ನಮಸ್ಕಾರ……
ಮಳೆಗಾಲದ ಆಗಮನದೊಂದಿಗೆ ಪ್ರಕೃತಿ ಹೇಗೆ ಮೈದುಂಬಿ ಹಸಿರಾಗುತ್ತದೆಯೋ, ಹಾಗೆಯೇ ‘ಯುವಸಿಂಚನ’ ಪತ್ರಿಕೆಯ ಎರಡನೇ ಸಂಚಿಕೆಯೂ ನವಚೈತನ್ಯದೊಂದಿಗೆ ನಿಮ್ಮ ಕೈ ಸೇರುತ್ತಿದೆ. ಮೊದಲ ಸಂಚಿಕೆಯನ್ನು ಪ್ರೀತಿಯಿಂದ ಆಶೀರ್ವದಿಸಿದ ಓದುಗ ಪ್ರಭುಗಳಿಗೆ ಹಾಗೂ ಶ್ರಮಿಸಿದ ಎಲ್ಲಾ ಘಟಕಗಳಿಗೆ ನನ್ನ ಅನಂತ ವಂದನೆಗಳು.

ಅಕ್ಷರ ಎಂಬುದು ಕೇವಲ ಕಪ್ಪು ಇಂಕಿನ ಗುರುತಲ್ಲ; ಅದು ಬದಲಾವಣೆಯ ಬೀಜ. ಬಿತ್ತಿದ ಪ್ರತಿ ಅಕ್ಷರವೂ ಯುವ ಮನಸ್ಸುಗಳಲ್ಲಿ ವಿಚಾರದ ಮೊಳಕೆಯೊಡೆಯಬೇಕು ಎಂಬುದು ನಮ್ಮ ಆಶಯ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೈಗಳಿಗೆ ಅಕ್ಷರಗಳೇ ಆಯುಧ. ಈ ನಿಟ್ಟಿನಲ್ಲಿ ಯುವವಾಹಿನಿಯ 35 ಘಟಕಗಳು ಕಳೆದ ತಿಂಗಳು ನಡೆಸಿದ ಸಮಾಜಮುಖಿ ಕಾರ್ಯಗಳು ಈ ಸಂಚಿಕೆಯ ಪುಟಗಳಲ್ಲಿ ದಾಖಲಾಗಿವೆ.
ನೆನಪಿಡಿ…ಒಂದು ಕವನ ಸಾಂತ್ವನ ನೀಡಬಲ್ಲದು, ಒಂದು ಲೇಖನ ದಾರಿ ತೋರಿಸಬಲ್ಲದು, ಮತ್ತು ಒಂದು ವರದಿ ಹತ್ತಾರು ಮಂದಿಗೆ ಸ್ಫೂರ್ತಿಯಾಗಬಲ್ಲದು. ಸಂಪಾದಕೀಯ ಎಂದರೆ ಕೇವಲ ಶಬ್ದಗಳ ಜೋಡಣೆಯಲ್ಲ; ಅದು ನಮ್ಮ ಸಂಘಟನೆಯ ಆಶಯಗಳ ಪ್ರತಿಧ್ವನಿ.
ಬ್ರಹ್ಮಶ್ರೀ ನಾರಾಯಣಗುರುಗಳ “ಸಂಘಟನೆಯಿಂದ ಶಕ್ತಿವಂತರಾಗಿ” ಎಂಬ ಸಂದೇಶವೇ ಈ ಪತ್ರಿಕೆಯ ಜೀವಾಳ. ನಾವು ಹಂಚಿಕೊಳ್ಳುವ ಪ್ರತಿ ಸುದ್ದಿಯೂ ಪಾರದರ್ಶಕವಾಗಿರಲಿ, ನಾವು ಬರೆಯುವ ಪ್ರತಿ ಲೇಖನವೂ ಸಮಾಜದ ಹಿತವನ್ನು ಕಾಯುವಂತಿರಲಿ.
ಈ ಸಂಚಿಕೆಗೆ ತಮ್ಮ ಸೃಜನಶೀಲ ಬರಹಗಳ ಮೂಲಕ ಮೆರುಗು ನೀಡಿದ ಸಾಹಿತಿ ಮಿತ್ರರಿಗೆ, ಸಮಯಕ್ಕೆ ಸರಿಯಾಗಿ ವರದಿಗಳನ್ನು ಕಳುಹಿಸಿದ ಎಲ್ಲಾ ಘಟಕದ ಪದಾಧಿಕಾರಿಗಳಿಗೆ ಮತ್ತು ಪ್ರತಿ ಹಂತದಲ್ಲೂ ಸಾಥ್ ನೀಡಿದ ಸಂಪಾದಕ ಮಂಡಳಿಗೆ ಕೃತಜ್ಞತೆಗಳು ಬರಹಗಳು ನಿಂತ ನೀರಾಗದಿರಲಿ, ಹರಿಯುವ ಹೊಳೆಯಂತೆ ಓದುಗರ ಮನಸ್ಸನ್ನು ಮುಟ್ಟಲಿ. ಮುಂದಿನ ಸಂಚಿಕೆಗಳಲ್ಲಿ ಇನ್ನು ಹೆಚ್ಚಿನ ವೈವಿಧ್ಯಮಯ ವಿಚಾರಗಳೊಂದಿಗೆ ನಿಮ್ಮನ್ನು ಭೇಟಿಯಾಗೋಣ.
ಯುವಸಿಂಚನ ಹರಿಯಲಿ…
ಪದಗಳ ಮೂಲಕ ಬೆಸೆಯಲಿ,
ಸೇವೆಯ ಮೂಲಕ ಬೆಳಗಲಿ.
ವಂದನೆಗಳೊಂದಿಗೆ-
ಹರೀಶ್ ವಿ. ಪಚ್ಚನಾಡಿ
ಕಾರ್ಯನಿರ್ವಾಹಕ ಸಂಪಾದಕರು.



