ಮಂಗಳೂರು: ಪ್ರಕೃತಿಯೊಡನೆ ಮನುಷ್ಯನ ಬದುಕು ಆಳವಾಗಿ ಬೆಸೆದುಕೊಂಡಿರುವುದರಿಂದ, ಆರೋಗ್ಯದ ಮೂಲವೂ ಪ್ರಕೃತಿಯಲ್ಲೇ ಅಡಗಿದೆ ಎಂದು ಖ್ಯಾತ ಆಯುರ್ವೇದ ತಜ್ಞ ಡಾ. ಎನ್.ಟಿ. ಅಂಚನ್ ಅಭಿಪ್ರಾಯಪಟ್ಟರು. ಆಯುರ್ವೇದವು ಕೇವಲ ಚಿಕಿತ್ಸಾ ವಿಧಾನವಲ್ಲ, ಅದು ಸಮಗ್ರ ಜೀವನಶೈಲಿ ಎಂದು ಅವರು ವಿವರಿಸಿದರು.
ಗಿಡಮೂಲಿಕೆಗಳ ಬಳಕೆಯ ಕುರಿತು ಮಾತನಾಡಿದ ಅವರು, ನಮ್ಮ ಸುತ್ತಮುತ್ತಲೇ ದೊರೆಯುವ ಅನೇಕ ಸಸ್ಯಗಳಲ್ಲಿ ಅಪಾರ ಔಷಧೀಯ ಗುಣಗಳಿವೆ. ತುಳಸಿ, ಅಶ್ವಗಂಧಾ, ನೀಮ್, ಅಲೋವೆರಾ ಮುಂತಾದ ಗಿಡಮೂಲಿಕೆಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹಲವು ದೀರ್ಘಕಾಲದ ಕಾಯಿಲೆಗಳ ನಿಯಂತ್ರಣದಲ್ಲೂ ಮಹತ್ವದ ಪಾತ್ರವಹಿಸುತ್ತವೆ ಎಂದರು.

ಇಂದಿನ ಆಧುನಿಕ ಜೀವನಶೈಲಿಯಿಂದ ಉಂಟಾಗುತ್ತಿರುವ ಒತ್ತಡ, ಅಸಮರ್ಪಕ ಆಹಾರ ಪದ್ಧತಿ ಮತ್ತು ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಅನೇಕ ರೋಗಗಳಿಗೆ ಕಾರಣವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಆಯುರ್ವೇದದ ಸರಳ ವಿಧಾನಗಳು — ಸಮತೋಲನಯುತ ಆಹಾರ, ಯೋಗ, ಪ್ರಾಣಾಯಾಮ ಮತ್ತು ಗಿಡಮೂಲಿಕೆಗಳ ನಿಯಮಿತ ಬಳಕೆ — ಆರೋಗ್ಯ ಕಾಪಾಡುವಲ್ಲಿ ಪರಿಣಾಮಕಾರಿ ಎಂದು ಹೇಳಿದರು.
ಆಯುರ್ವೇದದಲ್ಲಿ ರೋಗ ನಿವಾರಣೆಗಿಂತಲೂ ರೋಗ ನಿರೋಧನೆಗೆ ಹೆಚ್ಚಿನ ಮಹತ್ವವಿದೆ ಎಂದು ತಿಳಿಸಿದ ಅವರು, ದೈನಂದಿನ ಜೀವನದಲ್ಲಿ ಸಣ್ಣಸಣ್ಣ ಕ್ರಮಗಳನ್ನು ಅನುಸರಿಸುವುದರಿಂದ ದೊಡ್ಡ ಕಾಯಿಲೆಗಳನ್ನು ತಪ್ಪಿಸಬಹುದು ಎಂದು ಹೇಳಿದರು.
ಪ್ರಕೃತಿಯಲ್ಲಿರುವ ಈ ಅಮೂಲ್ಯ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದರಿಂದ ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಬಹುದು. ಆಯುರ್ವೇದದ ಈ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರ ಡಾ. ಎನ್.ಟಿ.ಅಂಚನ್ ತಿಳಿಸಿದರು.

ಅವರು ಯುವವಾಹಿನಿ (ರಿ.) ಮಂಗಳೂರು ಘಟಕ ಹಾಗೂ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇವರ ಜಂಟಿ ಆಶ್ರಯದಲ್ಲಿ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇವರ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ದಿನಾಂಕ 22-03-2026 ರಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಗ್ಲಾಸ್ ಹೌಸ್ ಸಭಾಂಗಣದಲ್ಲಿ ಆಯೋಜಿಸಲಾದ ಆಯುರ್ವೇದ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿನಿ ಕಾರ್ಯಾಗಾರ ನಡೆಸಿಕೊಟ್ಟರು. ಈ ಕಾರ್ಯಗಾರದಲ್ಲಿ ಸುಮಾರು 217 ಶಿಬಿರಾರ್ಥಿಗಳು ಭಾಗವಹಿಸಿದ್ದರು ಅವರ ಪ್ರಶ್ನೆಗಳಿಗೆ ಡಾ. ಎನ್.ಟಿ.ಅಂಚನ್ ಅವರು ಸ್ಪಷ್ಟ ಹಾಗೂ ಪರಿಣಾಮಕಾರಿ ಉತ್ತರಗಳನ್ನು ನೀಡಿ ಕಾರ್ಯಗಾರಕ್ಕೆ ಮತ್ತಷ್ಟು ಮೌಲ್ಯ ಹೆಚ್ಚಿಸಿದರು. ಈ ಸಂದರ್ಭದಲ್ಲಿ ನಾಟಿ ವೈದ್ಯೆಯರಾದ ಮೀನಾಕ್ಷಿ ನಾರಾಯಣ ಆಚಾರ್, ಭಾಗೀರಥಿ, ಗಿರಿಜಾ ಕೋಟ್ಯಾನ್ , ಭವಾನಿ ಇವರ ಸಾಧನೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು
ಚಿನ್ಮಯಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ಅಧ್ಯಕ್ಷತೆ ವಹಿಸಿದರು. ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾದ ಹರೀಶ್ ಕೆ. ಸುವರ್ಣ ಸ್ವಾಗತಿಸಿದರು. ಆಕಾಶವಾಣಿಯ ನಿವೃತ್ತ ಉದ್ಘೋಷಕಿ ರೇಖಾ ನಾಗೇಶ್ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಜೈರಾಜ್ ಸೋಮಸುಂದರ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಸಂಜೀವ ಪೂಜಾರಿ ಬಿರ್ವ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ವಿದ್ಯಾ ರಾಕೇಶ್ ಹಾಗೂ ಮಹಿಳಾ ಸಂಘಟನಾ ನಿರ್ದೇಶಕಿ ಸುಧಾ ಸುರೇಶ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಯುವವಾಹಿನಿ ಮಂಗಳೂರು ಘಟಕದ ಕಾರ್ಯದರ್ಶಿ ಉಷಾ ಹಾಗೂ ಮಹಿಳಾ ಸಂಘಟನಾ ನಿರ್ದೇಶಕಿ ಜಯಂತಿ ಕೋಟ್ಯಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಔಷಧೀಯ ಗಿಡಗಳನ್ನು ವಿತರಿಸಲಾಯಿತು. ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಹಾಗೂ ಆಯುರ್ವೇದದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಈ “ದೇಯಿ ಬೈದ್ಯತಿ” ಆಯುರ್ವೇದ ಆರೋಗ್ಯ ಮಾಹಿತಿ ಕಾರ್ಯಗಾರ ಮಹತ್ವದ ಪಾತ್ರ ವಹಿಸಿತು. ಮಂಗಳೂರು ಘಟಕದ ಕಾರ್ಯದರ್ಶಿ ಉಷಾ.ಕೆ ಸನ್ಮಾನ ಪತ್ರ ವಾಚಿಸಿದರು, ಮಹಿಳಾ ಸಂಘಟನಾ ಕಾರ್ಯದರ್ಶಿ ಜಯಂತಿ ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು, ಡಾ|| ರಾಕೇಶ್ ಕುಮಾರ್ ಹಾಗೂ ರಶ್ಮಿ ಕಾರ್ಯಕ್ರಮದ ನಿರೂಪಣೆ ಮಾಡಿದರು


