ಉಡುಪಿ, ಜೂನ್ 25: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ “ಮನೆಗೊಂದು ಮರ – ಊರಿಗೊಂದು ವನ” ಅಭಿಯಾನಕ್ಕೆ ಗುರುವಾರ ಸಂಜೆ ಕಟಪಾಡಿಯಲ್ಲಿರುವ ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಸಂದೇಶ್ ಕಟಪಾಡಿ ಅವರ ನಿವಾಸದ ಪರಿಸರದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ಹಾಗೂ ಯುವವಾಹಿನಿ (ರಿ.) ಉಡುಪಿ ಘಟಕದ ಸಮಾಜ ಸೇವಾ ನಿರ್ದೇಶಕ ಸುಜಿತ್ ಮಟ್ಟು ಅವರು ಗಿಡಗಳನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಘಟಕದ ಅಧ್ಯಕ್ಷ ವಿನೋದ್ ಮಂಚಿ, ಮುಂದಿನ ದಿನಗಳಲ್ಲಿ ನಡೆಯುವ ಪ್ರತಿಯೊಂದು ಗುರು ಸತ್ಸಂಗ ಕಾರ್ಯಕ್ರಮದ ಆತಿಥ್ಯ ವಹಿಸುವ ಮನೆಯವರಿಗೆ ಗಿಡವನ್ನು ನೀಡಿ ಪರಿಸರ ಸಂರಕ್ಷಣೆಯ ಸಂದೇಶವನ್ನು ನಿರಂತರವಾಗಿ ಸಾರುವ ಯೋಜನೆಯನ್ನು ಘಟಕ ರೂಪಿಸಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಗಿಡಗಳನ್ನು ಕೊಡುಗೆಯಾಗಿ ನೀಡಿದ ಘಟಕದ ಸದಸ್ಯರಾದ ಶಕುಂತಲಾ ಸುಕೇಶ್ ಹಾಗೂ ಶಾರದ ಉಮೇಶ್ ಅವರನ್ನು ಘಟಕದ ವತಿಯಿಂದ ಅಭಿನಂದಿಸಿ ಕೃತಜ್ಞತೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರು, ಸದಸ್ಯರು, ಊರಿನ ಗಣ್ಯರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ವೀಕ್ಷಿತ್ ಅವರು ಧನ್ಯವಾದ ಸಮರ್ಪಿಸಿದರು.


