ಧರ್ಮಸ್ಥಳ ಅಗಸ್ಟ್ 24: ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಮಹಿಳಾ ನಿರ್ದೇಶಕರಾದ ಶ್ರೀಮತಿ ವೇದ ಪ್ರಭಾಕರ್ ಅವರ ಪತಿಯವರು ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ದಿನಾಂಕ 24.08.2026ರಂದು ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವು ಹಾಗೂ ನೈತಿಕ ಸ್ಥೈರ್ಯ ನೀಡುವ ಉದ್ದೇಶದಿಂದ, ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ವತಿಯಿಂದ ₹10,000/- (ಹತ್ತು ಸಾವಿರ ರೂಪಾಯಿ) ಸಾಂತ್ವನ ನಿಧಿಯನ್ನು ಘಟಕದ ಅಧ್ಯಕ್ಷರಾದ ಲೀಲಾವತಿ ಪಣಕಜೆ ಅವರು ಕುಟುಂಬದವರಿಗೆ ಹಸ್ತಾಂತರಿಸಿದರು. ಅಪಘಾತದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದೊಂದಿಗೆ ಯುವವಾಹಿನಿ ಪರಿವಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಲಾಯಿತು. ಗಾಯಾಳು ಶೀಘ್ರ ಗುಣಮುಖರಾಗಿ ಸಂಪೂರ್ಣ ಆರೋಗ್ಯ ಹೊಂದಲಿ ಎಂದು ಹಾರೈಸಿ, ಕುಟುಂಬದವರಿಗೆ ಧೈರ್ಯ ತುಂಬಲಾಯಿತು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


