ಕೂಳೂರು, ಜು. 29: ದೇಶದ ರಕ್ಷಣೆ ಮತ್ತು ಭದ್ರತೆಯ ವಿಚಾರ ಬಂದಾಗ ಭಾರತದ ಪ್ರತಿಯೊಬ್ಬ ಪ್ರಜೆಯೂ ಸೈನಿಕನ ಮನೋಭಾವವನ್ನು ಹೊಂದಿರಬೇಕು ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಆಶೋಕ್ ಕುಮಾರ್ ಪಡ್ಪು ಹೇಳಿದರು. ಅವರು ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಫಲ್ಗುಣಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಗಿಲ್ ವಿಜಯ್ ದಿವಸ್–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶದ ಭದ್ರತೆಗೆ ಸವಾಲೊಡ್ಡಿದ ಶತ್ರುಗಳನ್ನು ಧೈರ್ಯದಿಂದ ಹಿಮ್ಮೆಟ್ಟಿಸಿದ ಭಾರತೀಯ ಸೈನಿಕರ ಸಾಹಸ, ಶೌರ್ಯ ಮತ್ತು ತ್ಯಾಗ ಅಪ್ರತಿಮವಾಗಿದೆ. ಅಂದು ಸೈನಿಕರು ತಂದುಕೊಟ್ಟ ವಿಜಯವು ಭಾರತವನ್ನು ಬಲಿಷ್ಠ ರಾಷ್ಟ್ರವಾಗಿ ವಿಶ್ವದ ಮುಂದೆ ಗುರುತಿಸಿತು ಎಂದು ಅವರು ಹೇಳಿದರು. ದೇಶದ ರಕ್ಷಣೆಯ ಜವಾಬ್ದಾರಿ ಕೇವಲ ಸೈನಿಕರಿಗಷ್ಟೇ ಸೀಮಿತವಲ್ಲ. ಪ್ರತಿಯೊಬ್ಬ ನಾಗರಿಕರೂ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು. ದೇಶದಲ್ಲಿದ್ದುಕೊಂಡೇ ಅಶಾಂತಿ, ಆಂತರಿಕ ಗಲಭೆ ಹಾಗೂ ದೇಶದ್ರೋಹಿ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಸೈನಿಕರ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಪ್ರತಿಯೊಬ್ಬ ಭಾರತೀಯರೂ ಮಾಡಬೇಕು ಎಂದು ಕರೆ ನೀಡಿದರು.
ಮುಂದುವರಿದು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಮೂಲಕ ವಿವಿಧ ರಾಜ್ಯಗಳಲ್ಲಿ ಅಗ್ನಿವೀರರ ನೇಮಕಾತಿ ನಡೆಯುತ್ತಿದ್ದು, ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದೇಶಸೇವೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷೆ ಗೀತಾ ವಸಂತ್ ವಹಿಸಿ ಸ್ವಾಗತಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಶೋಧ (ಹವಲ್ದಾರ್, ಸಿಆರ್ಪಿಎಫ್) ಅವರು ಶ್ರೀನಗರ ಹಾಗೂ ಅಯೋಧ್ಯೆಯಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭಗಳ ಅನುಭವಗಳನ್ನು ಹಂಚಿಕೊಂಡು, ದೇಶಸೇವೆಯಲ್ಲಿನ ಸವಾಲುಗಳು ಹಾಗೂ ಸೈನಿಕರ ಜೀವನದ ಮಹತ್ವವನ್ನು ಭಾವನಾತ್ಮಕವಾಗಿ ವಿವರಿಸಿದರು. ಮಾಜಿ ಸೈನಿಕ ಕಿಶೋರ್ ಕುಮಾರ್ ನುಡಿನಮನ ಸಲ್ಲಿಸಿದರು. ಬಳಿಕ ಅತಿಥಿಗಳು ಹಾಗೂ ಸದಸ್ಯರು ಕಾರ್ಗಿಲ್ ಹುತಾತ್ಮ ವೀರ ಯೋಧರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸುಮಾರು 20 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯೋಧರಾದ ಕಿಶೋರ್ ಕುಮಾರ್ ಹಾಗೂ ಯಶೋಧ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಕಾರ್ಯದರ್ಶಿ ವಂದೀಪ್ ಕೆ. ಸುವರ್ಣ, ಕಾರ್ಗಿಲ್ ವಿಜಯ್ ದಿವಸ್–2026 ಕಾರ್ಯಕ್ರಮದ ಸಂಚಾಲಕ ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕ ವಿಘ್ನೇಶ್ ಕುಮಾರ್ ಬೋಳೂರು, ವಿದ್ಯಾರ್ಥಿ ಸಂಘಟನಾ ನಿರ್ದೇಶಕಿ ವೀಣಾ ಭಾಸ್ಕರ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಮೋಕ್ಷ ಪ್ರಾರ್ಥಿಸಿದರು. ಸದಸ್ಯೆ ಚಿತ್ರಶ್ರೀ ಮನೋಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕ ವಿಘ್ನೇಶ್ ಕುಮಾರ್ ಬೋಳೂರು ವಂದಿಸಿದರು.


