ಮಂಗಳೂರು: ಸಮಾಜದಲ್ಲಿ ವ್ಯವಸ್ಥಿತವಾಗಿ ಬದುಕಲು ಉದ್ಯೋಗದ ಅಗತ್ಯವಿದೆ. ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಲು ಉತ್ತಮ ಅವಕಾಶಗಳು ದೊರೆತಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮದ ಉದ್ಘಾಟಕಿ ಚಂದ್ರಿಕಾ ಎಸ್. ನಾಯಕ್ ಹೇಳಿದರು. ಅವರು ಆ. 24ರಂದು ಸೋಮವಾರ ಬೆಳಿಗ್ಗೆ 10.30ಕ್ಕೆ ಉರ್ವ ಸ್ಟೋರ್ನ ರಘು ಬಿಲ್ಡಿಂಗ್ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಆಯೋಜಿಸಲಾದ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (CEDOK), ಮಂಗಳೂರು ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ CEDOK, ಮಂಗಳೂರು ಇದರ ಉಪನಿರ್ದೇಶಕ ಶಿವಾನಂದ ಯೆಲಿಗಾರ್ ಮಾತನಾಡಿ, ಸ್ವಾವಲಂಬನೆ ಹಾಗೂ ಸ್ವಂತ ಉದ್ಯೋಗದ ಪರಿಕಲ್ಪನೆಯನ್ನು ಉತ್ತೇಜಿಸುವ ಉದ್ದೇಶದಿಂದ ವರ್ಷದಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸ್ವಂತ ಉದ್ಯೋಗದತ್ತ ಹೆಜ್ಜೆ ಇಡಬೇಕು ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಮಾತನಾಡಿ, ಉದ್ಯಮಿಯಾಗಲು ಆರ್ಥಿಕ ಸಂಪನ್ಮೂಲ ಎಷ್ಟು ಮುಖ್ಯವೋ, ಪ್ರತಿಭೆ, ಕೌಶಲ್ಯ ಮತ್ತು ಪರಿಶ್ರಮವೂ ಅಷ್ಟೇ ಅಗತ್ಯ. ಅಮೆಜಾನ್, ಇನ್ಫೋಸಿಸ್ನಂತಹ ಹಲವು ದೊಡ್ಡ ಸಂಸ್ಥೆಗಳು ಸಣ್ಣ ಮಟ್ಟದಿಂದ ಆರಂಭವಾಗಿ ಇಂದು ಬೃಹತ್ ಉದ್ಯಮಗಳಾಗಿ ಬೆಳೆದಿವೆ. ಸಮಯದ ಮಹತ್ವವನ್ನು ಅರಿತು ಉತ್ತಮ ಗುಣಮಟ್ಟದ ಉದ್ಯಮದಲ್ಲಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ವಿ ಉದ್ಯಮಿಗಳಾಗಬಹುದು ಎಂದು ಹೇಳಿದರು.
ಮತ್ತೋರ್ವ ಅತಿಥಿ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಯಶಸ್ವಿ ಉದ್ಯಮಿಯಾಗುವ ಮಾರ್ಗಗಳು, ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆಯುವ ವಿಧಾನ ಹಾಗೂ ಉದ್ಯಮದಲ್ಲಿ ಹಣಕಾಸು ನಿರ್ವಹಣೆ ಮತ್ತು ಮಾರುಕಟ್ಟೆಯ ಅಗತ್ಯತೆಗಳ ಕುರಿತು ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ ಸವಿತಾ ಕೋಟ್ಯಾನ್ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಕಾರ್ಯದರ್ಶಿ ಉಷಾ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕಿ ಸವಿತಾ ಕೋಟ್ಯಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. CEDOK ಸಂಸ್ಥೆಯ ಪ್ರವೀಶಾ ಕುಕ್ಯಾನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಧನ್ಯವಾದ ಸಲ್ಲಿಸಿದರು.
ಹತ್ತು ದಿನಗಳ ಈ ತರಬೇತಿ ಕಾರ್ಯಾಗಾರವು ಉದ್ಯಮಶೀಲತೆಯ ಬಗ್ಗೆ ಅರಿವು ಮೂಡಿಸುವುದರೊಂದಿಗೆ, ಸ್ವಂತ ಉದ್ಯೋಗ ಆರಂಭಿಸಲು ಅಗತ್ಯವಾದ ಕೌಶಲ್ಯ, ಹಣಕಾಸು ನಿರ್ವಹಣೆ, ಸಾಲ ಸೌಲಭ್ಯ ಹಾಗೂ ಮಾರುಕಟ್ಟೆ ವ್ಯವಸ್ಥೆಯ ಕುರಿತು ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿದೆ.


