ಬೆಳ್ತಂಗಡಿ : ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಹಾಗೂ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ, ಬೆಳ್ತಂಗಡಿ ತಾಲೂಕು ಇವರ ಸಹಕಾರದೊಂದಿಗೆ ದಿನಾಂಕ 31.01.2026 ಶನಿವಾರ ಸಂಭ್ರಮ–2 ಯುವವಾಹಿನಿ ಕುಟುಂಬದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಪಣಕಜೆಯ ನವಸುಮ ನಿವಾಸದಲ್ಲಿ ಆತ್ಮೀಯವಾಗಿ ನಡೆಯಿತು.

ಈ ಸಂದರ್ಭದಲ್ಲಿ ವಿಶೇಷವಾಗಿ “ಸ್ಪಂದನ : ಹೃದಯ ಸ್ತಂಭನ ಹಾಗೂ ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳು” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಉಜಿರೆ ಬೆನಕ ಹೆಲ್ತ್ ಸೆಂಟರ್ನ ತುರ್ತು ಚಿಕಿತ್ಸಾ ತಜ್ಞರಾದ ಡಾ. ಆದಿತ್ಯ ರಾವ್ ಅವರು CPR (ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್) ಪ್ರಾತ್ಯಕ್ಷಿಕೆಯ ಮೂಲಕ ಹೃದಯ ಸ್ತಂಭನ ಹಾಗೂ ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸ್ಪಷ್ಟ ಮತ್ತು ಉಪಯುಕ್ತ ಮಾಹಿತಿಯನ್ನು ನೀಡಿದರು. ಸಾರ್ವಜನಿಕರಲ್ಲಿ ಜೀವ ರಕ್ಷಣೆ ಕುರಿತು ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಾಗಾರ ಮಹತ್ವ ಪಡೆದುಕೊಂಡಿತು.

ಕಾರ್ಯಕ್ರಮದ ಮತ್ತೊಂದು ಅರ್ಥಪೂರ್ಣ ಘಟ್ಟವಾಗಿ ಘಟಕದ ಮಾಜಿ ನಿರ್ದೇಶಕರಾದ ದಿವಂಗತ ಶಶಿಧರ ಆದೇಲು ಅವರ ಮಕ್ಕಳಿಗೆ ಘಟಕದ ವತಿಯಿಂದ ವಿದ್ಯಾನಿಧಿ ವಿತರಣೆ ಮಾಡಲಾಯಿತು.
ಕೇಂದ್ರ ಸಮಿತಿಯ ಆರೋಗ್ಯ ನಿರ್ದೇಶಕರೂ ಹಾಗೂ ಘಟಕದ ಸ್ಥಾಪಕ ಅಧ್ಯಕ್ಷರಾದ ರಾಕೇಶ್ ಕುಮಾರ್ ಮುಡುಕೋಡಿ ಅವರು ಕಾರ್ಯಕ್ರಮದ ಮಹತ್ವ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಮನೆಯ ಯಜಮಾನರಾದ ವಸಂತ ಪೂಜಾರಿ ಹಾಗೂ ಲೀಲಾವತಿ ಪನಕಜೆ ಅವರು ಆಗಮಿಸಿದ ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಆದಿತ್ಯ ರಾವ್ ಅವರನ್ನು ಘಟಕದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಗುರುರಾಜ ಗುರಿಪಳ್ಳ ವಹಿಸಿದ್ದರು. ಕಾರ್ಯದರ್ಶಿ ಮಧುರ ರಾಘವ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಸದಾಶಿವ ಪೂಜಾರಿ ಊರ, ಕೋಶಾಧಿಕಾರಿ ನಾಗೇಶ್ ಆದೇಲು, ಯುವವಾಹಿನಿಯ ಪದಾಧಿಕಾರಿಗಳು, ನಿರ್ದೇಶಕರು, ಸಂಘಟನಾ ಕಾರ್ಯದರ್ಶಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಘಟಕದ ಸದಸ್ಯರಿಗಾಗಿ ಮನೋರಂಜನಾ ಕಾರ್ಯಕ್ರಮಗಳು ಮತ್ತು ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು


