ಕೊಣಾಜೆ, ಆಗಸ್ಟ್ 15: ಯುವವಾಹಿನಿ (ರಿ.) ಕೊಲ್ಯ ಘಟಕ, ರೋಟರಿ ಕ್ಲಬ್ ಮಂಗಳೂರು ಪೂರ್ವ ಹಾಗೂ ರೋಟರಿ ಸಮುದಾಯ ದಳ ಕೊಲ್ಯ–ಸೋಮೇಶ್ವರ ಇವರ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಕೊಣಾಜೆಯ ಅಭಯ ಆಶ್ರಮ ವೃದ್ಧಾಶ್ರಮದಲ್ಲಿ ಹಿರಿಯರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹಿರಿಯರೊಂದಿಗೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಹಂಚಿಕೊಳ್ಳುವ ಉದ್ದೇಶದಿಂದ ಮೂರು ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬ ಸದಸ್ಯರು ಆಶ್ರಮದ ಹಿರಿಯರೊಂದಿಗೆ ಬೆರೆತು ವಿವಿಧ ಮನರಂಜನಾ ಮತ್ತು ಆರೋಗ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಧ್ಯಾನ, ಪ್ರಾಣಾಯಾಮ ಹಾಗೂ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಆಶ್ರಮದ ಹಿರಿಯರು ಹಾಡುಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಯುವವಾಹಿನಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಆಶ್ರಮದ ಹಿರಿಯರೊಂದಿಗೆ ಆತ್ಮೀಯವಾಗಿ ಬೆರೆತು ಅವರ ಕುಶಲೋಪರಿ ವಿಚಾರಿಸಿದರು. ಭೇಟಿಯ ಸ್ಮರಣಾರ್ಥ ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷರು, ರೋಟರಿ ಸಮುದಾಯ ದಳ ಕೊಲ್ಯ–ಸೋಮೇಶ್ವರದ ಅಧ್ಯಕ್ಷರು ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷರು ಸಸಿಯೊಂದನ್ನು ಆಶ್ರಮದ ನಿರ್ದೇಶಕರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದ ಬಳಿಕ ಎಲ್ಲರೂ ಆಶ್ರಮದ ಹಿರಿಯರೊಂದಿಗೆ ಸಹಭೋಜನದಲ್ಲಿ ಪಾಲ್ಗೊಂಡರು. ಸ್ವಾತಂತ್ರ್ಯೋತ್ಸವವನ್ನು ಹಿರಿಯರೊಂದಿಗೆ ಆಚರಿಸುವ ಮೂಲಕ ಪರಸ್ಪರ ಪ್ರೀತಿ, ಗೌರವ ಹಾಗೂ ಮಾನವೀಯತೆಯ ಸಂದೇಶವನ್ನು ಸಾರಲಾಯಿತು.
ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ, ಕಾರ್ಯದರ್ಶಿ ಮುಕೇಶ್ ಕಿನ್ಯ, ಪ್ರಥಮ ಉಪಾಧ್ಯಕ್ಷ ಜೀವನ್ ಬೆರಿಕೆ, ಕೇಂದ್ರ ಸಮಿತಿ ಮಹಿಳಾ ಸಂಘಟನಾ ನಿರ್ದೇಶಕಿ ಸುಧಾ ಸುರೇಶ್, ಕೇಂದ್ರ ಸಮಿತಿ ಲೆಕ್ಕ ಪರಿಶೋಧಕ ನಿರ್ದೇಶಕ ಸುಂದರ್ ಸುವರ್ಣ, ಕೇಂದ್ರ ಸಮಿತಿ ನಾಮನಿರ್ದೇಶಿತ ಸದಸ್ಯ ಶಶಿಕಾಂತ್ ಪರ್ಯತ್ತೂರು, ಘಟಕದ ಸ್ಥಾಪಕ ಅಧ್ಯಕ್ಷ ಸುರೇಶ್ ಬಿಲ್ಲವ, ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಮಿತಿಯ ಮಾಜಿ ಕಾರ್ಯದರ್ಶಿ ಕುಸುಮಾಕರ್ ಕುಂಪಲ ಕಾರ್ಯಕ್ರಮ ನಿರೂಪಿಸಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷೆ ಪಂಚಮಿ, ಕಾರ್ಯದರ್ಶಿ ಪ್ರಮೋದ್, ರೋಟರಿ ಸಮುದಾಯ ದಳ ಕೊಲ್ಯ–ಸೋಮೇಶ್ವರದ ಅಧ್ಯಕ್ಷ ಸೀತಾರಾಮ ಕರ್ಕೇರ, ಕಾರ್ಯದರ್ಶಿ ಜಯದೇವ್, ಜಿಲ್ಲಾ ಪ್ರತಿನಿಧಿ ಆನಂದ್ ಮಲಯಾಳಕೋಡಿ ಹಾಗೂ ರೋಟರಿ ಸಮುದಾಯ ದಳದ ಸದಸ್ಯರು ಭಾಗವಹಿಸಿದ್ದರು.


