ಬೆಂಗಳೂರು, ಜುಲೈ 19: ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ಸದಸ್ಯರಿಗಾಗಿ ಆಯೋಜಿಸಲಾಗಿದ್ದ “ಕೋಟಿ ಚೆನ್ನಯ್ಯ ಟ್ರೋಫಿ – ಸೀಸನ್ 2” ಬ್ಯಾಡ್ಮಿಂಟನ್ ಕ್ರೀಡಾಕೂಟವು ಭಾನುವಾರ ಬೆಂಗಳೂರಿನ ದಾಸರಹಳ್ಳಿ ಸಮೀಪದ ಎಎಂ ಸ್ಪೋರ್ಟ್ಸ್ ಅರೆನಾದಲ್ಲಿ ಸಂಭ್ರಮ, ಉತ್ಸಾಹ ಮತ್ತು ಕ್ರೀಡಾಸ್ಫೂರ್ತಿಯ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿತ್ಯಾನಂದ ಶೆಟ್ಟಿ ಹಾಗೂ ನಂಜುಂಡ ಪೂಜಾರಿ ಅವರು, ಘಟಕದ ಅಧ್ಯಕ್ಷ ವಿಜೇತ್ ವಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಅತಿಥಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಂಜುಂಡ ಪೂಜಾರಿ, ಇಂತಹ ಕ್ರೀಡಾಕೂಟಗಳು ದೈಹಿಕ ಆರೋಗ್ಯ ವೃದ್ಧಿಸುವುದರೊಂದಿಗೆ ಸದಸ್ಯರ ನಡುವೆ ಸ್ನೇಹ, ಬಾಂಧವ್ಯ ಮತ್ತು ಸಂಘಟನಾ ಮನೋಭಾವವನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು. ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಬಳಿಕ ಮುಖ್ಯ ಅತಿಥಿಗಳಿಂದ “ಕೋಟಿ ಚೆನ್ನಯ್ಯ ಟ್ರೋಫಿ – ಸೀಸನ್ 2” ಅನಾವರಣಗೊಳಿಸಲಾಯಿತು. ಸಾಂಕೇತಿಕವಾಗಿ ಬ್ಯಾಡ್ಮಿಂಟನ್ ಪಂದ್ಯ ಆರಂಭಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಕ್ರೀಡಾಕೂಟದಲ್ಲಿ ಸದಸ್ಯರನ್ನು ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ನಾಲ್ಕು ತಂಡಗಳಾಗಿ ವಿಂಗಡಿಸಲಾಗಿತ್ತು. ಶಾಂಭವಿ ಸ್ಟ್ರೈಕರ್ಸ್, ಪಾಲ್ಗುಣಿ ಪವರ್, ನೇತ್ರಾವತಿ ಸ್ಮ್ಯಾಶರ್ಸ್ ಹಾಗೂ ನಂದಿನಿ ನೆಟ್ ವಾರಿಯರ್ಸ್ ಎಂಬ ದಕ್ಷಿಣ ಕನ್ನಡದ ನದಿಗಳ ಹೆಸರನ್ನು ತಂಡಗಳಿಗೆ ನೀಡಲಾಗಿತ್ತು. ಎಲ್ಲ ತಂಡಗಳು ಉತ್ತಮ ಕ್ರೀಡಾಸ್ಫೂರ್ತಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು. ಸ್ಪರ್ಧಾಳುಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಮಂಗಳೂರು ಶೈಲಿಯ ವಿಶೇಷ ಭೋಜನ ಹಾಗೂ ಸಂಜೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಘಟಕದ ಅಧ್ಯಕ್ಷ ವಿಜೇತ್ ವಿ. ಪೂಜಾರಿ, ಮುಖ್ಯ ಅತಿಥಿಗಳಾದ ಗಣೇಶ್ ಅಮೀನ್, ಜಗನ್ನಾಥ ಪೂಜಾರಿ ಹಾಗೂ ರೋಹಿತ್ ಎಸ್, ಗೌರವ ಸಲಹೆಗಾರರಾದ ಕೆ.ಬಿ. ಜಯರಾಮ್, ಸುಧೀರ್ ಎಸ್. ಪೂಜಾರಿ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಕಲ್ಲಾಜೆ, ಕಾರ್ಯದರ್ಶಿ ಮನೋಜ್ ಕುಮಾರ್ ಟಿ., ಕ್ರೀಡಾ ನಿರ್ದೇಶಕರಾದ ಅನುಷಾ ಹಾಗೂ ಚೇತನ್ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೋಹಿತ್ ಎಸ್, ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವ ಬೆಂಗಳೂರು ಘಟಕವನ್ನು ಅಭಿನಂದಿಸಿ, ಸದಸ್ಯರು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷ ವಿಜೇತ್ ವಿ. ಪೂಜಾರಿ ಮಾತನಾಡಿ, ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬ ಸದಸ್ಯ, ಸಂಘಟಕ ಹಾಗೂ ಸ್ವಯಂಸೇವಕರನ್ನು ಅಭಿನಂದಿಸಿದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಕಲ್ಲಾಜೆ ಅವರು ಸದಸ್ಯರು ಕ್ರೀಡೆ ಮಾತ್ರವಲ್ಲದೆ ಘಟಕದ ಎಲ್ಲಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಿದ ದಾನಿಗಳನ್ನು, ನಾಲ್ಕು ತಂಡಗಳ ನಾಯಕರನ್ನು ಹಾಗೂ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ ಬ್ರಾಹ್ಮರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ನಾಲ್ವರು ಸದಸ್ಯರನ್ನು ಸನ್ಮಾನಿಸಲಾಯಿತು. ದಿನವಿಡೀ ನಡೆದ ಪಂದ್ಯಗಳು ಅತ್ಯಂತ ರೋಚಕವಾಗಿದ್ದು, ಆಟಗಾರರು ಹಾಗೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ವಿಜೇತ ಹಾಗೂ ರನ್ನರ್-ಅಪ್ ತಂಡಗಳಿಗೆ ಟ್ರೋಫಿ, ಪ್ರಶಸ್ತಿ ಹಾಗೂ ಸ್ಮರಣಿಕೆಗಳನ್ನು ವಿತರಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ಕಾರ್ಯದರ್ಶಿ ಮನೋಜ್ ಕುಮಾರ್ ಟಿ. ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಸಾಂಸ್ಕೃತಿಕ ನಿರ್ದೇಶಕಿ ಮಧುಶ್ರೀ ಬಂಗೇರ ನಿರೂಪಿಸಿದರು.


