ಉಡುಪಿ, ಮಾ.22: ಯುವವಾಹಿನಿ (ರಿ.) ಉಡುಪಿ ಘಟಕದ ಪದಗ್ರಹಣ ಸಮಾರಂಭವು ಮಾರ್ಚ್ 22, 2026ರಂದು ಉಡುಪಿ ಘಟಕದ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ನಮಸ್ಕರಿಸಿ ದೀಪ ಪ್ರಜ್ವಲಿಸುವ ಮೂಲಕ ಪ್ರಾರಂಭವಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ದಯಾನಂದ ಕರ್ಕೇರ ವಹಿಸಿದ್ದರು. ಕಾರ್ಯದರ್ಶಿ ಮಹೇಶ್ ಮಲ್ಪೆ ರಜತ ವರ್ಷದ ವರದಿಯನ್ನು ವಾಚಿಸಿದರು. ಆಯ್ಕೆ ಸಮಿತಿಯ ಸಂಚಾಲಕರು, ನಿಕಟಪೂರ್ವ ಅಧ್ಯಕ್ಷೆ ಅಮಿತಾಂಜಲಿ ಕಿರಣ್ ನೂತನ ಕಾರ್ಯಕಾರಿ ಸಮಿತಿಯನ್ನು ಪರಿಚಯವನ್ನು ಸಭೆಯ ಮುಂದೆ ಪ್ರಸ್ತುತಪಡಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಉಡುಪಿ ಘಟಕವು ಮಾದರಿ ಘಟಕವಾಗಿ ರಜತ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಸಂಜಿತ್ ಎಸ್ ಅಂಚನ್, ಸಹಾಯಕ ಪ್ರಾಧ್ಯಾಪಕರು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್, ಮೈಸೂರು, ಸಭೆಯನ್ನುದ್ದೇಶಿಸಿ ಮಾತನಾಡಿ ತಾನೂ ಯುವವಾಹಿನಿಯ ಸದಸ್ಯನಾಗಿದ್ದು ಯುವಕರಿಗೆ ಸ್ಪೂರ್ತಿದಾಯಕ ಸಂದೇಶ ನೀಡಿದರು ಹಾಗೂ ಸಮಾಜಕ್ಕೆ ತಮ್ಮಿಂದಾಗುವ ಸಹಕಾರವನ್ನು ಸೂಚಿಸಿದರು.
ಮುಖ್ಯ ಅತಿಥಿಗಳಾಗಿ ಯೋಗಿಶ್ ಕೋಟ್ಯಾನ್, ಅಧ್ಯಕ್ಷರು, ಬಿಲ್ಲವ ಮಹಾಜನ ಸಂಘ ಉದ್ಯಾವರ ಹಾಗೂ ಶಿವರಾಮ್ ಜಿ ಅಮೀನ್, ಸಂಘಟನಾ ಕಾರ್ಯದರ್ಶಿ, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಉಪಸ್ಥಿತರಿದ್ದು ಯುವವಾಹಿನಿಯ ಸಮಾಜಮುಖಿ ಚಟುವಟಿಕೆಗಳನ್ನು ಶ್ಲಾಘಿಸಿ ನೂತನ ತಂಡಕ್ಕೆ ಶುಭಾಶಯ ಕೋರಿದರು.

ನೂತನ ಅಧ್ಯಕ್ಷ ವಿನೋದ್ ಮಂಚಿ ಮಾತನಾಡಿ ಯುವವಾಹಿನಿಯ ಮುನ್ನಡೆಗೆ ಎಲ್ಲರ ಸಹಕಾರ ಕೋರಿದರು. ವೇದಿಕೆಯಲ್ಲಿ ರಜತ ಸಂಭ್ರಮದ ಸಂಚಾಲಕ ರಘುನಾಥ ಮಾಬಿಯನ್, ಗೌರವ ಸಲಹೆಗಾರ ಶಂಕರ್ ಪೂಜಾರಿ (ದ್ವಾರಕ) ಹಾಗೂ ಕಾರ್ಯದರ್ಶಿ ಮಹೇಶ್ ಮಲ್ಪೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷ ದಯಾನಂದ ಕರ್ಕೇರ, ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಹಾಗೂ ರಜತ ಸಂಭ್ರಮದ ಸಂಚಾಲಕ ರಘುನಾಥ ಮಾಬಿಯನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಘಟಕದ ವತಿಯಿಂದ ಗೌರವಿಸಲಾಯಿತು. ನಿರ್ಗಮನ ಅಧ್ಯಕ್ಷ ದಯಾನಂದ ಕರ್ಕೇರ ಕೃತಜ್ಞತೆ ಸಲ್ಲಿಸಿದರು. ನೂತನ ಕಾರ್ಯದರ್ಶಿ ವೀಕ್ಷಿತ್ ಕೆಮ್ತೂರು ಧನ್ಯವಾದ ವಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತೇಜೇಶ್ ಬಂಗೇರ ನಿರೂಪಿಸಿದರು.


