ಕುಪ್ಪೆಪದವು : “ನಾರಾಯಣ ಗುರುಗಳ ತತ್ವದಂತೆ ‘ವಿದ್ಯೆ–ಉದ್ಯೋಗ–ಸಂಪರ್ಕ’ ಎಂಬ ಧ್ಯೇಯೋದ್ದೇಶದೊಂದಿಗೆ ರಾಜ್ಯವ್ಯಾಪಿ ಬೆಳೆಯುತ್ತಿರುವ ಯುವವಾಹಿನಿ ಸಂಸ್ಥೆಯು, ಯುವಶಕ್ತಿಯನ್ನು ಸಮಾಜಸೇವೆಯತ್ತ ಕೊಂಡೊಯ್ಯುತ್ತಿರುವುದು ಹೆಮ್ಮೆಯ ವಿಚಾರ,” ಎಂದು ಶಾಸಕರಾದ ವೈ ಭರತ್ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಯುವವಾಹಿನಿ (ರಿ.) ಕುಪ್ಪೆಪದವು-ಎಡಪದವು ಘಟಕದ ವತಿಯಿಂದ ವಿದ್ಯಾನಿಧಿ ಸಹಾಯಾರ್ಥವಾಗಿ ಕಿಲೆಂಜಾರು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಘಟಕವು ಯುವಜನರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದೆ ಎಂದು ಅವರು ಶ್ಲಾಘಿಸಿದರು.
ಪಂದ್ಯಕೂಟವನ್ನು ಕಿಲೆಂಜಾರು ಅರಮನೆ ಮುಖ್ಯಸ್ಥ ದಿನೇಶ್ ಕುಮಾರ್ ಬಲ್ಲಾಳ್ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಶ್ರೀಧರ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮುತ್ತೂರು ಗ್ರಾಮ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಗುಂಡ್ಯ ಹಾಗೂ ವರಾಹ ಫೌಂಡೇಶನ್ ಅಧ್ಯಕ್ಷ ಗಿರೀಶ್ ಆಳ್ವ ಭಾಗವಹಿಸಿ ಶುಭ ಹಾರೈಸಿದರು.
ರೋಚಕವಾಗಿ ನಡೆದ ಕ್ರೀಡಾಕೂಟದಲ್ಲಿ ಕ್ರೀಡಾಸ್ಫೂರ್ತಿಯ ಪ್ರದರ್ಶನ ಕಂಡುಬಂದಿತು: ಪ್ರಥಮ ಬಹುಮಾನ: ಯೆನ್.ಎಫ್.ಸಿ (N.F.C) ಕುಪ್ಪೆಪದವು ತಂಡ. ದ್ವಿತೀಯ ಬಹುಮಾನ:ಸೆಮಿ ಲೂಸಾರ್ಸ್ ತಂಡ.
ವೇದಿಕೆಯಲ್ಲಿ ಕ್ರೀಡಾ ನಿರ್ದೇಶಕಿ ಸರಿತಾ ಸುವರ್ಣ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅಕ್ಷಿತ್ ಕುಮಾರ್, ಮಾಜಿ ಅಧ್ಯಕ್ಷರಾದ ಅಜಯ್ ಅಮೀನ್ ನಾಗಂಧಡಿ ಹಾಗೂ ಜಗದೀಶ್ ದುರ್ಗಾಕೋಡಿ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಅಕ್ಷತಾ, ಪ್ರಮುಖರಾದ ಸುಕುಮಾರ್ ಅಮೀನ್ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಅಕ್ಷಿತ್ ಕುಮಾರ್ ಸ್ವಾಗತಿಸಿ, ಸಂತೋಷ್ ಬೋಳಿಯ ವಂದಿಸಿದರು.


