ಬಂಟ್ವಾಳ : ಫೆಬ್ರವರಿ 28 ಹಾಗೂ ಮಾರ್ಚ್ 01ರಂದು ನಡೆಯಲಿರುವ ಯುವವಾಹಿನಿ ಉಡುಪಿ ಘಟಕದ ರಜತ ಸಂಭ್ರಮ ಸಮಾರಂಭದ ಆಮಂತ್ರಣ ಪತ್ರವನ್ನು ಬಂಟ್ವಾಳದಲ್ಲಿ ಭಾರತ ಸರ್ಕಾರದ ಮಾಜಿ ವಿತ್ತ ಸಚಿವರಾದ ಬಿ ಜನಾರ್ದನ ಪೂಜಾರಿ ಅವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಲ್ಲಿ ಯುವವಾಹಿನಿ ಉಡುಪಿ ಘಟಕವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸಿದ್ದು, ಅಶಕ್ತ ಕುಟುಂಬಗಳ ಮನೆ ನಿರ್ಮಾಣದಂತಹ ಮಹತ್ವದ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿರುವುದು ಶ್ಲಾಘನೀಯ ಎಂದರು. ರಜತ ಸಂಭ್ರಮ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನಡೆಯಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ದಯಾನಂದ ಕರ್ಕೇರ ಉಪ್ಪೂರು, ರಜತ ಸಂಭ್ರಮ ಸಂಚಾಲಕರಾದ ರಘುನಾಥ ಮಾಬಿಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಸಾಮಾಜಿಕ ಜಾಲತಾಣ ಸಂಪಾದಕರಾದ ರಾಜೇಶ್ ಸುವರ್ಣ ಹಾಗೂ ಉಡುಪಿ ಘಟಕದ ಮಾಜಿ ಅಧ್ಯಕ್ಷರುಗಳಾದ ಭಾಸ್ಕರ ಸುವರ್ಣ, ದಯಾನಂದ ಪೂಜಾರಿ, ನಾರಾಯಣ ಬಿಎಸ್, ಜಗದೀಶ್ ಕುಮಾರ್ ಉಪಸ್ಥಿತರಿದ್ದರು.
ರಜತ ಸಂಭ್ರಮ ಸಮಾರಂಭವು ಯುವವಾಹಿನಿಯ ಸೇವಾ ಪಥದ ಮಹತ್ವದ ಮೈಲುಗಲ್ಲಾಗಿ ಗುರುತಿಸಿಕೊಳ್ಳಲಿದೆ.


