ಮಂಗಳೂರು ಅಗಸ್ಟ್ 21: “ಕ್ಯಾನ್ಸರ್ ರೋಗಕ್ಕೆ ಭಯಪಡುವ ಅಗತ್ಯವಿಲ್ಲ. ಆರಂಭದ ಹಂತದಲ್ಲಿಯೇ ರೋಗವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಲು ಸಾಧ್ಯ. ದೇಹದಲ್ಲಿ ಯಾವುದೇ ಅಸಹಜ ಬದಲಾವಣೆ ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು” ಎಂದು ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಕ್ಯಾನ್ಸರ್ ವಿಭಾಗದ ಸಲಹೆಗಾರ್ತಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸದಸ್ಯೆ ಮಮತಾ ಸುವರ್ಣ ಹೇಳಿದರು.

ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆ.21ರಂದು ಆಯೋಜಿಸಲಾದ ಕ್ಯಾನ್ಸರ್ ರೋಗದ ಮಾಹಿತಿ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಕ್ಯಾನ್ಸರ್ನ ವಿವಿಧ ವಿಧಗಳು, ಲಕ್ಷಣಗಳು, ಆರಂಭಿಕ ಹಂತದಲ್ಲಿ ಪತ್ತೆಹಚ್ಚುವ ವಿಧಾನಗಳು, ಚಿಕಿತ್ಸಾ ಕ್ರಮಗಳು ಹಾಗೂ ಕ್ಯಾನ್ಸರ್ ತಡೆಗಟ್ಟುವ ಕುರಿತು ಮಾಹಿತಿ ನೀಡಿದರು.
ಕ್ಯಾನ್ಸರ್ನ ಆರಂಭಿಕ ಹಂತದಲ್ಲಿ ಸಾಮಾನ್ಯವಾಗಿ ಯಾವುದೇ ನೋವು ಕಾಣಿಸಿಕೊಳ್ಳದಿರುವುದರಿಂದ ದೇಹದಲ್ಲಿ ಕಂಡುಬರುವ ಅಸಹಜ ಬದಲಾವಣೆಗಳನ್ನು ನಿರ್ಲಕ್ಷಿಸಬಾರದು. ಮಹಿಳೆಯರು ಹಾಗೂ ಪುರುಷರಲ್ಲಿ ಕಾಣಿಸಿಕೊಳ್ಳಬಹುದಾದ ವಿವಿಧ ರೀತಿಯ ಕ್ಯಾನ್ಸರ್ಗಳ ಕುರಿತು ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಮಮತಾ ಸುವರ್ಣ ಅವರು ಸ್ಪಷ್ಟವಾಗಿ ಉತ್ತರಿಸಿದರು.
ಸದಸ್ಯ ಜಯ್ ಕುಮಾರ್ ಕೊಲ್ಯ ಅವರು ಕ್ಯಾನ್ಸರ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಯಾನ್ಸರ್ ರೋಗವು ವ್ಯಕ್ತಿಯನ್ನು ಮುಟ್ಟುವುದರಿಂದ ಹರಡುವುದಿಲ್ಲ. ಕೆಲವು ಕ್ಯಾನ್ಸರ್ಗಳಲ್ಲಿ ವಂಶವಾಹಿ ಅಂಶಗಳ ಪಾತ್ರವಿರಬಹುದು ಎಂದು ತಿಳಿಸಿದರು. ವಂಶವಾಹಿ ಆಧಾರಿತ ಕ್ಯಾನ್ಸರ್ಗಳಲ್ಲಿ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಹಾಗೂ ಮೆಲನೋಮ ಪ್ರಮುಖವಾದವು ಎಂದು ವಿವರಿಸಿದರು.
ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿದ ಸಂಪನ್ಮೂಲ ವ್ಯಕ್ತಿ ಮಮತಾ ಸುವರ್ಣ ಅವರನ್ನು ಘಟಕದ ವತಿಯಿಂದ ಮಾಜಿ ಅಧ್ಯಕ್ಷ ಹರೀಶ್ ವಿ. ಪಚ್ಚನಾಡಿ ಅವರು ಗೌರವಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಂಜೆ 5.30ರಿಂದ 6.30ರವರೆಗೆ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ 6.30ಕ್ಕೆ ಸದಾನಂದ ಪೂಜಾರಿ ಕುಳಾಯಿ ಅವರು ಗುರುಪೂಜೆ ನೆರವೇರಿಸಿದರು. ಗುರುಪೂಜೆಯ ಸೇವೆ ಹಾಗೂ ಉಪಹಾರದ ವ್ಯವಸ್ಥೆಯನ್ನು ನಿಕಟಪೂರ್ವ ನಾರಾಯಣಗುರು ತತ್ವಾದರ್ಶಗಳ ನಿರ್ದೇಶಕ ಪೂವಪ್ಪ ಕುಕ್ಯಾನ್ ಅವರು ವಹಿಸಿದ್ದರು.
ಸಂಜೆ 7 ಗಂಟೆಗೆ ಗುರುಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಅವರು ಅಧ್ಯಕ್ಷತೆ ವಹಿಸಿ, ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯದರ್ಶಿ ಉಷಾ ಕೆ. ಅವರು ಗತ ಸಭೆಯ ವರದಿ ವಾಚಿಸಿ ಅನುಮೋದನೆ ಪಡೆದರು. ಸದಸ್ಯೆ ನೀತಾ ಅಳಪೆ ಅವರು ಗುರುಸಂದೇಶ ವಾಚಿಸಿದರು. ಮಹಿಳಾ ಸಂಘಟನಾ ನಿರ್ದೇಶಕಿ ಜಯಂತಿ ಕೋಟ್ಯಾನ್ ವಂದಿಸಿದರು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಲೋಕಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


