ಕೂಳೂರು, ಆಗಸ್ಟ್ 09: ಯುವವಾಹಿನಿ (ರಿ.) ಮೂಲಕ ಯುವ ಸಮುದಾಯ ಸಮಾಜದ ಬಲಿಷ್ಠ ಶಕ್ತಿಯಾಗಿ ರೂಪುಗೊಳ್ಳಬೇಕು. ಇಂತಹ ಯುವಕರನ್ನು ರೂಪಿಸುವ ಯುವವಾಹಿನಿಯ ಸಮಾಜಮುಖಿ ಕಾರ್ಯ ನಿರಂತರವಾಗಿ ಮುಂದುವರಿದು ಅಜರಾಮರವಾಗಲಿ ಎಂದು ‘ಅಭಿಮತ’ ಸುದ್ದಿ ವಾಹಿನಿಯ ನಿರ್ದೇಶಕಿ ಡಾ. ಮಮತಾ ಪಿ. ಶೆಟ್ಟಿ ಆಶಿಸಿದರು. ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಕೂಳೂರಿನ ಫಲ್ಗುಣಿ ಸಭಾಂಗಣದಲ್ಲಿ ಭಾನುವಾರ ನಡೆದ ‘ಆಟಿದ ಪೊರ್ಲು–2026’ ಕಾರ್ಯಕ್ರಮವನ್ನು ತುಳಸಿ ಕಟ್ಟೆಯ ತುಳಸಿ ಗಿಡಕ್ಕೆ ನೀರು ಹಾಕಿ, ದೀಪ ಬೆಳಗಿಸುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.

ಆಟಿ ತಿಂಗಳು ಕೇವಲ ಸಂಭ್ರಮದ ಆಚರಣೆಯಲ್ಲ. ನಮ್ಮ ಹಿರಿಯರು ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಲು ಕಲಿತ ಜೀವನಪಾಠವೇ ತುಳುನಾಡಿನ ಆಟಿ ಸಂಸ್ಕೃತಿಯ ಮೂಲ ಆಶಯವಾಗಿದೆ ಎಂದು ಯುವ ಬರಹಗಾರ, ಧ್ವನಿ ಕಲಾವಿದ ಹಾಗೂ ನಟ ಜಿತೇಶ್ ಮಿಜಾರ್ ಅಭಿಪ್ರಾಯಪಟ್ಟರು.
ಆಟಿ ತಿಂಗಳ ವಿಶೇಷತೆ, ತುಳುನಾಡಿನ ಸಂಪ್ರದಾಯ, ಪ್ರಕೃತಿಯೊಂದಿಗಿನ ಬದುಕು ಹಾಗೂ ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಕೂಳೂರು ಘಟಕದ ಅಧ್ಯಕ್ಷೆ ಗೀತಾ ವಸಂತ್, ಕಾರ್ಯದರ್ಶಿ ವಂದೀಪ್ ಕೆ. ಸುವರ್ಣ, ಕಾರ್ಯಕ್ರಮದ ಸಂಚಾಲಕಿ ಹರಿಣಿ ಮಾಲೆಮಾರ್ ಹಾಗೂ ಮಾರ್ಗದರ್ಶಕ ಚಂದಪ್ಪ ಸನಿಲ್ ಉಪಸ್ಥಿತರಿದ್ದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷೆ ವಿದ್ಯಾ ರಾಕೇಶ್ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಪ್ರಗತಿಪರ ಕೃಷಿಕರು ಹಾಗೂ ಯುವವಾಹಿನಿ ಸದಸ್ಯರಾದ ಜಯ ಬಂಗೇರ ಮತ್ತು ಹರೀಶ್ ಪೂಜಾರಿ ಅವರನ್ನು ಘಟಕದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಫಲಪುಷ್ಪ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಮಮತಾ ಪಿ. ಶೆಟ್ಟಿ ಹಾಗೂ ಜಿತೇಶ್ ಮಿಜಾರ್ ಅವರನ್ನೂ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಘಟಕದ ಸದಸ್ಯರು ಸಿದ್ಧಪಡಿಸಿದ ತುಳುನಾಡಿನ ಆಟಿ ತಿಂಗಳ ವಿಶೇಷ ಖಾದ್ಯಗಳ ಪ್ರದರ್ಶನ ಮತ್ತು ಭೋಜನ ವ್ಯವಸ್ಥೆ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಘಟಕದ 150ಕ್ಕೂ ಅಧಿಕ ಸದಸ್ಯರು ಹಾಗೂ ಕುಟುಂಬಸ್ಥರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸದಸ್ಯೆಯರಾದ ಪೂರ್ಣ ಹಾಗೂ ಪೂರ್ವಿ ಪ್ರಾರ್ಥಿಸಿದರು. ನಿರ್ದೇಶಕಿ ಮಧುಶ್ರೀ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕಿ ಹರಿಣಿ ಮಾಲೆಮಾರ್ ವಂದಿಸಿದರು.


