ಮಂಗಳೂರು: ವರ್ಷದಲ್ಲಿ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ನಡೆಯುವ ಕೊಟ್ಟಿಯೂರು ಪರಶಿವನ ಜಾತ್ರೆಯ ಅಂಗವಾಗಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಜೂನ್ 6, 2026ರಂದು ವಿಶೇಷ ಕ್ಷೇತ್ರಯಾತ್ರೆಯನ್ನು ಆಯೋಜಿಸಲಾಯಿತು.

ರಾತ್ರಿ 8.30 ಗಂಟೆಗೆ ಮಂಗಳೂರಿನಿಂದ ಹೊರಟ ಯಾತ್ರಿಕರು ಮುಂಜಾನೆ ಸುಮಾರು 4 ಗಂಟೆಗೆ ಕೊಟ್ಟಿಯೂರು ಪುಣ್ಯಕ್ಷೇತ್ರವನ್ನು ತಲುಪಿದರು. ಪವಿತ್ರ ವಾವಲಿ ನದಿಯಲ್ಲಿ ಸ್ನಾನ ಮಾಡಿ, ಮಡಿ ಬಟ್ಟೆಯಲ್ಲಿ ಕ್ಷೇತ್ರ ಪ್ರದಕ್ಷಿಣೆ ಸಲ್ಲಿಸಿ, ಭಕ್ತಿಭಾವದಿಂದ ಪರಶಿವ ಮತ್ತು ಸತಿಯ ದರ್ಶನ ಪಡೆದರು.
ಕೊಟ್ಟಿಯೂರು ಕ್ಷೇತ್ರವು ತನ್ನ ವಿಶಿಷ್ಟ ಆಧ್ಯಾತ್ಮಿಕ ಹಾಗೂ ಪರಿಸರ ಸ್ನೇಹಿ ಪರಂಪರೆಯಿಂದ ಭಕ್ತರನ್ನು ಆಕರ್ಷಿಸುತ್ತದೆ. ಆಕಾಶ ಮತ್ತು ಮಳೆಗೆ ಸಂಪೂರ್ಣವಾಗಿ ತೆರೆದುಕೊಂಡಿರುವ ಸ್ವಯಂಭೂ ಶಿವಲಿಂಗ, ಸ್ಥಳೀಯ ಹಾಗೂ ವೈ ಅರ್ಹ ವಸ್ತುಗಳಿಂದ ನಿರ್ಮಿಸಲಾದ ದೇವಾಲಯದ ವಿನ್ಯಾಸ, ಪ್ರಕೃತಿ ಮತ್ತು ದೈವತ್ವದ ಅವಿನಾಭಾವ ಸಂಬಂಧವನ್ನು ಸಾರುತ್ತದೆ. ಸರಳತೆ, ಸುಸ್ಥಿರತೆ ಮತ್ತು ಪ್ರಕೃತಿಯೊಂದಿಗೆ ಹೊಂದಾಣಿಕೆಯ ಜೀವನಶೈಲಿಯ ಸಂದೇಶವನ್ನು ಈ ಕ್ಷೇತ್ರ ಭಕ್ತರಿಗೆ ನೀಡುತ್ತದೆ.
ಈ ಕ್ಷೇತ್ರವು ಶಿವ–ಸತಿಯ ಪೌರಾಣಿಕ ಕಥೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ದಕ್ಷನ ಅಹಂಕಾರದಿಂದ ಉಂಟಾದ ಅವಮಾನವನ್ನು ಸಹಿಸಲಾಗದೆ ಸತಿಯು ಯೋಗಾಗ್ನಿಯಲ್ಲಿ ಲೀನವಾದಳು ಎಂಬುದು ಪುರಾಣ ಪ್ರಸಿದ್ಧ ಕಥೆ. ತನ್ನ ಪ್ರಿಯತಮೆಯನ್ನು ಕಳೆದುಕೊಂಡ ಶಿವನ ಅಪಾರ ದುಃಖ ಮತ್ತು ಕೋಪವು ವೀರಭದ್ರನ ಅವತಾರಕ್ಕೆ ಕಾರಣವಾಗಿ, ದಕ್ಷಯಾಗದ ವಿನಾಶಕ್ಕೆ ದಾರಿ ಮಾಡಿಕೊಟ್ಟಿತು. ಈ ಕಥೆಯು ಅಹಂಕಾರದ ದುಷ್ಪರಿಣಾಮ ಹಾಗೂ ನಿಸ್ವಾರ್ಥ ಪ್ರೀತಿ ಮತ್ತು ಭಕ್ತಿಯ ಮಹತ್ವವನ್ನು ಸಾರುತ್ತದೆ.
ಈ ಮಹತ್ವದ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಪುಣ್ಯಕ್ಷೇತ್ರದಲ್ಲಿ ದರ್ಶನ ಪಡೆಯುವ ಮೂಲಕ ಯಾತ್ರಿಕರು ಅಪೂರ್ವ ಆಧ್ಯಾತ್ಮಿಕ ಅನುಭವವನ್ನು ಪಡೆದರು.ಯಾತ್ರೆಯ ಅಂಗವಾಗಿ ಪರಸ್ಸಿನಿಕ್ಕಡವು ಶ್ರೀ ಮುತ್ತಪ್ಪನ್ ಕ್ಷೇತ್ರ ಹಾಗೂ ಮಡಾಯಿ ಕಾವು ಕ್ಷೇತ್ರಗಳಿಗೂ ಭೇಟಿ ನೀಡಿ ದರ್ಶನ ಪಡೆದರು.ಯಾತ್ರಾರ್ಥಿಗಳ ಸಂಪೂರ್ಣ ಸಹಕಾರದೊಂದಿಗೆ ಕ್ಷೇತ್ರಯಾತ್ರೆಯು ಯಶಸ್ವಿಯಾಗಿ ನೆರವೇರಿತು. ಯಾತ್ರೆಯಲ್ಲಿ ಘಟಕದ ಅಧ್ಯಕ್ಷರಾದ ಹರೀಶ್ ಕೆ. ಸುವರ್ಣ, ಪ್ರವಾಸ ಸಂಚಾಲಕರಾದ ಸದಾನಂದ ಪೂಜಾರಿ ಕುಳಾಯಿ, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.


