ಬಜಪೆ, ಜೂನ್ 21 : ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಜೂನ್ 21ರಂದು ಸ್ವಾಮಿಲಪದವಿನ “ದೇಜಮ್ಮ” ನಿವಾಸದಲ್ಲಿ ಆಯೋಜಿಸಲಾಯಿತು.

ಯುವವಾಹಿನಿ ಬಜಪೆ ಘಟಕದ ಮಾರ್ಗದರ್ಶಕರಾಗಿರುವ ಹಿರಿಯ ಸಮಾಜಸೇವಕ ಹಾಗೂ ಪರಿಸರ ಪ್ರೇಮಿಯಾದ ಸುಕುಮಾರ್ ಸಾಲ್ಯಾನ್ ಅವರ ನಿವಾಸದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುಕುಮಾರ್ ಸಾಲ್ಯಾನ್ ಅವರು, “ವರ್ಷಂಪ್ರತಿ ಪರಿಸರ ದಿನಾಚರಣೆಯಂದು ಗಿಡ ನೆಡುವುದು ಮಾತ್ರವಲ್ಲದೆ, ಅವುಗಳನ್ನು ಮರಗಳಾಗಿ ಬೆಳೆಸುವ ಜವಾಬ್ದಾರಿಯನ್ನೂ ನಾವು ಹೊತ್ತುಕೊಳ್ಳಬೇಕು. ಪರಿಸರ ಸಂರಕ್ಷಣೆಯಿಂದ ಮನುಕುಲ ಹಾಗೂ ಪ್ರಾಣಿ-ಪಕ್ಷಿಗಳು ಆರೋಗ್ಯಕರವಾಗಿ ಉಸಿರಾಡಲು ಸಾಧ್ಯವಾಗುತ್ತದೆ. ಮುಂದಿನ ಪೀಳಿಗೆಗೆ ಪರಿಸರದ ಮಹತ್ವದ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳನ್ನು ಯುವವಾಹಿನಿ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯಶೋಧ ಸುಕುಮಾರ್ ಸಾಲ್ಯಾನ್, ಚಿತ್ತಾರಂಜನ್ ಸಾಲ್ಯಾನ್, ರೋಷನ್ ಸಾಲ್ಯಾನ್ ಮತ್ತು ರೋಹನ್ ಸಾಲ್ಯಾನ್ ಕೈಜೋಡಿಸಿದರು.
ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ ಅವರು ಗಿಡ ನೆಡುವ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಟ್ಟ ಸುಕುಮಾರ್ ಸಾಲ್ಯಾನ್ ಹಾಗೂ ಅವರ ಕುಟುಂಬದವರಿಗೆ ಘಟಕದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಯುವವಾಹಿನಿಯ ಸಮಾಜಸೇವಾ ನಿರ್ದೇಶಕ ಜಯರಾಮ ಪೂಜಾರಿ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೂವರಸು, ಹಲಸು, ಮಾವು, ಅರ್ಜುನ, ಲವಂಗ ಹಾಗೂ ನೇರಳೆ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.
ಪರಿಸರ ಸಂರಕ್ಷಣೆ ಮತ್ತು ಹಸಿರು ಸಂಪತ್ತಿನ ವೃದ್ಧಿಗೆ ಪ್ರೋತ್ಸಾಹ ನೀಡುವ ಈ ವನಮಹೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.


