ಮಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ವಿದ್ಯಾವಂತರು ಅತ್ಯಂತ ಜಾಗರೂಕರಾಗಿ ಇರಬೇಕು ಎಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಉರ್ವ ಪೊಲೀಸ್ ಠಾಣೆಯ ಎ.ಎಸ್.ಐ ವೇಣುಗೋಪಾಲ್ ಅವರು ತಿಳಿಸಿದರು.

ಅವರು ಏಪ್ರಿಲ್ 7 ರಂದು ಉರ್ವಸ್ಟೋರ್ನ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸೈಬರ್ ಕ್ರೈಮ್ ಹಾಗೂ ಮಾದಕವಸ್ತುಗಳ ಕುರಿತು ಮಾಹಿತಿ ಕಾರ್ಯಾಗಾರ”ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಜಾಗೃತಿಯೇ ರಕ್ಷಾಕವಚ:
ಸೈಬರ್ ಅಪರಾಧಗಳ ಜಾಲದ ಬಗ್ಗೆ ಸಮಗ್ರ ಮಾಹಿತಿ ನೀಡಿದ ವೇಣುಗೋಪಾಲ್ ಅವರು, ಪೋಲೀಸ್ ಇಲಾಖೆಯಲ್ಲಿ ಲಭ್ಯವಿರುವ ಹೆಲ್ಪ್ಲೈನ್ ಸಂಖ್ಯೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಕುಟುಂಬದವರು ಮತ್ತು ಸ್ನೇಹಿತರು ಇಂತಹ ಮೋಸದ ಬಲೆಗೆ ಬೀಳದಂತೆ ಪರಸ್ಪರ ಎಚ್ಚರಿಸುತ್ತಿರಬೇಕು ಎಂದು ಸಲಹೆ ನೀಡಿದರು.
ನೈಜ ಘಟನೆಗಳ ಮೂಲಕ ಎಚ್ಚರಿಕೆ:
ಮತ್ತೊಬ್ಬ ಪೊಲೀಸ್ ಅಧಿಕಾರಿ ಪ್ರಮೋದ್ ಅವರು ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಿರಿವಂತರು ಮತ್ತು ವಿದ್ಯಾವಂತರೇ ಸೈಬರ್ ವಂಚಕರ ಸುಲಭದ ತುತ್ತಾಗುತ್ತಿದ್ದಾರೆ. ಸೈಬರ್ ಅಪರಾಧಗಳು ಸಂಭವಿಸುವ ವಿವಿಧ ಹಂತಗಳು ಮತ್ತು ಅವುಗಳ ಗಂಭೀರ ಪರಿಣಾಮಗಳನ್ನು ನಾವು ನೈಜ ಘಟನೆಗಳ ಮೂಲಕ ಅರ್ಥಮಾಡಿಕೊಳ್ಳಬೇಕಿದೆ,” ಎಂದು ವಿವರಿಸಿದರು.
ಮಹಿಳಾ ಪೊಲೀಸ್ ಅಧಿಕಾರಿ ಕುಸುಮ ಅವರು ಪೊಲೀಸ್ ಇಲಾಖೆಯ ಪರವಾಗಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸಂಯೋಜಿಸುವಲ್ಲಿ ಸಹಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾದ ಹರೀಶ್ ಕೆ. ಸುವರ್ಣ ವಹಿಸಿ ಗಣ್ಯರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಘಟಕದ ಕಾರ್ಯದರ್ಶಿ ಉಷಾ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಉಷಾ ಅವರು ವಂದನಾರ್ಪಣೆ ಮಾಡಿದರು.


