ಅಡ್ವೆ, ಜು.12: ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ಘಟಕದ ಸದಸ್ಯರು ಹಾಗೂ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗಾಗಿ ಅಡ್ವೆಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ದೇವರ ಗದ್ದೆಯಲ್ಲಿ ‘ಕೆಸರ್ಡೊಂಜಿ ದಿನ-2026’ ಕಾರ್ಯಕ್ರಮವು ಭಾನುವಾರ ಬೆಳಗ್ಗಿನಿಂದ ಸಂಜೆಯವರೆಗೆ ಅತ್ಯಂತ ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಗಂಧಪ್ರಸಾದ, ತೀರ್ಥ, ಸಿಯಾಳ, ಹಾಲು ಸಮರ್ಪಣೆ ಹಾಗೂ ತೆಂಗಿನಕಾಯಿ ಒಡೆಯುವ ಮೂಲಕ ಕೆಸರುಗದ್ದೆಗೆ ತನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು.
ಬೆಳಿಗ್ಗೆ 9.30ಕ್ಕೆ ಘಟಕದ ಅಧ್ಯಕ್ಷ ಪ್ರಸಾದ್ ಪಲಿಮಾರ್ ಅವರ ಅಧ್ಯಕ್ಷತೆಯಲ್ಲಿ ಅಕ್ಷಯ ಸುವರ್ಣ ಅವರ ಪ್ರಾರ್ಥನೆಯೊಂದಿಗೆ ಉದ್ಘಾಟನಾ ಸಮಾರಂಭ ಆರಂಭವಾಯಿತು. ರಾಮ ಪೂಜಾರಿ ಅಡ್ವೆ ಗರಡಿಮನೆ ಅವರ ಅಮೃತಹಸ್ತದಿಂದ ತುಳುನಾಡಿನ ಸಾಂಪ್ರದಾಯಿಕ ಕೃಷಿ ಸಂಸ್ಕೃತಿಯ ಪ್ರತೀಕವಾದ ಭತ್ತದ ತುಪ್ಪೆಗೆ ಸಿರಿ ಇಡುವ ಸಂಪ್ರದಾಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಮ ಪೂಜಾರಿ ಅವರು ಕೆಸರಿನ ಮಹತ್ವ, ಕೃಷಿ ಸಂಸ್ಕೃತಿಯ ಮೌಲ್ಯ ಹಾಗೂ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡು, ತುಳುನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪಡು ಸಾಂತೂರು ಕಲ್ಯಾಣಿ ನಿವಾಸದ ರಾಮ ದೇಜು ಪೂಜಾರಿ ಅವರ ಕೋಣಗಳನ್ನು ಕೆಸರುಗದ್ದೆಗೆ ಇಳಿಸಿ ಓಡಿಸಲಾಯಿತು. ಇದೇ ವೇಳೆ 2026ರ ಕಂಬಳ ಋತುವಿನಲ್ಲಿ ಪುತ್ತೂರಿನ ಕೋಟಿ-ಚೆನ್ನಯ ಕಂಬಳದಲ್ಲಿ 100 ಮೀಟರ್ ಕರೆಯನ್ನು 8.52 ಸೆಕೆಂಡ್ಗಳಲ್ಲಿ ಓಡಿ ಐತಿಹಾಸಿಕ ದಾಖಲೆ ನಿರ್ಮಿಸಿದ ಪೃಥ್ವಿರಾಜ್ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ರಾಮ ಪೂಜಾರಿ, ಭಾಸ್ಕರ್ ಪಲಿಮಾರು, ಪ್ರಸಾದ್ ಪಲಿಮಾರ್, ಮಮತಾ ಅಂಚನ್, ಗ್ರೇಟಾ ಮೋರಸ್, ಅಕ್ಷಯ ಸುವರ್ಣ, ಬೋಳ ಆನಂದ ಪೂಜಾರಿ ಹಾಗೂ ಪ್ರತಾಪ್ ಸುವರ್ಣ ಉಪಸ್ಥಿತರಿದ್ದರು. ಕೆಸರುಗದ್ದೆಯಲ್ಲಿ 50 ಮೀ. ಹಾಗೂ 100 ಮೀ. ಓಟ, ಗೋಣಿಚೀಲ ಓಟ, ನಿಧಿ ಶೋಧ, ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ರಿಲೇ, ಹಾಳೆ ಓಟ, ಉಪ್ಪು ಮೂಟೆ ಓಟ, ಐದು ಕಾಲಿನ ಓಟ ಸೇರಿದಂತೆ ವಿವಿಧ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳು ಉತ್ಸಾಹದಿಂದ ನಡೆಯಿತು. ಎಲ್ಲಾ ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಬಹುಮಾನ ಘೋಷಿಸಲಾಯಿತು.
ಮಧ್ಯಾಹ್ನ ಗ್ರಾಮದ ಹಿರಿಯ ಕೃಷ್ಣ ಕುಮಾರ್ ಶೆಟ್ಟಿ ಅವರ ವತಿಯಿಂದ ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹಾಗೂ ಮಾಜಿ ಶಾಸಕ ಲಾಲಾಜಿ ಮೆಂಡನ್ ಆಗಮಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಯುವವಾಹಿನಿ ಅಡ್ವೆ ಘಟಕದ ಸದಸ್ಯರು ಹಾಗೂ ಅಡ್ವೆ, ಪಲಿಮಾರು, ಮೂಡು ಪಲಿಮಾರು, ಅವರಾಲು ಮತ್ತು ನಂದಿಕೂರು ಗ್ರಾಮಗಳ ನೂರಾರು ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮವನ್ನು ಹೆಚ್ಚಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭವು ಅಡ್ವೆ ಘಟಕದ ಅಧ್ಯಕ್ಷ ಪ್ರಸಾದ್ ಪಲಿಮಾರ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 92.57 ಶೇಕಡಾ ಅಂಕ ಗಳಿಸಿದ ತನ್ವಿ ಆರ್. ಅಮೀನ್, ಕೃಷಿಕರಾದ ಬಾಡು ಪೂಜಾರಿ, ರಮೇಶ್ ಶೆಟ್ಟಿ ಪಾರಂಬೆಟ್ಟು ಹಾಗೂ ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಘಟಕದ ಮಾಜಿ ಅಧ್ಯಕ್ಷ ಲಕ್ಷ್ಮಣ್ ಕೋಟ್ಯಾನ್ ಪಲಿಮಾರು ಅವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮ್ಯಾಕ್ಸಿಮ ಡಿ’ಸೋಜ, ಅಶೋಕ್ ದೇವಾಡಿಗ, ಗಿರೀಶ್ ಪಲಿಮಾರ್, ವೈ. ಸುಧೀರ್ ಕುಮಾರ್, ಪ್ರಸಾದ್ ಪಲಿಮಾರ್, ನವೀನ್ ಚಂದ್ರ ಸುವರ್ಣ ಹಾಗೂ ಯೋಗೀಶ್ ಸುವರ್ಣ ಉಪಸ್ಥಿತರಿದ್ದರು. ಅತಿಥಿಗಳು ಕಾರ್ಯಕ್ರಮದ ಯಶಸ್ಸನ್ನು ಶ್ಲಾಘಿಸಿ ಯುವವಾಹಿನಿಯ ಸಮಾಜಮುಖಿ ಕಾರ್ಯಗಳನ್ನು ಅಭಿನಂದಿಸಿದರು.
ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಘಟಕದ ಪ್ರಥಮ ಉಪಾಧ್ಯಕ್ಷ ಆನಂದ್ ಸಾಲ್ಯಾನ್ ಅವರ ಕೊಡುಗೆಯಾಗಿ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳಿಗೆ ವಿಶೇಷ ಬಹುಮಾನವಾಗಿ ಬೆಳ್ಳಿಯ ನಾಣ್ಯ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶರತ್ ಅಡ್ವೆ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ನೀಡಿದರು


