ಮೂಡುಬಿದಿರೆ: ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ಸಮಾಜ ಮಂದಿರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪೂರ್ಣಾಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ದಿಶಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಮಾರೂರು ವಹಿಸಿದ್ದರು. ಈ ಸಂದರ್ಭದಲ್ಲಿ ಸಾಧಕಿ ದಿಶಾ ಪೂಜಾರಿ ಅವರಿಗೆ ರೂ. 10,000 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಘಟಕದ ಗೌರವ ಸಲಹೆಗಾರರಾದ ಪದ್ಮನಾಭ ಸಾಲ್ಯಾನ್ ಮಾತನಾಡಿ, ದಿಶಾ ಅವರ ವಿದ್ಯಾಭ್ಯಾಸಕ್ಕೆ ಸಮಾಜದ ಸಹಕಾರ ದೊರೆತಿದ್ದು, ಅದಕ್ಕೆ ಪ್ರತಿಯಾಗಿ ಅವರು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಸಮಾಜಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಸನ್ಮಾನ ಸ್ವೀಕರಿಸಿದ ದಿಶಾ ಪೂಜಾರಿ ಅವರು ಮಾತನಾಡಿ, ತಮ್ಮ ವಿದ್ಯಾಭ್ಯಾಸಕ್ಕೆ ನಿರಂತರ ಪ್ರೋತ್ಸಾಹ ಮತ್ತು ಸಹಕಾರ ನೀಡಿದ ಹಿರಿಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ. ಅವರು ದಿಶಾ ಅವರ ಸಾಧನೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಘಟಕದ ಗೌರವ ಸಲಹೆಗಾರರಾದ ಡಾ. ಯೋಗೀಶ್ ಕೈರೋಡಿ, ಪ್ರೊ. ಹರೀಶ್, ಯುವಸ್ಪಂದನ ಯೋಜನೆಯ ಅಧ್ಯಕ್ಷರಾದ ನವಾನಂದ, ಮಾಜಿ ಅಧ್ಯಕ್ಷರಾದ ಶಂಕರ ಎ. ಕೋಟ್ಯಾನ್ ಹಾಗೂ ಸುಶಾಂತ್ ಕರ್ಕೇರ, ಉಪಾಧ್ಯಕ್ಷೆ ಜೀವಿತಾ ಶಂಕರ್, ಕಾರ್ಯದರ್ಶಿ ಅಶ್ವಿನ್ ಪೂಜಾರಿ, ಕೋಶಾಧಿಕಾರಿ ಜಯಶೀಲಾ ಎಸ್. ಪೂಜಾರಿ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಗಿರೀಶ್ ಕೋಟ್ಯಾನ್ ಸ್ವಾಗತಿಸಿದರು. ಶಂಕರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


