ಬೆಂಗಳೂರು: ಯುವಕರು ಸಮಾಜವನ್ನು ಬಲಿಷ್ಠ ಮತ್ತು ಆರೋಗ್ಯಕರ ದಿಕ್ಕಿನಲ್ಲಿ ಮುನ್ನಡೆಸುವ ಶಕ್ತಿ ಹೊಂದಿದ್ದಾರೆ; ಇಂತಹ ಕ್ರೀಡಾ ವೇದಿಕೆಗಳು ಅವರಲ್ಲಿ ಶಿಸ್ತು, ಏಕತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರು ಹಾಗೂ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಚೇರ್ಮೆನ್ ಸೂರ್ಯಕಾಂತ್ ಜೆ. ಸುವರ್ಣ ಅಭಿಪ್ರಾಯಪಟ್ಟರು.
ಅವರು ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ಚಿಕ್ಕಬಾಣಾವರ ಸಮೀಪದ ಗೋಲ್ಡನ್ ರೇ ಕ್ರೀಡಾಂಗಣದಲ್ಲಿ ಫೆಬ್ರವರಿ 8ರಂದು ಆಯೋಜಿಸಲಾದ “ಬ್ರಹ್ಮಶ್ರೀ ಕ್ರೀಡಾಕೂಟ 2026” ನ್ನು ಉದ್ಘಾಟಿಸಿ ಮಾತನಾಡಿ ಯುವಕರು ಸಮಾಜದ ಆರೋಗ್ಯಕರ ಬೆಳವಣಿಗೆಗೆ ಮುಂಚೂಣಿಯ ನಲ್ಲಿ ನಿಲ್ಲಬೇಕು ಎಂದರು. ಬಳಿಕ ಕ್ರೀಡಾ ಜ್ಯೋತಿಯನ್ನು ಕ್ರೀಡಾ ನಿರ್ದೇಶಕರಾದ ಕಿಶನ್ ಪೂಜಾರಿ ಮತ್ತು ರಕ್ಷಾ ಅವರಿಗೆ ಹಸ್ತಾಂತರಿಸುವ ಮೂಲಕ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆಯಿತ್ತರು.

ಯುವವಾಹಿನಿ ಬೆಂಗಳೂರು ಘಟಕದ ಅಧ್ಯಕ್ಷ ಶಶಿಧರ್ ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಜಗನ್ನಾಥ ಪೂಜಾರಿ, ಚೆಮ್ ಟ್ರೆಂಡ್ ನ ವ್ಯವಸ್ಥಾಪಕರಾದ ಸಚಿಂದ್ರ ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಕಲ್ಲಾಜೆ, ಹಾಗೂ ಯುವವಾಹಿನಿ (ರಿ.) ಬೆಂಗಳೂರು ಘಟಕದ ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಪ್ರಮುಖ ಅತಿಥಿಗಳಾಗಿ ಉಪಸ್ಥಿತರಿದ್ದರು.

ಯುವವಾಹಿನಿ ಸದಸ್ಯರು ಶಿಸ್ತಿನಿಂದ ನಡೆಸಿದ ಪಥಸಂಚಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ದಿನಪೂರ್ತಿ ನಡೆದ ಕ್ರೀಡೋತ್ಸವದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಉತ್ಸಾಹಭರಿತವಾಗಿ ನಡೆಯಿತು. ಪುರುಷರಿಗೆ ಕ್ರಿಕೆಟ್ ಮತ್ತು ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಪುರುಷ–ಮಹಿಳೆಯರಿಗೆ ಹಗ್ಗ ಜಗ್ಗಾಟ, ರಿಲೇ ಮತ್ತು ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆದರೆ, ಮಕ್ಕಳಿಗೆ ಓಟ ಮತ್ತು ಕಪ್ಪೆ ಓಟ, 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಲೆಮನ್ ಆನ್ ಸ್ಪೂನ್, ಮ್ಯೂಸಿಕಲ್ ಚೇರ್ ಮೊದಲಾದ ಮನರಂಜನಾ ಆಟಗಳು ಎಲ್ಲರ ಮನಸೆಳೆದವು.

ಯುವ ಅರೋಸ್, ಯುವ ಅವೆಂಜರ್ಸ್, ಯುವ ಸ್ಟ್ರೈಕರ್ಸ್, ಯುವ ಟೈಟಾನ್ಸ್, ಯುವ ಪ್ಯಾಂಥರ್ಸ್ ಮತ್ತು ಯುವ ವಾರಿಯರ್ಸ್ ಎಂಬ ಆರು ತಂಡಗಳು ಎಲ್ಲಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಬಹುಮಾನಗಳನ್ನು ತಮ್ಮದಾಗಿಸಿಕೊಂಡವು. ಉತ್ತಮ ವ್ಯವಸ್ಥೆ, ಶಿಸ್ತಿನ ನಿರ್ವಹಣೆ ಹಾಗೂ ರುಚಿಕರವಾದ ಊಟದೊಂದಿಗೆ ಸದಸ್ಯರು ದಿನಪೂರ್ತಿ ಕ್ರೀಡಾ ಸಂಭ್ರಮವನ್ನು ಆಸ್ವಾದಿಸಿದರು.
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಉದ್ಯಮಿ ಕೋಟಾ ರಕ್ಷಿತ್ ಪೂಜಾರಿ ಅತಿಥಿಯಾಗಿ ಭಾಗವಹಿಸಿದರು. ಬಹುಮಾನ ವಿತರಣೆಯ ಬಳಿಕ ಅಧ್ಯಕ್ಷರು ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಪ್ರಾಯೋಜಕರಾದ ಪ್ರಸನ್ನ ಪೂಜಾರಿ, ಜಯರಾಮ್ ಕೆ.ಬಿ., ಕಿಶೋರ್ ಯಸ್ ಕುಮಾರ್, ರಾಜೇಶ್ ಪೂಜಾರಿ ಸೇರಿದಂತೆ ಎಲ್ಲಾ ತಂಡಗಳ ನಾಯಕರನ್ನು ಗೌರವಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಕೇಶ್ ಬನ್ನನ್ ಮತ್ತು ಅನುಷಾ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟು ಗಮನಸೆಳೆದರು.
ಒಟ್ಟಾರೆ, “ಬ್ರಹ್ಮಶ್ರೀ ಕ್ರೀಡಾಕೂಟ 2026” ಯುವವಾಹಿನಿ ಬೆಂಗಳೂರು ಘಟಕದ ಏಕತೆ, ಶಿಸ್ತು ಮತ್ತು ಸಂಘಟನಾ ಸಾಮರ್ಥ್ಯವನ್ನು ಪ್ರತಿಬಿಂಬಿಸಿದ ಮಹತ್ವದ ಕ್ರೀಡೋತ್ಸವವಾಗಿ ಭರ್ಜರಿ ಯಶಸ್ಸು ಕಂಡಿತು.


