ಮೂಡುಬಿದಿರೆ : ಸೇವೆಯೇ ಧರ್ಮ ಎಂಬ ತತ್ವವನ್ನು ಕಾರ್ಯರೂಪಕ್ಕೆ ತಂದು, ಯುವವಾಹಿನಿ (ರಿ.) ಮೂಡುಬಿದಿರೆ ಘಟಕವು ಮಾನವೀಯತೆಯ ಮೌಲ್ಯವನ್ನು ಮತ್ತೊಮ್ಮೆ ಪ್ರತಿಪಾದಿಸಿದೆ. ಮೂಡುಮಾರ್ನಾಡು ಗ್ರಾಮದ ಸುಮಿತ್ರಾ–ವಿಶ್ವನಾಥ್ ದಂಪತಿಯ ಶೋಚನೀಯ ಸ್ಥಿತಿಯಲ್ಲಿದ್ದ ಮನೆಯನ್ನು ಮರುನಿರ್ಮಿಸಲು ಸುಮಾರು 6 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಿ, ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಸುಮಾರು 600 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಾಣದ ಮೂಲಕ ಅಶಕ್ತ ಕುಟುಂಬಕ್ಕೆ ಭದ್ರ ಆಶ್ರಯ ಕಲ್ಪಿಸುವ ಸಂಕಲ್ಪವನ್ನು ಘಟಕ ಕೈಗೊಂಡಿದೆ.

ಯುವವಾಹಿನಿಯ ಮಾಜಿ ಅಧ್ಯಕ್ಷರು ಹಾಗೂ ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕರಾದ ಶಂಕರ್ ಎ. ಕೋಟ್ಯಾನ್ ಅವರು ಮಾತನಾಡಿ, ಯುವವಾಹಿನಿಯ ಸಕ್ರಿಯ ಸದಸ್ಯೆಯಾಗಿರುವ ಸುಮಿತ್ರಾ ಅವರ ಮನೆ ದುಸ್ಥಿತಿಯಲ್ಲಿರುವುದನ್ನು ಗಮನಿಸಿ ಮರುನಿರ್ಮಾಣದ ಯೋಜನೆ ರೂಪಿಸಲಾಗಿದೆ. ಸಮಾಜದ ಬೆಂಬಲದೊಂದಿಗೆ ಈ ಮನೆ ನಿರ್ಮಾಣ ಕಾರ್ಯವನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಕುಟುಂಬಕ್ಕೆ ಸುರಕ್ಷಿತ ನೆಲೆ ಒದಗಿಸುವುದು ನಮ್ಮ ಧ್ಯೇಯ ಎಂದು ತಿಳಿಸಿದರು.

ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಮುರಳೀಧರ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಸುದೇವ ಭಟ್ ಅವರು ಪ್ರಾರ್ಥನೆ ಸಲ್ಲಿಸಿ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಪಡುಮಾರ್ನಾಡು ಗ್ರಾ.ಪಂ.ಸದಸ್ಯರಾದ ರಮೇಶ್ ಶೆಟ್ಟಿ ಅವರು ರೂ.10,000 ಹಾಗೂ ಹಿರಿಯರಾದ ಮೋಹನ್ ಕೋಟ್ಯಾನ್ ಅವರು ರೂ.3,000 ದೇಣಿಗೆ ನೀಡಿ ಕಾರ್ಯಕ್ಕೆ ಶುಭ ಹಾರೈಸಿದರು.
ವಾಸುದೇವ ಭಟ್ ಅವರು ರೂ.5,000 ದೇಣಿಗೆ ನೀಡುವುದಾಗಿ ಘೋಷಿಸಿದರೆ, ಘಟಕದ ಗೌರವ ಸಲಹೆಗಾರ ಸುರೇಶ್ ಕೋಟ್ಯಾನ್ ಅವರು ಒಂದು ಲೋಡ್ ಜಲ್ಲಿ ಒದಗಿಸುವ ಭರವಸೆ ನೀಡಿದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಶಾಂತ್ ಕರ್ಕೇರ ಅವರು ಮನೆಗೆ ಅಗತ್ಯವಿರುವ ಸಂಪೂರ್ಣ ಟೈಲ್ಸ್ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ಈ ಮಾನವೀಯ ಕಾರ್ಯಕ್ಕೆ ಹಲವರಿಂದ ವ್ಯಕ್ತವಾದ ಸಹಕಾರವು ಸಮಾಜದ ಒಗ್ಗಟ್ಟಿನ ಪ್ರತೀಕವಾಗಿತ್ತು.
ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳಾದ ವಿಧೇಶ್ ಎಂ., ಗಿರೀಶ್ ಕೋಟ್ಯಾನ್, ಜಯಶೀಲಾ, ಶೋಭಾ ದಿನೇಶ್, ಗುತ್ತಿಗೆದಾರ ಬಾಲಕೃಷ್ಣ ಶೆಟ್ಟಿ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ಕೆ ಕೈಜೋಡಿಸಿದರು. ಸೇವಾ ಮನೋಭಾವದಿಂದ ಆರಂಭವಾದ ಈ ಪ್ರಯತ್ನ, ಅಶಕ್ತ ಕುಟುಂಬದ ಬದುಕಿನಲ್ಲಿ ಹೊಸ ಬೆಳಕನ್ನು ಹರಿಸುವ ಮಹತ್ವದ ಹೆಜ್ಜೆಯಾಗಿದೆ.


