ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ದಿನಾಂಕ 14 ಜೂನ್ 2026 ರಂದು ಬೆಂಗಳೂರಿನ ವಿಧಾನಸೌಧದ ಬಳಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಹಾಗೂ ಸಾಂಘಿಕ ಮನೋಭಾವದಿಂದ ನೆರವೇರಿತು. .

ಸಂಘಟನಾ ಸಾಮರ್ಥ್ಯ ಶ್ಲಾಘನೀಯ : ಜೆ.ಪಿ.ಸುಧಾಕರ್
ಬೆಂಗಳೂರು ಘಟಕದ ಸಂಘಟನಾ ಸಾಮರ್ಥ್ಯ, ಸಮಯಪಾಲನೆ, ಶಿಸ್ತು ಮತ್ತು ಸದಸ್ಯರ ನಡುವಿನ ಐಕ್ಯತೆಯು ಶ್ಲಾಘನೀಯ ಎಂದು ಸಮಾರಂಭ ಉದ್ಘಾಟಿಸಿ ಮಾತನಾಡಿದ ಖ್ಯಾತ ಉದ್ಯಮಿ ಹಾಗೂ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ (ರಿ.) ದ ಸ್ಥಾಪಕಾಧ್ಯಕ್ಷರಾದ ಜೆ.ಪಿ. ಸುಧಾಕರ್ ತಿಳಿಸಿದರು
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಬೆಂಗಳೂರು ಘಟಕದ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಕಳೆದ ಒಂದು ವರ್ಷದಲ್ಲಿ ಸಂಘಟನೆಯ ಯಶಸ್ವಿಯಾಗಿ ಮುನ್ನಡೆಸಲು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಕಳೆದ ಅವಧಿಯಲ್ಲಿ ಬೆಂಗಳೂರು ಘಟಕದ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸದಸ್ಯರು ನೀಡಿದ ಸಹಕಾರವನ್ನು ಸ್ಮರಿಸಿದರು. ಘಟಕದ ಸಾಧನೆಗಳಲ್ಲಿ ಪ್ರತಿಯೊಬ್ಬ ಸದಸ್ಯರ ಪಾಲು ಮಹತ್ವದ್ದಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಿರ್ದೇಶಕರನ್ನು ಅಭಿನಂದಿಸಲಾಯಿತು.

ಪದಪ್ರದಾನ : ಆಯ್ಕೆ ಸಮಿತಿಯ ಸಂಚಾಲಕರಾದ ಪ್ರಸಾದ್ ಕುಮಾರ್ ಕಲ್ಲಾಜೆ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸಭೆಗೆ ಪರಿಚಯಿಸಿದರು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಪದಪ್ರದಾನ ನೆರವೇರಿಸಿದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಜೇತ್ ವಿ ಪೂಜಾರಿ ಮಾತನಾಡಿ ಬಲಿಷ್ಠ ಬೆಂಗಳೂರು ಘಟಕದ ಸದಸ್ಯರ ಸಹಕಾರದಿಂದ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಆತ್ಮವಿಶ್ವಾಸ ಇದೆ ಎಂದರು

ವಿದ್ಯಾನಿಧಿ ವಿತರಣೆ : 17 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಈ ಯೋಜನೆ ಯುವವಾಹಿನಿಯ ಸಾಮಾಜಿಕ ಬದ್ಧತೆಯ ಪ್ರತೀಕವಾಗಿ ಮೂಡಿಬಂದಿತು.
ಸಾಧಕರ ಸನ್ಮಾನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಹಿತ್ಯ ಕ್ಷೇತ್ರದ ಸಾಧಕ ವಿಶೇಷ ಚೇತನ ಸುಶಾಂತ್ ಕುಮಾರ್ ಕನ್ನಡಿಕಟ್ಟೆ, ವಿಶ್ವಕಪ್ ವಿಜೇತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಭಾರತೀಯ ಸೇನೆಗೆ ಆಯ್ಕೆಗೊಂಡ ಯುವಕ ವಿರಾಟ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಸಿಂಚನ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸುಶಾಂತ್ ಹಾಗೂ ಧನಲಕ್ಷ್ಮಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ಯುವಜನತೆ ಗುರಿ ಸಾಧನೆಗೆ ನಿರಂತರ ಪರಿಶ್ರಮ ಮತ್ತು ಶಿಸ್ತು ಅಗತ್ಯವೆಂದು ತಿಳಿಸಿದರು.

ಡಾ. ನಳಿನಾಕ್ಷಿ ಸಣ್ಣಪ್ಪ ಅವರು ಯುವವಾಹಿನಿಯ ಮುಖವಾಣಿ ಯುವಸಿಂಚನ ಜೂನ್ ತಿಂಗಳ ಮಾಸಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಅವರು ಮಾತನಾಡಿ ಆರೋಗ್ಯ, ಹಿರಿಯ ನಾಗರೀಕರ ಸೇವೆ, ಸಾಮಾಜಿಕ ಜವಾಬ್ದಾರಿ ಹಾಗೂ ಮೌಲ್ಯಾಧಾರಿತ ಬದುಕಿನ ಅಗತ್ಯತೆಯನ್ನು ಒತ್ತಿಹೇಳಿದರು. ಪತ್ರಕರ್ತೆ ಗೀತಾ ಅಂಚನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರಿಸಿದರು, ಈ ಸಂಧರ್ಭದಲ್ಲಿ ಅತಿಥಿಗಳನ್ನು ಗೌರವಿಸಲಾಯಿತು ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಂಪತಿಗಳನ್ನು ಗೌರವಿಸುವ ಮೂಲಕ ಸಂಘಟನೆಯ ಕುಟುಂಬಪರ ಸಂಸ್ಕೃತಿಯನ್ನು ಪ್ರದರ್ಶಿಸಲಾಯಿತು. ನಂತರ ಆರಂಭದ ದಿನಗಳಿಂದಲೇ ಬೆಂಗಳೂರಿನಲ್ಲಿ ಯುವವಾಹಿನಿಯ ಭದ್ರ ಬುನಾದಿಗೆ ಸಹಕರಿಸಿದ ಸದಸ್ಯರನ್ನು ಯುವ ಶ್ರಮಿಕ ಪ್ರಶಸ್ತಿ ನೀಡಿ ಸನ್ಮಾನಿಸಿ ಅವರ ಸೇವಾ ಮನೋಭಾವವನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು 2025-26ನೇ ಸಾಲಿನ ವಾರ್ಷಿಕ ವರದಿ ಯನ್ನು ಮಂಡಿಸಿ, ಕಳೆದ ಅವಧಿಯಲ್ಲಿ ಬೆಂಗಳೂರು ಘಟಕವು ಹಮ್ಮಿಕೊಂಡ ವಿವಿಧ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸೇವಾ ಕಾರ್ಯಕ್ರಮಗಳ ಸಮಗ್ರ ವಿವರವನ್ನು ಸಭೆಯ ಮುಂದಿಟ್ಟರು.

ಕೇಂದ್ರ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಅವರಿಗೆ ಗೌರವ ಸಮರ್ಪಿಸಿ ಅಭಿನಂದಿಸಲಾಯಿತು. ತಮ್ಮ ಭಾಷಣದಲ್ಲಿ ಅಶೋಕ್ ಕುಮಾರ್ ಅವರು ಯುವವಾಹಿನಿಯ ಭವಿಷ್ಯದ ಯೋಜನೆಗಳು, ಸಂಘಟನಾ ಬಲವರ್ಧನೆ ಹಾಗೂ ಸಮಾಜಮುಖಿ ಕಾರ್ಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವಿವಿಧ ಘಟಕಗಳಿಂದ ಆಗಮಿಸಿದ್ದ ಪದಾಧಿಕಾರಿಗಳು ಹಾಗೂ ಸದಸ್ಯರು ಬೆಂಗಳೂರು ಘಟಕಕ್ಕೆ ಶುಭ ಹಾರೈಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಂತರ ವಿದ್ಯಾನಿಧಿ ಯೋಜನೆಗಾಗಿ ಆಯೋಜಿಸಲಾಗಿದ್ದ ಲಕ್ಕಿಡಿಪ್ ಡ್ರಾ ನಡೆಯಿತು.
ಕಳೆದ ಒಂದು ವರ್ಷದಲ್ಲಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯನ್ನು ಸನ್ಮಾನಿಸಿ ಅವರ ಸೇವೆಯನ್ನು ಗೌರವಿಸಲಾಯಿತು. ನಿಯೋಜಿತ ಕಾರ್ಯದರ್ಶಿ ಮನೋಜ್ ಅವರು ಧನ್ಯವಾದ ಸಮರ್ಪಣೆಯ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಅತಿಥಿಗಳು, ಸದಸ್ಯರು, ದಾನಿಗಳು, ಸ್ವಯಂಸೇವಕರು ಹಾಗೂ ಸಂಘಟನೆಯ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆ ನಿಖರವಾಗಿ 9:00 ಗಂಟೆಗೆ ಆರಂಭಗೊಂಡವು. ಮಾಜಿ ಅಧ್ಯಕ್ಷರಾದ ಕಿಶನ್ ಪೂಜಾರಿ ಅವರ ನೇತೃತ್ವದ “ಸ್ವರಾಯನ” ತಂಡವು ಅದ್ಭುತ ಭಕ್ತಿ ಗಾಯನವನ್ನು ಪ್ರಸ್ತುತಪಡಿಸಿ ಸಭಿಕರನ್ನು ಭಕ್ತಿರಸದ ಲೋಕಕ್ಕೆ ಕೊಂಡೊಯ್ದಿತು. ಅವರ ಸುಮಧುರ ಗಾಯನವು ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮೆರುಗು ನೀಡಿತು. ನಂತರ ಬೆಂಗಳೂರು ಘಟಕದ ಸದಸ್ಯರು ಹಾಗೂ ಮಕ್ಕಳಿಂದ ವೈವಿಧ್ಯಮಯ ನೃತ್ಯ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಪ್ರತಿಭೆ, ಉತ್ಸಾಹ ಮತ್ತು ಸಂಸ್ಕೃತಿಯ ಸಮನ್ವಯದೊಂದಿಗೆ ಮೂಡಿಬಂದ ಈ ಕಾರ್ಯಕ್ರಮಗಳು ನೆರೆದಿದ್ದವರಿಂದ ಭಾರೀ ಮೆಚ್ಚುಗೆಗೆ ಪಾತ್ರವಾದವು ಹಾಗೂ ಸಮಾರಂಭದ ವಾತಾವರಣವನ್ನು ಮತ್ತಷ್ಟು ರಂಗೇರಿಸಿದವು.
ತತ್ಸ್ಯ ಕೋಟ್ಯಾನ್ ಅವರು ಪ್ರಾರ್ಥನೆ ನೆರವೇರಿಸಿ ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಸ್ಪರ್ಶ ನೀಡಿದರು. ಬೆಂಗಳೂರು ಘಟಕದ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಅವರು ಸ್ವಾಗತ ಭಾಷಣದ ಮೂಲಕ ಆಗಮಿಸಿದ ಎಲ್ಲ ಗಣ್ಯರನ್ನು ಹಾಗೂ ಸದಸ್ಯರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಅಧಿಕೃತವಾಗಿ ಮುಕ್ತಾಯಗೊಂಡಿತು. ಜಯರಾಜ್ ಅಮೀನ್ ಮತ್ತು ಮಧುಶ್ರೀ ಬಂಗೇರ ಕಾರ್ಯಕ್ರಮವನ್ನು ನಿರೂಪಿಸಿದರು. ಕೇಂದ್ರ ಸಮಿತಿಯ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗಣ್ಯ ಅತಿಥಿಗಳು, ಸದಸ್ಯರು ಮತ್ತು ಕುಟುಂಬಸ್ಥರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭದ ಯಶಸ್ಸಿಗೆ ಸಾಕ್ಷಿಯಾದರು
ಅತ್ಯುತ್ತಮ ಯೋಜನೆ, ಸಮಯಪಾಲನೆ, ಶಿಸ್ತು, ಸಾಂಘಿಕತೆ ಮತ್ತು ಸೇವಾ ಮನೋಭಾವದ ಮೂಲಕ ಬೆಂಗಳೂರು ಘಟಕದ ಪದಗ್ರಹಣ ಸಮಾರಂಭವು ಯಶಸ್ವಿಯಾಗಿ ನೆರವೇರಿದ್ದು, ಯುವವಾಹಿನಿಯ ಸಂಘಟನಾ ಶಕ್ತಿಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು.


