ಬಜಪೆ : ಯುವವಾಹಿನಿ (ರಿ.) ಬಜಪೆ ಘಟಕದ 12ನೇ ವರ್ಷದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ಮಾರ್ಚ್ 8, 2026 ರಂದು ಬಜಪೆಯ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆಯಿತು

ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣಗುರುಗಳ ಪೂಜೆಯೊಂದಿಗೆ ಆರಂಭಗೊಂಡು . ಘಟಕದ 11ನೇ ವರ್ಷದ ಸವಿ ನೆನಪಿಗಾಗಿ ಸಭಾಭವನಕ್ಕೆ ಕೊಡುಗೆಯಾಗಿ ನೀಡಲಾದ ಶುದ್ಧ ಬಿಸಿ ಮತ್ತು ತಂಪು ನೀರಿನ ಘಟಕವನ್ನು ಎಲ್.ವಿ. ಅಮೀನ್ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಕಾರ್ಯದರ್ಶಿ ಶರ್ಮಿಳಾ ಚಂದ್ರಶೇಖರ್ ಅವರು ಘಟಕದ ಕಳೆದ ಒಂದು ವರ್ಷದ ಸಮಾಜಮುಖಿ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಗ್ರ ವರದಿಯನ್ನು ಮಂಡಿಸಿದರು.

ಕಾರ್ಯಕ್ರಮವನ್ನು ರವೀಂದ್ರ ಕೆಂಜಾರ್ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾದ ಡಾ. ಶೇಷಪ್ಪ ಅಮೀನ್ ಅವರು ಮಾತನಾಡಿ, ಘಟಕದ 11 ವರ್ಷಗಳ ಸೇವಾ ಪಯಣವನ್ನು ಶ್ಲಾಘಿಸಿ ಯುವಜನರ ಸಮಾಜಮುಖಿ ಚಟುವಟಿಕೆಗಳ ಅಗತ್ಯತೆಯನ್ನು ಒತ್ತಿಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಹಾಯ ನಿಧಿಯನ್ನು ಲಲಿತಾ ಪೂಜಾರ್ತಿ ಹಾಗೂ ಪರಮಾನಂದ ಸಾಲ್ಯಾನ್ ಅವರಿಗೆ ವಿತರಿಸಲಾಯಿತು. ಜೊತೆಗೆ ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಪದಗ್ರಹಣ ಸಮಾರಂಭದಲ್ಲಿ ಆಯ್ಕೆ ಸಮಿತಿಯ ಸಂಚಾಲಕರಾದ ನಿರಂಜನ್ ಪೂಜಾರಿ ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸಭೆಗೆ ಪರಿಚಯಿಸಿದರು

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ರೋಹಿತ್ ಪೂಜಾರಿ ಅವರು ಘಟಕದ ನೂತನ ಅಧ್ಯಕ್ಷರಾಗಿ ಹಾಗೂ ಸುಚಿತಾ ದೇವರಾಜ್ ಅವರು ಕಾರ್ಯದರ್ಶಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅಶೋಕ್ ಕುಮಾರ್ ಪಡ್ಪು ಅವರು ನೂತನ ತಂಡಕ್ಕೆ ಶುಭ ಹಾರೈಸಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದರು. ಎಲ್.ವಿ. ಅಮೀನ್ ಅವರು ಘಟಕದ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿದರು.
ಈ ಸಂದರ್ಭದಲ್ಲಿ ಘಟಕದ ಸಾಧನೆಗೆ ಯುವವಾಹಿನಿ ಕೇಂದ್ರ ಸಮಿತಿಯಿಂದ ದೊರೆತ “ಅತ್ಯುತ್ತಮ ಕ್ರಿಯಾಶೀಲ ಘಟಕ ಪ್ರಶಸ್ತಿ”ಯನ್ನು ವಿಶೇಷವಾಗಿ ಪ್ರಸ್ತಾಪಿಸಲಾಯಿತು. ಡಾ. ಅಪೂರ್ವ ಪೊರ್ಕೋಡಿ ಅವರನ್ನು ಪಿಎಚ್ಡಿ ಸಾಧನೆಗಾಗಿ ಸನ್ಮಾನಿಸಲಾಯಿತು.

ನೂತನ ಅಧ್ಯಕ್ಷ ರೋಹಿತ್ ಪೂಜಾರಿ ಅವರು ಎಲ್ಲರ ಸಹಕಾರ ಕೋರಿದರು. ಅಧ್ಯಕ್ಷೆಯಾಗಿದ್ದ ರೇಣುಕಾ ಶೇಖರ್ ಅವರು ತಮ್ಮ ಅವಧಿಯ ಸಾಧನೆಗಳನ್ನು ಸ್ಮರಿಸಿ ತಂಡದ ಪರಿಶ್ರಮವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಕ್ಕಳು ಹಾಗೂ ಘಟಕದ ಸದಸ್ಯರನ್ನು ಗೌರವಿಸಲಾಯಿತು. ಸುಚಿತಾ ದೇವರಾಜ್ ಧನ್ಯವಾದ ಸಮರ್ಪಿಸಿದರು. ಸಂಧ್ಯಾ ಕುಳಾಯಿ ಮತ್ತು ಸಾನ್ವಿ ಕಾರ್ಯಕ್ರಮವನ್ನು ನಿರೂಪಿಸಿದರು.


