ಕೊಲ್ಯ ಅಗಸ್ಟ್ 23: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಪ್ರಯುಕ್ತ ಉಳ್ಳಾಲ ವಲಯದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಆ. 23ರಂದು ಕೊಲ್ಯ ನಾರಾಯಣ ಗುರು ಸಭಾಗೃಹದಲ್ಲಿ ಸಂಭ್ರಮದಿಂದ ನಡೆಯಿತು. ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಇದರ ಆಶ್ರಯದಲ್ಲಿ, ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ ಇದರ ಸಹಭಾಗಿತ್ವದಲ್ಲಿ ಹಾಗೂ ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ ಮತ್ತು ಯುವವಾಹಿನಿ (ರಿ.) ಕೊಲ್ಯ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗಾನ ಸರಸ್ವತಿ ಸಂಗೀತ ವಿದ್ಯಾಲಯ, ಕೊಲ್ಯ ಇದರ ನಿರ್ದೇಶಕಿ ಹಾಗೂ ನೃತ್ಯ ಶಿರೋಮಣಿ ಲಾವಣ್ಯ ಸುಧಾಕರ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ನಾರಾಯಣ ಗುರುಗಳ ತತ್ವದಂತೆ ವಿವಿಧ ಜಾತಿ, ಧರ್ಮದ ಜನರು ಸ್ಪರ್ಧೆಯ ನೆಪದಲ್ಲಿ ಒಂದೇ ವೇದಿಕೆಯಲ್ಲಿ ಸೇರಿರುವುದು ಸಂತಸದ ಸಂಗತಿ. ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ. ಮಕ್ಕಳು ನಾರಾಯಣ ಗುರುಗಳ ಜೀವನ ಮತ್ತು ತತ್ವಗಳನ್ನು ಅರಿತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಸೋಲು-ಗೆಲುವಿನ ಬಗ್ಗೆ ಚಿಂತಿಸದೆ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು” ಎಂದು ಹಿತವಚನ ನೀಡಿದರು.
ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಇದರ ಅಧ್ಯಕ್ಷ ಶೇಷಪ್ಪ ಬೈದ್ಯಮನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಇದರ ಗೌರವಾಧ್ಯಕ್ಷ ಈಶ್ವರ ಕಣೀರುತೋಟ, ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ ಇದರ ಅಧ್ಯಕ್ಷ ಗೋಪಾಲ್ ಕೊಂಡಾಣ, ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ ಇದರ ಅಧ್ಯಕ್ಷೆ ತ್ರಿವೇಣಿ ಕುಂಪಲ ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಪರ್ಧೆಯ ತೀರ್ಪುಗಾರರಾದ ಲಕ್ಷ್ಮೀ ವಿ. ಭಟ್, ಮಂಜೇಶ್ವರ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಮಂಗಳೂರು ಹಾಗೂ ರಾಜೇಶ್ ಬಲ್ಯ, ಮಾಣಿ ಅವರನ್ನು ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು. ಅಂಗನವಾಡಿ, LKG, UKG, ಕಿರಿಯ ಹಾಗೂ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಂಗೀತ, ಭಾಷಣ, ಚಿತ್ರಕಲೆ, ಪ್ರಬಂಧ, ರಂಗವಲ್ಲಿ, ಛದ್ಮವೇಷ ಹಾಗೂ ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಉಳ್ಳಾಲ ವಲಯದ ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ ಹಾಗೂ ಸ್ಪರ್ಧಾ ಸ್ಫೂರ್ತಿಯಿಂದ ಭಾಗವಹಿಸಿದರು.
LKG, UKG ಹಾಗೂ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ಛದ್ಮವೇಷ ಸ್ಪರ್ಧೆ ವಿಶೇಷವಾಗಿ ಗಮನ ಸೆಳೆಯಿತು. ಪುಟಾಣಿಗಳ ವಿಭಿನ್ನ ವೇಷಭೂಷಣ ಹಾಗೂ ಆತ್ಮವಿಶ್ವಾಸದ ಪ್ರದರ್ಶನ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಶಾಲಾ ಮಕ್ಕಳಲ್ಲಿದ್ದ ಸ್ಪರ್ಧಾ ಸ್ಫೂರ್ತಿಯನ್ನು ತೀರ್ಪುಗಾರರು ತುಂಬುಹೃದಯದಿಂದ ಕೊಂಡಾಡಿದರು. ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ ಇದರ ಮಾಜಿ ಅಧ್ಯಕ್ಷೆ ರೇವತಿ ವಿಶ್ವನಾಥ್ ಕುಂಪಲ ಪ್ರಾರ್ಥನೆ ನೆರವೇರಿಸಿದರು. ಕೋಶಾಧಿಕಾರಿ ಲವಿತಾ ಯತೀಶ್ ಸ್ವಾಗತಿಸಿದರು. ಕಾರ್ಯದರ್ಶಿ ಜಯಶ್ರೀ ನಾಗರಾಜ್ ಧನ್ಯವಾದ ಸಮರ್ಪಿಸಿದರು.
ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ ಇದರ ಸಾಂಸ್ಕೃತಿಕ ಸಂಚಾಲಕ ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಲತೀಶ್ ಎಂ. ಸಂಕೊಳಿಗೆ ಕಾರ್ಯಕ್ರಮ ನಿರೂಪಿಸಿದರು. ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.), ಬಿಲ್ಲವ ಸೇವಾ ಸಮಾಜ (ರಿ.), ನಾರಾಯಣ ಗುರು ಮಹಿಳಾ ಮಂಡಳಿ ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಏಕತೆ, ಸಮಾನತೆ ಹಾಗೂ ಮಾನವೀಯತೆಯ ತತ್ವಗಳನ್ನು ಸಾರುವ ಉದ್ದೇಶದಿಂದ ಆಯೋಜಿಸಲಾದ ಈ ಸಾಂಸ್ಕೃತಿಕ ಸ್ಪರ್ಧೆಯು ನಾರಾಯಣ ಗುರು ಜಯಂತಿ ಆಚರಣೆಯನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿತು.


