ಕೊಲ್ಯ, ಜುಲೈ 19: ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ಲೇಖಕರಾದ ವಿದ್ವಾನ್ ದಿ. ರಮನಾಥ್ ಕೋಟೆಕಾರ್ ಅವರ ಜನ್ಮದಿನದ ಅಂಗವಾಗಿ ರಾಜ್ಯ ಮಟ್ಟದ ಆನ್ಲೈನ್ ಕಥೆ ಮತ್ತು ಕವನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದಲೂ ಉತ್ತಮ ಸ್ಪಂದನೆ ದೊರೆತಿದ್ದು, ಕಥಾ ವಿಭಾಗದಲ್ಲಿ 133 ಹಾಗೂ ಕವನ ವಿಭಾಗದಲ್ಲಿ 231 ಕೃತಿಗಳು ಸಲ್ಲಿಕೆಯಾಗಿದ್ದವು.

ಕಥಾ ವಿಭಾಗದಲ್ಲಿ ಡಾ. ಸುರೇಶ್ ನೆಗಳಗುಳಿ (ಮಂಗಳೂರು) ಅವರ “ಅನಾವರಣ” ಕಥೆ ಪ್ರಥಮ ಬಹುಮಾನ (₹10,000) ಪಡೆದುಕೊಂಡಿತು. ಶಾರದಾ ಎ. ಅಂಚನ್ (ಕೊಡವೂರು) ಅವರ “ಸ್ವಗತ” ಕಥೆ ದ್ವಿತೀಯ ಬಹುಮಾನ (₹7,500) ಗಳಿಸಿತು. ಚೇತನ್ ವರ್ಕಾಡಿ (ಮಂಜೇಶ್ವರ) ಅವರ “ಪತಿವ್ರತೆ” ಹಾಗೂ ರೂಪಾಶ್ರೀ ರವೀಶ್ (ಭಂಡಾರಿಬೆಟ್ಟು, ಬಂಟ್ವಾಳ) ಅವರ “ವಿಧವೆಯಾಗದ ವಿಧವೆ” ಕಥೆಗಳು ತೃತೀಯ ಬಹುಮಾನಕ್ಕೆ (ತಲಾ ₹2,500) ಆಯ್ಕೆಯಾದವು. ಮೆಚ್ಚುಗೆಯ ಬಹುಮಾನಕ್ಕೆ ಸುಧಾ ಎನ್. ತೇಲ್ಕರ್ (ಚೆನ್ನೈ), ಚಿತ್ರಾಶ್ರೀ ಮನೋಜ್ (ಮಂಗಳೂರು), ಎ. ಹರೀಶ ಡೋಂಗ್ರೆ (ಮಾಳ), ಪರಿಮಳ ಮಹೇಶ್ ರಾವ್ (ಮಂಗಳೂರು) ಹಾಗೂ ಗಂಗಾದೇವಿ ಚಕ್ರಸಾಲಿ (ಬೆಳಗಾವಿ) ಅವರ ಕಥೆಗಳು (ತಲಾ ₹1,000) ಪಾತ್ರವಾದವು.

ಕವನ ವಿಭಾಗದಲ್ಲಿ ರಮ್ಯ ರಘುಪತಿ (ಕೊಕ್ಕಡ, ಬೆಳ್ತಂಗಡಿ) ಅವರ “ಊರ್ಮಿಳೆಯ ವ್ಯಥೆ” ಕವನ ಪ್ರಥಮ ಬಹುಮಾನ (₹7,500) ಪಡೆದುಕೊಂಡಿತು. ಹಿತೇಶ್ ಕುಮಾರ್ ಎ. (ಕಾಸರಗೋಡು) ಅವರ “ಏಕತೆಯ ಜ್ಯೋತಿ” ಕವನ ದ್ವಿತೀಯ ಬಹುಮಾನ (₹5,000) ಹಾಗೂ ಚೈತ್ರ ಕಬ್ಬಿನಾಲೆ (ಕಾರ್ಕಳ) ಅವರ “ಅಂಗರಾಜ ಕರ್ಣ” ಕವನ ತೃತೀಯ ಬಹುಮಾನ (₹3,000) ಗಳಿಸಿತು. ಅನುಪಮ ಸುಲಾಖೆ (ಹೊಸಪೇಟೆ), ಶರ್ಮಿಳ ಉಡುಪ (ಮಂಗಳೂರು), ಸತ್ಯಲತಾ ಸಿದ್ಧಮೂಲೆ (ಬೆಳ್ತಂಗಡಿ), ವಿಶ್ವೇಶ್ವರ ಎಂ. ಭಟ್ (ಮಂಗಳೂರು) ಹಾಗೂ ಅಶ್ವಥ್ ಬರಿಮಾರು (ಬಂಟ್ವಾಳ) ಅವರ ಕವನಗಳು ಮೆಚ್ಚುಗೆಯ ಬಹುಮಾನಕ್ಕೆ (ತಲಾ ₹1,000) ಆಯ್ಕೆಯಾದವು.

ಕಥಾ ವಿಭಾಗದ ತೀರ್ಪುಗಾರರಾಗಿ ಹಿರಿಯ ಸಾಹಿತಿ ಬಿ. ಸತ್ಯವತಿ ಭಟ್ ಕೊಳಚಪ್ಪು ಹಾಗೂ ಕವನ ವಿಭಾಗದ ತೀರ್ಪುಗಾರರಾಗಿ ಹಿರಿಯ ಸಾಹಿತಿ ವ. ಉಮೇಶ ಕಾರಂತ ಕಾರ್ಯನಿರ್ವಹಿಸಿದರು.

ವೈವಿಧ್ಯಮಯ ಫಲಿತಾಂಶ ಘೋಷಣೆ
ಸ್ಪರ್ಧೆಯ ಫಲಿತಾಂಶವನ್ನು ವಾಟ್ಸಾಪ್ ಬಳಗದ ಮೂಲಕ ವಿಶೇಷ ಹಾಗೂ ವಿನೂತನ ರೀತಿಯಲ್ಲಿ ಪ್ರಕಟಿಸಲಾಯಿತು. ಕಾರ್ಯಕ್ರಮವು ಯುವವಾಹಿನಿ (ರಿ.) ಕೊಲ್ಯ ಘಟಕದ ಕಾರ್ಯದರ್ಶಿ ಸೌಮ್ಯ ಯೋಗೀಶ್ ಕೋಟೆಕಾರ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ವಿದ್ವಾನ್ ದಿ. ರಮನಾಥ್ ಕೋಟೆಕಾರ್ ಅವರ ಬದುಕು ಹಾಗೂ ಸಾಹಿತ್ಯ ಸೇವೆಯ ಕುರಿತ ವಿಶೇಷ ಚಿತ್ರಣವನ್ನು ಬಿತ್ತರಿಸಲಾಯಿತು.

ಘಟಕದ ಅಧ್ಯಕ್ಷ ನಿತಿನ್ ಕರ್ಕೆರ ಸ್ವಾಗತಿಸಿದರು. ಸ್ಪರ್ಧೆಯ ಪ್ರಾಯೋಜಕರಾದ ಆಶಾ ರಮನಾಥ್ ಕೋಟೆಕಾರ್ ಪ್ರಸ್ತಾವನೆಗೈದರು. ನಿಯೋಜಿತ ಕಾರ್ಯದರ್ಶಿ ಮುಕೇಶ್ ಕಿನ್ಯ ಯಕ್ಷಗಾನದ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಹಿರಿಯ ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಡಾ. ಮೀನಾಕ್ಷಿ ರಾಮಚಂದ್ರ, ಬೆನೆಟ್ ಅಮಣ್ಣ, ನರೇಶ್ ಕುಮಾರ್ ಸಸಿಹಿತ್ಲು ಅವರು ವಿದ್ವಾನ್ ರಮನಾಥ್ ಕೋಟೆಕಾರ್ ಅವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯನ್ನು ಸ್ಮರಿಸಿದರು. ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಹಾಗೂ ವೇದಾವತಿ ಟೀಚರ್ ಶುಭ ಹಾರೈಸಿದರು.
ತೀರ್ಪುಗಾರರ ಅನಿಸಿಕೆಗಳನ್ನು ಪ್ರಸಾರ ಮಾಡಿದ ಬಳಿಕ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಕೊನೆಯಲ್ಲಿ ಸ್ಪರ್ಧೆಯ ಸಂಚಾಲಕರಾದ ಲತೀಶ್ ಎಂ. ಸಂಕೋಳಿಗೆ ವಂದನಾರ್ಪಣೆ ಸಲ್ಲಿಸಿದರು.


