ ಸಮಾರಂಭವು ಸಂಜೆ 5.30ಕ್ಕೆ ಗಣ್ಯರು, ಕೇಂದ್ರ ಸಮಿತಿ ಹಾಗೂ ಘಟಕದ ಪದಾಧಿಕಾರಿಗಳು, ತೀರ್ಪುಗಾರರು, ಸ್ಪರ್ಧಾಳುಗಳು ಮತ್ತು ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಸ್ವಾಗತಿಸಿದರು. ಸುರೇಶ್ ಪೂಜಾರಿ ಪಣಂಬೂರು ಅವರು “ಮಾಧವ ಕೀರ್ತನೋತ್ಸವ”ದ ಪ್ರಸ್ತಾವನೆ ಮಂಡಿಸಿ, ಕಾರ್ಯಕ್ರಮದ ಉದ್ದೇಶ ಹಾಗೂ ಭಜನಾ ಪರಂಪರೆಯ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ “ಮಾಧವ ಕೀರ್ತನೋತ್ಸವ ಪ್ರಶಸ್ತಿ”ಗೆ ಆಯ್ಕೆಯಾದ ವಿಜಯ ಕುಕ್ಯಾನ್ ಅವರನ್ನು ಗೌರವಿಸಲಾಯಿತು. ಪಣಂಬೂರು–ಕುಳಾಯಿ ಘಟಕದ ಮಾಜಿ ಅಧ್ಯಕ್ಷೆ ಮನೀಷಾ ರೂಪೇಶ್ ಅವರು ಸನ್ಮಾನಿತರ ಪರಿಚಯ ಮಾಡಿದರು. ಉದ್ಯಮಿ ಶೈಲೇಂದ್ರ ವೈ. ಸುವರ್ಣ ಅವರು ವಿಜಯ ಕುಕ್ಯಾನ್ ಅವರಿಗೆ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು. ಪ್ರಶಸ್ತಿ ಪುರಸ್ಕೃತ ವಿಜಯ ಕುಕ್ಯಾನ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಮುಖ್ಯ ಅತಿಥಿಗಳಾಗಿ ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ, ಮಂಗಳೂರು ಇದರ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಉದ್ಯಮಿ ಶೈಲೇಂದ್ರ ವೈ. ಸುವರ್ಣ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಪ್ರಭಾರ) ಮಿಥುನ್ ಭಾಗವಹಿಸಿ ಮಾತನಾಡಿ, ಯುವವಾಹಿನಿಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾಧವ ಅಂಚನ್ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ಭಜನಾ ಸ್ಪರ್ಧೆಯ ತೀರ್ಪುಗಾರರಾದ ಗುಣವತಿ ಸೋಮೇಶ್ವರ, ಸೋಮಶೇಖರ ಮಯ್ಯ ಹಾಗೂ ಶುಭಕರ್ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಸತೀಶ್ ಕಿಲ್ಪಾಡಿ, ವಿದ್ಯಾ ರಾಕೇಶ್ ಹಾಗೂ ಸುಧಾ ಸುರೇಶ್ ತೀರ್ಪುಗಾರರ ಸಾಧನಾ ಪರಿಚಯವನ್ನು ಸಭೆಯ ಮುಂದಿಟ್ಟರು ತೀರ್ಪುಗಾರರ ಪರವಾಗಿ ಮಾತನಾಡಿದವರು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳ ಉತ್ತಮ ಪ್ರದರ್ಶನವನ್ನು ಪ್ರಶಂಸಿಸಿದರು.

ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷೀಯ ಮಾತುಗಳನ್ನಾಡಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿದರು.
22 ಘಟಕಗಳ ಭಾಗವಹಿಸುವಿಕೆ“ಮಾಧವ ಕೀರ್ತನೋತ್ಸವ–2026” ಅಂತರ್ ಘಟಕ ಭಜನಾ ಸ್ಪರ್ಧೆಯಲ್ಲಿ ಯುವವಾಹಿನಿಯ 22 ಘಟಕಗಳು ಭಾಗವಹಿಸಿದ್ದವು. ಭಕ್ತಿ, ಸಂಗೀತ ಹಾಗೂ ಸಾಂಸ್ಕೃತಿಕ ಸೊಬಗಿನಿಂದ ಕೂಡಿದ ಭಜನಾ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು.
ಬಹುಮಾನ ವಿಜೇತರು
ಪ್ರಥಮ ಬಹುಮಾನ: ಬಂಟ್ವಾಳ ಘಟಕ
ದ್ವಿತೀಯ ಬಹುಮಾನ: ಗ್ರಾಮ ಚಾವಡಿ–ಕೊಣಾಜೆ ಘಟಕ
ತೃತೀಯ ಬಹುಮಾನ: ಸುರತ್ಕಲ್ ಘಟಕ

ತೀರ್ಪುಗಾರರ ಮೆಚ್ಚುಗೆ ಗಳಿಸಿದ ತಂಡಗಳು:
- ಕಾರ್ಕಳ ಘಟಕ
- ಕೂಳೂರು ಘಟಕ
ಅತ್ಯುತ್ತಮ ಶಿಸ್ತು ಪಾಲಿಸಿದ ತಂಡ: ಕಾರ್ಕಳ ಘಟಕ
ಉತ್ತಮ ಭಜಕ: ಕಡಬ ಘಟಕ
ಉತ್ತಮ ಭಜಕಿ: ಬಂಟ್ವಾಳ ಘಟಕ
ಅತ್ಯುತ್ತಮ ತಬಲ ವಾದನ: ಮೂಡುಬಿದ್ರೆ ಘಟಕ
ಅತ್ಯುತ್ತಮ ಹಾರ್ಮೋನಿಯಂ ವಾದನ: ಬಂಟ್ವಾಳ ಘಟಕ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಕಲೆ ಮತ್ತು ಸಾಹಿತ್ಯ ನಿರ್ದೇಶಕ ರಂಜನ್ ಕೆ. ಕೋಟ್ಯಾನ್ ಧನ್ಯವಾದ ಸಮರ್ಪಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಗಣ್ಯರು, ಕೇಂದ್ರ ಸಮಿತಿ ಹಾಗೂ ಘಟಕದ ಪದಾಧಿಕಾರಿಗಳು, ತೀರ್ಪುಗಾರರು, ಸ್ಪರ್ಧಾಳುಗಳು, ಪ್ರಾಯೋಜಕರು, ಕಾರ್ಯಕರ್ತರು ಹಾಗೂ ಸಹೃದಯರಿಗೆ ಕೃತಜ್ಞತೆ ಸಲ್ಲಿಸಿದರು. ಭಕ್ತಿ, ಸಂಗೀತ, ಸಂಸ್ಕೃತಿ ಹಾಗೂ ಸಂಘಟನೆಯ ಒಗ್ಗಟ್ಟಿನ ಸಮ್ಮಿಲನವಾಗಿ ಮೂಡಿಬಂದ “ಮಾಧವ ಕೀರ್ತನೋತ್ಸವ–2026” ಅಂತರ್ ಘಟಕ ಭಜನಾ ಸ್ಪರ್ಧೆಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.



