ಮಂಗಳೂರು, ಜು. 28: ಹಿಂದಿನ ಕಾಲದಲ್ಲಿ ಆಟಿ ತಿಂಗಳು ಎಂದರೆ ಕಷ್ಟದ ದಿನಗಳ ಸಂಕೇತವಾಗಿತ್ತು. ನಿರಂತರ ಸುರಿಯುವ ಮಳೆಯಿಂದ ಸೂರ್ಯನ ಮುಖವೇ ಕಾಣದ ದಿನಗಳು, ಆಹಾರದ ಅಭಾವ, ಅನಾರೋಗ್ಯ ಮತ್ತು ಬದುಕಿನ ಸಂಕಷ್ಟಗಳು ಆಟಿಯ ಅವಿಭಾಜ್ಯ ಅಂಗವಾಗಿದ್ದವು. ಆ ದಿನಗಳ ಅನುಭವವನ್ನು ಮರೆಯಲು ಸಾಧ್ಯವಿಲ್ಲ ಎಂದು ಖ್ಯಾತ ಉಪನ್ಯಾಸಕಿ ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು.

ಯುವವಾಹಿನಿ (ರಿ.) ಮಂಗಳೂರು ಘಟಕವು ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್, ಆಟಿದ ಕಂಪು-ನೆಂಪು ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, “ಹೊಲದಲ್ಲಿ ತಲೆಗೆ ಮುಟ್ಟಾಲೆ ಹಾಕಿಕೊಂಡು ಬೆನ್ನಿ ಬೆಸಾಯ ಮಾಡಿದ ದಿನಗಳನ್ನು ನಾನು ಅನುಭವಿಸಿದ್ದೇನೆ. ಸಿರಿವಂತರು ಹಂಚಿನ ಮನೆಗಳಲ್ಲಿ ವಾಸಿಸುತ್ತಿದ್ದರೆ, ಸಾಮಾನ್ಯ ಜನರು ಮಣ್ಣಿನ ನೆಲದ ಮುಳಿ ಮನೆಗಳಲ್ಲಿ ಜೀವಭಯದಿಂದ ಬದುಕುತ್ತಿದ್ದರು. ಮಳೆಗಾಲದಲ್ಲಿ ಮನೆ ಯಾವಾಗ ಕುಸಿಯುತ್ತದೋ ಎಂಬ ಆತಂಕವಿರುತ್ತಿತ್ತು” ಎಂದು ನೆನಪಿಸಿಕೊಂಡರು.
ಇಂದು ಪ್ರತಿಯೊಂದು ಕಾಯಿಲೆಗೆ ವೈದ್ಯಕೀಯ ಸೌಲಭ್ಯಗಳಿದ್ದರೂ, ಅಂದು ಪ್ರಕೃತಿಯೇ ಔಷಧಿಯಾಗಿತ್ತು. ತೇವು, ತೊಜಂಕ್, ಹಲಸಿನಹಣ್ಣು, ಹಲಸಿನ ಬೀಜ ಸೇರಿದಂತೆ ಅನೇಕ ನೈಸರ್ಗಿಕ ಆಹಾರ ಮತ್ತು ಔಷಧೀಯ ಸಸ್ಯಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಲಾಗುತ್ತಿತ್ತು. ಆಟಿ ತಿಂಗಳು ಪ್ರಕೃತಿಯ ವೈಶಿಷ್ಟ್ಯವನ್ನು ಪರಿಚಯಿಸುವ ಕಾಲವಾಗಿತ್ತು ಎಂದು ಅವರು ತಿಳಿಸಿದರು.
ಇಂದು ಆಟಿ ತಿಂಗಳು ಸಂಭ್ರಮದ ಆಚರಣೆಯಾಗಿ ರೂಪಾಂತರಗೊಂಡಿದ್ದರೂ, ಅದರ ಹಿಂದಿನ ಸಂಕಷ್ಟದ ಬದುಕನ್ನು ಮರೆಯಬಾರದು. ಆಟಿಯ ಮೂಲ ಸ್ವರೂಪ, ಅದರ ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ. ಆಟಿ ಕಳಂಜನ ಕುರಿತ ಸಾಂಪ್ರದಾಯಿಕ ನಂಬಿಕೆಗಳೂ ನಮ್ಮ ಸಂಸ್ಕೃತಿಯ ಭಾಗವಾಗಿವೆ ಎಂದು ಅವರು ಹೇಳಿದರು.

ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ನಿವೃತ್ತ ಯೋಧರಾದ ಯೋಗೇಂದ್ರ ಸುವರ್ಣ ಹಾಗೂ ದಿನೇಶ್ ಅವರನ್ನು ಯುವವಾಹಿನಿ (ರಿ.) ಮಂಗಳೂರು ಘಟಕದ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಯೋಗೇಂದ್ರ ಸುವರ್ಣ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಟೈಗರ್ ಹಿಲ್ ವಶಪಡಿಸಿಕೊಳ್ಳುವ ಕಾರ್ಯಾಚರಣೆಯ ಸಂಕಷ್ಟಗಳು, ಯೋಧರ ತ್ಯಾಗ ಹಾಗೂ ಮಾತೃಭೂಮಿಯ ರಕ್ಷಣೆಗಾಗಿ ನಡೆಸಿದ ಹೋರಾಟದ ರೋಮಾಂಚಕ ಅನುಭವಗಳನ್ನು ಹಂಚಿಕೊಂಡರು. ಕೊನೆಯಲ್ಲಿ “ಭಾರತ್ ಮಾತಾ ಕೀ ಜೈ” ಘೋಷಣೆಯೊಂದಿಗೆ ದೇಶಭಕ್ತಿಯ ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಮಾತನಾಡಿ, ಗುರುಪೂರ್ಣಿಮೆಯ ಅಂಗವಾಗಿ ಶ್ರೀ ನಾರಾಯಣ ಗುರುಗಳ ಶತಾಷ್ಟೋತ್ತರ ಪಠಣ ಹಾಗೂ ಪೂಜೆ ನೆರವೇರಿಸಲಾಯಿತು ಎಂದರು. ನಾರಾಯಣ ಗುರುಗಳ ಆದರ್ಶಗಳು ತಮ್ಮ ಜೀವನಕ್ಕೆ ದಾರಿದೀಪವಾಗಿವೆ ಎಂದು ತಿಳಿಸಿದರು. ಆಟಿ ತಿಂಗಳ ಕುರಿತು ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಆಟಿ ಎಂದರೆ ಒಲೆಗೆ ಬೆಂಕಿ ಹಚ್ಚಲಾರದಷ್ಟು ಮಳೆಯ ಕಾಲ, ರೋಗರುಜಿನಗಳ ಕಾಲ ಹಾಗೂ ಅನಿಷ್ಟದ ಸಂಕೇತವಾಗಿತ್ತು. ಆಟಿ ಸಮಯದಲ್ಲಿ ದೈವಗಳು ಘಟ್ಟಕ್ಕೆ ತೆರಳುವುದರಿಂದ ಜನರ ರಕ್ಷಣೆಗೆ ಆಟಿ ಕಳಂಜ ಬರುತ್ತಾನೆ ಎಂಬ ನಂಬಿಕೆ ಇದೆ. ಇದೇ ಸಂದರ್ಭದಲ್ಲಿ ಔಷಧೀಯ ಗುಣವುಳ್ಳ ಗಿಡಮೂಲಿಕೆಗಳು ಬೆಳೆಯುವುದರಿಂದ ಕಹಿ ಕಷಾಯ ಸೇವಿಸುವ ಸಂಪ್ರದಾಯವೂ ರೂಢಿಯಲ್ಲಿತ್ತು ಎಂದು ವಿವರಿಸಿದರು.
ಕಾರ್ಗಿಲ್ ಯೋಧರ ತ್ಯಾಗವನ್ನು ಎಂದಿಗೂ ಮರೆಯಬಾರದು. ಇಂದಿನ ತಂತ್ರಜ್ಞಾನದಿಂದ ಎಲ್ಲ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಾಗುತ್ತಿದ್ದರೂ, ಅಂದಿನ ಯೋಧರು ಎದುರಿಸಿದ ಸಂಕಷ್ಟಗಳು ಅಪಾರವಾಗಿದ್ದವು. ಪ್ರತಿಯೊಬ್ಬ ಯೋಧರ ನಿಸ್ವಾರ್ಥ ಸೇವೆಯನ್ನು ಗೌರವದಿಂದ ಸ್ಮರಿಸಬೇಕು ಎಂದರು. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರದ ಕುರಿತು ಮಾತನಾಡಿದ ಅವರು, ಯುವವಾಹಿನಿಯ ಪ್ರತಿಯೊಂದು ಘಟಕದಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಅಂತಹ ವಿದ್ಯಾರ್ಥಿಗಳನ್ನು ಸಂಸ್ಥೆಯ ಸದಸ್ಯರನ್ನಾಗಿ ಸೇರಿಸಿ ಭವಿಷ್ಯದಲ್ಲಿ ಯುವವಾಹಿನಿಯ ಶಕ್ತಿಯಾಗಿ ಬೆಳೆಸುವ ಕಾರ್ಯ ನಡೆಯಬೇಕು ಎಂದು ಕರೆ ನೀಡಿದರು.
ಘಟಕದ ಸದಸ್ಯೆ ನೀತಾ ಅಳಪೆ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ವಿನೂತನ ರೀತಿಯಲ್ಲಿ ಉದ್ಘಾಟನೆ ನೆರವೇರಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಘಟಕದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ಕೇಂದ್ರ ಸಮಿತಿ ಸದಸ್ಯರು, ಮಂಗಳೂರು ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕಿ ಪೂರ್ಣಿಮಾ ಯು.ಆರ್. ಸ್ವಾಗತಿಸಿದರು. ಸಮಾಜ ಸೇವಾ ನಿರ್ದೇಶಕ ದಿನೇಶ್ ಕಂದಾವರ ವಂದಿಸಿದರು. ಸದಸ್ಯ ಸತೀಶ್ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಸದಸ್ಯರ ಸಹಯೋಗದಲ್ಲಿ ಆಟಿ ತಿಂಗಳ ಸಾಂಪ್ರದಾಯಿಕ ವಿವಿಧ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು.


