ಮಂಗಳೂರು : ಮಹಿಳಾ ದಿನಾಚರಣೆಯ ಸಂಭ್ರಮವು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನವೂ ಸಂತೋಷ, ಸಂಭ್ರಮ ಹಾಗೂ ಸಕಾರಾತ್ಮಕ ಚಿಂತನೆಗಳೊಂದಿಗೆ ಆಚರಿಸಬೇಕಾಗಿದೆ ಎಂದು ರೂವಾರಿ.ಕಾಮ್ ಡಿಜಿಟಲ್ ಪತ್ರಿಕೆಯ ಪ್ರಧಾನ ಸಂಪಾದಕಿ ರತ್ನಾವತಿ ಜೆ. ಬೈಕಾಡಿ ಅಭಿಪ್ರಾಯಪಟ್ಟರು.

ಅವರು ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಮಾರ್ಚ್ 14, 2026 ರಂದು ಸಂಜೆ 5 ಗಂಟೆಗೆ ಯುವವಾಹಿನಿ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು “ಇತರರು ಏನು ಹೇಳುತ್ತಾರೆ” ಎಂಬ ಕೀಳರಿಮೆಯನ್ನು ತೊರೆದು, ತಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಮನಸ್ಸಿಗೆ ಒಪ್ಪುವ ಕಾರ್ಯಗಳನ್ನು ಧೈರ್ಯದಿಂದ ನಿರ್ವಹಿಸಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಮುಂದುವರಿದಾಗ ಮಾತ್ರ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ. ಮಹಿಳಾ ಸಂಘಟನೆಗಳು ಮಹಿಳೆಯರನ್ನು ಪ್ರೇರೇಪಿಸುವ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗುತ್ತದೆ. ಈ ದಿಕ್ಕಿನಲ್ಲಿ ಯುವವಾಹಿನಿ ಮಹಿಳಾ ಘಟಕ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಮಹಿಳಾ ಸಂಘಟನಾ ನಿರ್ದೇಶಕಿ ಸುಧಾ ಸುರೇಶ್ ಹಾಗೂ ಸಂಘಟನಾ ಕಾರ್ಯದರ್ಶಿ ಹರೀಶ್ ಎ. ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ತುಳುನಾಡಿನ ಸಂಸ್ಕೃತಿಕ ಕಲೆಯಾದ ಪಾಡ್ದನದಲ್ಲಿ ಸಾಧನೆಗೈದ ಲೀಲಾವತಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಬಿಬಿಎ ಪದವಿಯಲ್ಲಿ ಐದನೇ ರ್ಯಾಂಕ್ ಪಡೆದ ಶ್ರೀಗೌರಿ ಮತ್ತು ರತ್ನಾವತಿ ಜೆ. ಬೈಕಾಡಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಲೀಲಾವತಿ ಪಾಡ್ದನವನ್ನು ಹಾಡಿ ಸಭಿಕರಿಗೆ ಅದರ ವೈವಿಧ್ಯತೆಯನ್ನು ಪರಿಚಯಿಸಿದರು. ವೇದಿಕೆ ನಿರೂಪಣೆ, ರಂಗೋಲಿ ಹಾಗೂ ವಿವಿಧ ಮನರಂಜನಾ ಸ್ಪರ್ಧೆಗಳಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಘಟಕದಿಂದ ಆಯೋಜಿಸಲಾದ ರಾಜಸ್ಥಾನ ಪ್ರವಾಸದಲ್ಲಿ ಭಾಗವಹಿಸಿದ ಸದಸ್ಯರಿಗೆ ಸ್ಮರಣಿಕೆಗಳನ್ನು ನೀಡಲಾಯಿತು. ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಸ್ತೂರಿ ಮಹೇಶ್ ಸ್ವಾಗತಿಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷೆ ಹಾಗೂ ಘಟಕದ ಮಾಜಿ ಅಧ್ಯಕ್ಷೆ ವಿದ್ಯಾ ರಾಕೇಶ್ ಪ್ರಸ್ತಾವನೆ ಮಾಡಿದರು. ಉಮಾ ಶ್ರೀಕಾಂತ್ ಮತ್ತು ದೀಪಿಕಾ ಮನೋಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸೋನಿಯಾ ರಾಜ್ ಧನ್ಯವಾದ ಅರ್ಪಿಸಿದರು.


