ಕೊಲ್ಯ : ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರುಗಳ ತಪೋಭೂಮಿ ಶಿವಗಿರಿ ಕ್ಷೇತ್ರ ದರ್ಶನ ಯಾತ್ರೆ ಭಕ್ತಿಭಾವ, ಶಿಸ್ತು ಹಾಗೂ ಆತ್ಮೀಯತೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.
ಒಟ್ಟು 54 ಯಾತ್ರಾರ್ಥಿಗಳನ್ನು ಒಳಗೊಂಡ ತಂಡವು ದಿನಾಂಕ 23-01-2026 ಶುಕ್ರವಾರ ಸಂಜೆ 5.20ಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಶಿವಗಿರಿ ಕ್ಷೇತ್ರದತ್ತ ಪ್ರಯಾಣ ಆರಂಭಿಸಿತು. ದಿನಾಂಕ 24-01-2026 ಶನಿವಾರ ಬೆಳಿಗ್ಗೆ ನಿತ್ಯಕರ್ಮಗಳನ್ನು ಪೂರೈಸಿ ಶಿವಗಿರಿ ಮಠದಲ್ಲಿ ಗುರುಪೂಜೆ ಸಲ್ಲಿಸಿ, ಗುರುಗಳು ಹಾಗೂ ಶಾರದಾ ಮಾತೆಯ ಅನುಗ್ರಹ ಪಡೆದು ಬೆಳಗಿನ ಉಪಹಾರವನ್ನು ಸ್ವೀಕರಿಸಲಾಯಿತು. ಬಳಿಕ ಗುರುಗಳ ಜನ್ಮಸ್ಥಳ ಚೆಂಬಳತಿಗೆ ತೆರಳಿ, ಮಧ್ಯಾಹ್ನ ಕುನ್ನುಪಾರಂ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಹಾಪೂಜೆಯಲ್ಲಿ ಭಾಗವಹಿಸಿ, ನಂತರ ಮಠದಲ್ಲಿ ಅನ್ನಪ್ರಸಾದ ಸೇವಿಸಲಾಯಿತು.

ಸಂಜೆ ಕನ್ಯಾಕುಮಾರಿ ತಲುಪಿ ಬೋಟಿಂಗ್ ಮೂಲಕ ವಿವೇಕಾನಂದ ರಾಕ್ ವೀಕ್ಷಣೆ ಮಾಡಿ, ಅಲ್ಲಿನ ಕಡಲ ಆರ್ಭಟ ಹಾಗೂ ತಂಗಾಳಿಯ ಸವಿಯೊಂದಿಗೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲಾಯಿತು. ನಂತರ ಕನ್ಯಾಕುಮಾರಿ ದೇವಿ ಹಾಗೂ ದೇವಿಯ ಮೂಗುತಿ ದರ್ಶನ ಪಡೆದು, ರಾತ್ರಿ 8.30ಕ್ಕೆ ಮರುತ್ವಮಲೆ ಆಶ್ರಮದಲ್ಲಿ ಭೋಜನ ಸ್ವೀಕರಿಸಿ ವಿಶ್ರಾಂತಿ ಪಡೆಯಲಾಯಿತು.
ದಿನಾಂಕ 25-01-2026 ಭಾನುವಾರ ಬೆಳಿಗ್ಗೆ 5.30ಕ್ಕೆ ಮಠದಲ್ಲಿ ನಡೆದ ಸತ್ಸಂಗದಲ್ಲಿ ಭಾಗವಹಿಸಿ ಗುರುಪೂಜೆ ಸಲ್ಲಿಸಲಾಯಿತು. ಬಳಿಕ 6.00 ಗಂಟೆಗೆ ಗುರುಗಳು ತಪಸ್ಸು ಮಾಡಿದ ಮರುತ್ವಮಲೆ ಬೆಟ್ಟಕ್ಕೆ ಯಾತ್ರಾರ್ಥಿಗಳು ಉತ್ಸಾಹದಿಂದ ಪಾದಯಾತ್ರೆ ಮಾಡಿ, ಗುರುಗಳು ತಪಸ್ಸು ಮಾಡಿದ ಗುಹೆಯ ದರ್ಶನ ಪಡೆದು ಪುನೀತರಾದರು.
ಬೆಟ್ಟದಿಂದ ಇಳಿದು ಬೆಳಗಿನ ಉಪಹಾರ ನಂತರ, ಗುರುಗಳು ಸ್ಥಾಪಿಸಿದ ಪ್ರಪ್ರಥಮ ದೇವಸ್ಥಾನ ಅರವಿಪುರ ಶಿವಾಲಯ, ನೆಯ್ಯಾರು ನದಿ ವೀಕ್ಷಣೆ ಹಾಗೂ ಗುರುಪೂಜೆ ಸಲ್ಲಿಸಿ ಅನ್ನಪ್ರಸಾದ ಸೇವಿಸಲಾಯಿತು. ನಂತರ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಯಾತ್ರಾರ್ಥಿಗಳು, ಸಂಜೆ 6.30ಕ್ಕೆ ತಿರುವನಂತಪುರಂ ರೈಲ್ವೆ ನಿಲ್ದಾಣದಿಂದ ಮಂಗಳೂರಿಗೆ ಮರುಪ್ರಯಾಣ ಆರಂಭಿಸಿದರು. ದಿನಾಂಕ 26-01-2026 ಸೋಮವಾರ ಬೆಳಿಗ್ಗೆ 8.00 ಗಂಟೆಗೆ ಮಂಗಳೂರು ತಲುಪಿದಾಗ, ಈ ಜಗತ್ತು ಕಂಡಿರುವ ಮಹಾನ್ ದಾರ್ಶನಿಕನ ಜನ್ಮಸ್ಥಳವನ್ನು ಕಣ್ಣಾರೆ ಕಂಡ ಸಂತೋಷ ಮತ್ತು ಧನ್ಯತಾ ಭಾವ ಎಲ್ಲರ ಮುಖದಲ್ಲೂ ಸ್ಪಷ್ಟವಾಗಿ ಮೂಡಿತ್ತು.
ಈ ಯಾತ್ರೆಯು ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷರಾದ ನಿತಿನ್ ಕರ್ಕೇರ ಅವರ ನೇತೃತ್ವದಲ್ಲಿ, ಕೇಂದ್ರ ಸಮಿತಿಯ ಮಾಜಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರು ಹಾಗೂ ಘಟಕದ ಮಾಜಿ ಅಧ್ಯಕ್ಷರಾದ ಮೋಹನ್ ಮಾಡೂರ್ ಅವರ ಮಾರ್ಗದರ್ಶನದಲ್ಲಿ, ಘಟಕದ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕಿ ಅಶ್ವಿತಾ ಹರೀಶ್ ಕುಂಪಲ ಅವರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.


