ಮಂಗಳೂರು : “ಸಂಘಟನೆಯ ಯಶಸ್ಸು ಕೇವಲ ಅಧಿಕಾರ ಚಲಾಯಿಸುವುದರಲ್ಲಿಲ್ಲ, ಬದಲಾಗಿ ಎಲ್ಲರನ್ನೂ ಒಗ್ಗೂಡಿಸಿ ದಕ್ಷ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಯಕತ್ವದ ಮೇಲಿದೆ” ಎಂದು ಆಪ್ತ ಸಮಾಲೋಚಕರು, ತರಬೇತುದಾರರಾದ ಸ್ಮಿತೇಶ್ ಎಸ್ ಬಾರ್ಯ ಅಭಿಪ್ರಾಯಪಟ್ಟರು.

ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮತ್ತು ಮಂಗಳೂರು ಘಟಕದ ಆತಿಥ್ಯದಲ್ಲಿ ಯೆಯ್ಯಾಡಿಯ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಮಾರ್ಚ್ 1, ಭಾನುವಾರ ಆಯೋಜಿಸಲಾಗಿದ್ದ ಯುವವಾಹಿನಿ ಘಟಕಗಳ ಪದಾಧಿಕಾರಿಗಳ ಮತ್ತು ಸದಸ್ಯರ ತರಬೇತಿ ಕಾರ್ಯಾಗಾರ ‘ವಿಕಾಸ 2026’ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಘಟನೆಗೆ ರಚನಾತ್ಮಕ ಕೆಲಸವೇ ಶಕ್ತಿ : “ಇಂದಿನ ಕಾಲಘಟ್ಟದಲ್ಲಿ ಸಂಘಟನೆಗಳು ಕೇವಲ ಔಪಚಾರಿಕ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಸಮಾಜಕ್ಕೆ ಮತ್ತು ಜನಸಾಮಾನ್ಯರಿಗೆ ನೇರವಾಗಿ ಸ್ಪಂದಿಸುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ರಚನಾತ್ಮಕ ಕೆಲಸಗಳನ್ನು ಮಾಡಬೇಕು,” ಎಂದು ಸ್ಮಿತೇಶ್ ಬಾರ್ಯ ಕರೆ ನೀಡಿದರು.

ಭಾವನಾತ್ಮಕ ಬೆಸುಗೆಯ ಅಗತ್ಯ : ಚಂದ್ರಹಾಸ ಬಳಂಜ
ಜೇಸೀ ರಾಷ್ಟ್ರೀಯ ತರಬೇತುದಾರರಾದ ಚಂದ್ರಹಾಸ ಬಳಂಜ ಮಾತನಾಡಿ, “ಸದಸ್ಯರನ್ನು ದೀರ್ಘಕಾಲ ಸಂಘಟನೆಯಲ್ಲಿ ಉಳಿಸಿಕೊಳ್ಳುವುದು ಒಂದು ಸವಾಲು. ಸದಸ್ಯರಿಗೆ ಗೌರವ, ಪ್ರೀತಿ ಮತ್ತು ಸೂಕ್ತ ಜವಾಬ್ದಾರಿ ಹಂಚಿದಾಗ ಮಾತ್ರ ಅವರು ಭಾವನಾತ್ಮಕವಾಗಿ ಸಂಘಟನೆಯೊಂದಿಗೆ ಬೆರೆಯುತ್ತಾರೆ. ಪ್ರತಿಯೊಬ್ಬ ಸದಸ್ಯನೂ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡರೆ ಸಂಘಟನೆ ಹೆಮ್ಮರವಾಗಿ ಬೆಳೆಯಲು ಸಾಧ್ಯ,” ಎಂದರು.

ಸಂಸ್ಕಾರ ನೀಡುವ ಯುವವಾಹಿನಿ : ದಿನೇಶ್ ಸುವರ್ಣ ರಾಯಿ
ಯುವವಾಹಿನಿ ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕರು, ಕಾರ್ಯಗಾರದ ತರಬೇತುದಾರರಾದ ದಿನೇಶ್ ಸುವರ್ಣ ರಾಯಿ ಮಾತನಾಡಿ, “ಯುವವಾಹಿನಿ ಕೇವಲ ಒಂದು ಸಂಘಟನೆಯಲ್ಲ, ಅದೊಂದು ಸಂಸ್ಕಾರ ನೀಡುವ ವೇದಿಕೆ. ಇಲ್ಲಿನ ಕಟ್ಟುನಿಟ್ಟಿನ ಶಿಸ್ತು ಸಾಮಾನ್ಯ ಸದಸ್ಯನನ್ನು ಸಮಾಜದ ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತದೆ. ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕಲೆಗೆ ಇಲ್ಲಿ ಹೆಚ್ಚಿನ ಅವಕಾಶವಿದೆ,” ಎಂದು ತಿಳಿಸಿದರು.

ವಿಕಾಸ 2026 ಕಾರ್ಯಾಗಾರದಲ್ಲಿ 26 ಘಟಕಗಳ 174 ಸದಸ್ಯರು ಭಾಗವಹಿಸಿ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊಂಡಿತುಶ್ರೀ ಗೋಕರ್ಣನಾಥ ಕೋ ಓಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಚಂದ್ರಶೇಖರ ಕುಮಾರ್ ಇವರು ದೀಪ ಬೆಳಗುವುದರ ಮೂಲಕ ಕಾರ್ಯಾಗಾರ ಉದ್ಘಾಟಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪುರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾದ ಹರೀಶ್ ಕೆ ಸುವರ್ಣ, ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ವಿದ್ಯಾ ರಾಕೇಶ್, ದ್ವಿತೀಯ ಉಪಾಧ್ಯಕ್ಷರಾದ ಸುರೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಕೋಶಾಧಿಕಾರಿ ಸತೀಶ್ ಕಿಲ್ಪಾಡಿ, ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಗಣೇಶ್ ವಿ ಕೋಡಿಕಲ್, ಮಂಗಳೂರು ಘಟಕದ ಕಾರ್ಯದರ್ಶಿ ಉಷಾ ಕೆ, ವ್ಯಕ್ತಿತ್ವ ವಿಕಸನ ನಿರ್ದೇಶಕರಾದ, ಶ್ರೀಕಾಂತ್ ಅಂಚನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ತರಬೇತುದಾರರನ್ನು ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಾಗಾರದಲ್ಲಿ ಅತೀ ಹೆಚ್ಚು ಸದಸ್ಯರು ಭಾಗವಹಿಸಿದ್ದ ಕೊಲ್ಯ ಘಟಕ ಹಾಗೂ ಪ್ರಥಮ ಹೆಸರು ನೊಂದಾವಣೆ ಮಾಡಿದ ಪಡುಬಿದ್ರೆ ಘಟಕವನ್ನು ಗೌರವಿಸಲಾಯಿತು.
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 14 ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ಸಖೀ ಸಂವಾದ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು ಮತ್ತು ಈ ಸಂದರ್ಭದಲ್ಲಿ ಕೊಲ್ಯ ಘಟಕದ ಅಧ್ಯಕ್ಷ ನಿತಿನ್ ಕರ್ಕೇರಾ ಹಾಗೂ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಸುಧಾ ಸುರೇಶ್ ಉಪಸ್ಥಿತರಿದ್ದರು
ಕೇಂದ್ರ ಸಮಿತಿಯ ವ್ಯಕ್ತಿತ್ವ ವಿಕಸನ ನಿರ್ದೇಶಕ ಗಣೇಶ್ ವಿ ಕೋಡಿಕಲ್ ಸ್ವಾಗತಿಸಿದರು, ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ ಸುವರ್ಣ ಹಾಗೂ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಧನ್ಯವಾದ ನೀಡಿದರು ಯುವವಾಹಿನಿ ಮಂಗಳೂರು ಘಟಕದ ಸತೀಶ್. ಕೆ ಕಾರ್ಯಕ್ರಮ ನಿರ್ವಹಿಸಿದರು,


