ಸುಳ್ಯ: ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ನಾಲ್ಕನೇ ತಿಂಗಳ ‘ಗುರುಸ್ಫೂರ್ತಿ’ ಕಾರ್ಯಕ್ರಮವು ಮೇ 17 ರಂದು ಬೆಳಿಗ್ಗೆ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ರಮೇಶ್ ಪೂಜಾರಿ ಜಯನಗರ ಇವರ ಗೃಹದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಜರುಗಿತು.

ದೀಪ ಪ್ರಜ್ವಲನೆ ಮತ್ತು ಭಜನೆ:
ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ರಮೇಶ್ ಪೂಜಾರಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಉದ್ಘಾಟನೆಯ ಬಳಿಕ ನೆರೆದಿದ್ದ ಸದಸ್ಯರಿಂದ ಭಕ್ತಿಪೂರ್ವಕ ಭಜನಾ ಕಾರ್ಯಕ್ರಮ ನಡೆಯಿತು. ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಈ ‘ಗುರುಸ್ಫೂರ್ತಿ’ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ.
ನಂತರ ನಡೆದ ಸಭೆಯಲ್ಲಿ ಯುವವಾಹಿನಿಯ ಮುಂದಿನ ಹಂತದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಘಟಕದ ಅಧ್ಯಕ್ಷರಾದ ಮಹೇಶ್ ಕಲ್ಪನೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಘಟಕದ ವತಿಯಿಂದ ಇತ್ತೀಚೆಗೆ ನಡೆದ ಶಿವಗಿರಿ ಯಾತ್ರೆಯ ಯಶಸ್ಸನ್ನು ಸ್ಮರಿಸಿದ್ದಲ್ಲದೆ, ಯಾತ್ರೆಗೆ ಸಹಕರಿಸಿದ ಎಲ್ಲಾ ಸದಸ್ಯರ ನಡೆಗೆ ಮೆಚ್ಚುಗೆಯ ಮಾತುಗಳನ್ನಾಡಿದರು.


