ಬಜಪೆ, ಆಗಸ್ಟ್ 7: ನಶಿಸುತ್ತಿರುವ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಉತ್ತೇಜನ ನೀಡುವುದರೊಂದಿಗೆ ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಯೋಜಿಸಿರುವ ಸಸ್ಯೋತ್ಸವ ಹಾಗೂ ಹಲಸು ಆಹಾರ ಮೇಳ ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದು ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಹೇಳಿದರು. ಯುವವಾಹಿನಿ (ರಿ.) ಬಜಪೆ ಘಟಕ ಹಾಗೂ ರೋಟರಿ ಕ್ಲಬ್ ಬಜಪೆ ಸಹಯೋಗದಲ್ಲಿ ರೈತ ಕುಡ್ಲ ಪ್ರತಿಷ್ಠಾನದ ನೇತೃತ್ವದಲ್ಲಿ ಬಜಪೆಯ ಬಿ. ಸಂಜೀವ ಶೆಟ್ಟಿ ಸಭಾಂಗಣದಲ್ಲಿ ಆಗಸ್ಟ್ 7ರಿಂದ 9ರವರೆಗೆ ನಡೆಯುವ ‘ಸಸ್ಯೋತ್ಸವ ಹಾಗೂ ಹಲಸು ಆಹಾರ ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಕ್ಲಬ್ ಬಜಪೆಯ ಅಧ್ಯಕ್ಷೆ ಸುಮಾ ಬಿ. ಶೆಟ್ಟಿ ಹಲಸಿನ ಹಣ್ಣನ್ನು ಕತ್ತರಿಸುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮೂರು ದಿನಗಳ ಕಾಲ ನಡೆಯುವ ಮೇಳ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಮಳಿಗೆ ಉದ್ಘಾಟಿಸಿ ಮಾತನಾಡಿ, ವಿಷಯುಕ್ತವಲ್ಲದ ನೈಸರ್ಗಿಕ ಆಹಾರ ಪದ್ಧತಿಗೆ ಉತ್ತೇಜನ ನೀಡುವ ಇಂತಹ ಮೇಳಗಳು ಕೃಷಿಕರಲ್ಲಿ ಸಂತೃಪ್ತಿ ಮೂಡಿಸುವುದರ ಜೊತೆಗೆ ಪ್ರಗತಿಪರ ಕೃಷಿಕರಿಗೆ ಪೂರಕವಾಗಿವೆ. ನಶಿಸುತ್ತಿರುವ ಕೃಷಿ ಪದ್ಧತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವ ಪಡೆದಿವೆ ಎಂದು ಹೇಳಿದರು.
ಮೇಳದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಪ್ರಗತಿಪರ ಕೃಷಿಕರಾದ ಮೋಹನ್ ಪೂಜಾರಿ ಕಬೀತ್ತಿಗುತ್ತು ಹಾಗೂ ಭಾಸ್ಕರ್ ಮೂಲ್ಯ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ರೋಟರಿ ಕ್ಲಬ್ ಕಾರ್ಯದರ್ಶಿ ಶರ್ಮಿಳಾ ಅವರು ಸಾಧಕರ ಪರಿಚಯವನ್ನು ಸಭೆಯ ಮುಂದಿಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಬಜಪೆ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ ವಹಿಸಿದ್ದರು. ಬಜಪೆ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಕೃಷಿಕ ಅಲ್ವಿನ್ ಮಥಾಯಿಸ್, ಬಿ. ಸಂಜೀವ ಶೆಟ್ಟಿ ಸಭಾಂಗಣದ ಮಾಲೀಕ ವರಪ್ರಸಾದ್ ಶೆಟ್ಟಿ ಹಾಗೂ ರೈತ ಕುಡ್ಲ ಪ್ರತಿಷ್ಠಾನದ ಕಾರ್ಯದರ್ಶಿ ಲತೀಶ್ ಉಪಸ್ಥಿತರಿದ್ದರು.
ಮೇಳದಲ್ಲಿ ವಿವಿಧ ಬಗೆಯ ಹಣ್ಣುಗಳು, ಕೆಂಪು, ಬಿಳಿ ಹಾಗೂ ಬಂಗಾರದ ವರ್ಣದ ಹಲಸು, ಹಲಸಿನ ಬಿಸಿ ಬಿಸಿ ಹೋಳಿಗೆ, ಜಿಲೇಬಿ, ಹಪ್ಪಳ, ಚಿಪ್ಸ್, ಹಲಸಿನ ಕಬಾಬ್, ಮುಲ್ಕ, ಹಲಸಿನ ಶೀರಾ, ಪಾಯಸ, ಜಾಮ್ ಹಾಗೂ ನೈಸರ್ಗಿಕ ಹಣ್ಣುಗಳ ಐಸ್ಕ್ರೀಂ ಸೇರಿದಂತೆ ವೈವಿಧ್ಯಮಯ ಆಹಾರ ಉತ್ಪನ್ನಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಇದರೊಂದಿಗೆ ವಿವಿಧ ಬಗೆಯ ಗಿಡಗಳ ಪ್ರದರ್ಶನ, ಹೂ–ಹಣ್ಣು–ತರಕಾರಿ ಗಿಡಗಳು, ತರಕಾರಿ ಬೀಜಗಳ ಮಾರಾಟ, ಕೃಷಿ ಸಲಕರಣೆಗಳ ಮಾಹಿತಿ ಹಾಗೂ ಮಾರಾಟ ಮಳಿಗೆ, ಜೇನು ಕೃಷಿ ಮಾಹಿತಿ ಮಳಿಗೆ, ಹೂವಿನ ಚಟ್ಟಿಗಳು, ಸಾವಯವ ಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟ ಮಳಿಗೆಗಳು ಮೇಳದ ವಿಶೇಷ ಆಕರ್ಷಣೆಯಾಗಿವೆ.
ಕಾರ್ಯಕ್ರಮವನ್ನು ದೇವರಾಜ್ ಅಮೀನ್ ನಿರೂಪಿಸಿದರು. ಸಾನ್ವಿ ಹಾಗೂ ಶರ್ಮಿಳಾ ಚಂದ್ರಶೇಖರ್ ಪ್ರಾರ್ಥಿಸಿದರು. ಸುಚಿತ ದೇವರಾಜ್ ಸ್ವಾಗತಿಸಿದರು. ರೈತ ಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭಾರತ್ ರಾಜ್ ಸೊರಕೆ ವಂದಿಸಿದರು.


