ಮಂಗಳೂರು : ಸೇವಾ ಮನೋಭಾವ, ಸಂಘಟನಾ ಶಕ್ತಿ ಮತ್ತು ಸಮಾಜಮುಖಿ ಚಿಂತನೆಯ ದಶಕದ ಪಯಣವನ್ನು ಸ್ಮರಿಸುವಂತೆ, ಯುವವಾಹಿನಿ (ರಿ.) ಕಂಕನಾಡಿ ಘಟಕದ ದಶಮಾನೋತ್ಸವ ಸಂಭ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ದಿನಾಂಕ 25-01-2026ರ ಆದಿತ್ಯವಾರ ಕಂಕನಾಡಿ ಗರೋಡಿ ಸಮೀಪದ ಸಮೃದ್ಧಿ ಭವನದಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ಮಾತನಾಡಿ,“ಹಿರಿಯರು ನಡೆದು ಬಂದ ತತ್ವಾದರ್ಶಗಳೇ ಸಂಘಟನೆಯ ನೆಲೆ. ಆ ಮಾರ್ಗದರ್ಶನವಿಲ್ಲದೆ ಹೊಸಬರ ಹೆಜ್ಜೆಗಳು ದಿಕ್ಕುತಪ್ಪುವ ಅಪಾಯವಿದೆ. ಸಂಘಟನೆ ಎಂದರೆ ಕೇವಲ ಚಟುವಟಿಕೆಗಳಲ್ಲ; ಮುಳುಗುತ್ತಿರುವವರನ್ನು ಮೇಲಕ್ಕೆತ್ತುವ ಸೇವಾ ಮನೋಭಾವವೂ ಆಗಬೇಕು” ಎಂದು ಅಭಿಪ್ರಾಯಪಟ್ಟರು.

ಹತ್ತು ವರ್ಷಗಳ ಪಯಣದಲ್ಲಿ ಕಂಕನಾಡಿ ಘಟಕವು ಕೇಂದ್ರ ಸಮಿತಿಯ ಅತ್ಯಂತ ಸಕ್ರಿಯ ಹಾಗೂ ಕ್ರಿಯಾಶೀಲ ಘಟಕಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿಯೆಂದು ಅವರು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಸಮಾಜ ಸೇವೆಯ ಇನ್ನಷ್ಟು ಆಯಾಮಗಳಿಗೆ ಕೈಹಾಕುವಂತೆ ಶುಭ ಹಾರೈಸಿದರು.
ವಿನೋದ್ ಕುಮಾರ್ ದೀಪ ಬೆಳಗಿಸುವ ಮೂಲಕ ದಶಮಾನೋತ್ಸವ ಸಂಭ್ರಮ ಉದ್ಘಾಟಿಸಿದರು. . ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಕಂಕನಾಡಿ ಘಟಕದ ಅಧ್ಯಕ್ಷರಾದ ಸುರೇಖಾ ಮೋಹನ್ ಅವರು ಮಾತನಾಡಿ, ದಶಮಾನೋತ್ಸವದ ಈ ಸಂಭ್ರಮಕ್ಕೆ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ಸೇವಾ ಸಮಿತಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅವರು ಮಾತನಾಡಿ, ಯುವವಾಹಿನಿ ಕಂಕನಾಡಿ ಘಟಕವು ಕ್ಷೇತ್ರದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಸಕ್ರಿಯವಾಗಿ ಕೈಜೋಡಿಸಿರುವುದಲ್ಲದೆ, ಜೀರ್ಣೋದ್ದಾರ ಕಾರ್ಯಕ್ಕೂ ತನು–ಮನ–ಧನ ಸಹಾಯ ನೀಡಿರುವುದು ಶ್ಲಾಘನೀಯ ಎಂದರು. ಶ್ರೀ ವರಿ ಫೈನಾನ್ಸ್ ಸಂಸ್ಥೆಯ ಮಾಲಕರಾದ ಅರುಣ್ ಪೂಜಾರಿ ಎಕ್ಕೂರು ಅವರು ಮುಖ್ಯ ಅತಿಥಿಗಳಾಗಿ ಶುಭ ಹಾರೈಕೆ ಮಾಡಿದರು.
ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ :
ಹತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಮೂರು ಸಾಧಕರಿಗೆ ಸನ್ಮಾನ, ಹಾಗೂ ಕಳೆದ ಹತ್ತು ವರ್ಷಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಘಟಕದ ಘನತೆಯನ್ನು ಹೆಚ್ಚಿಸಿದ ಘಟಕದ ಮಾಜಿ ಅಧ್ಯಕ್ಷರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಇಂದಿರಾ ಬಿ. ಅವರು ಮಾತನಾಡಿ, ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ಸಂಘಟನೆಯೊಂದಿಗೆ ಸಂಪರ್ಕ ಬೆಳೆಸಬೇಕು. ಜೊತೆಗೆ ಘಟಕದ ಸದಸ್ಯರು ಸಮಾಜದ ಇನ್ನಷ್ಟು ಬಂಧುಗಳನ್ನು ಯುವವಾಹಿನಿಗೆ ಕರೆತಂದು ಸಂಘಟನೆಯನ್ನು ಬಲಪಡಿಸಬೇಕೆಂದು ಕರೆ ನೀಡಿದರು. ಸಮಾರಂಭದ ವಿಶೇಷ ಘಟ್ಟದಲ್ಲಿ ಘಟಕದ ಬೆಳವಣಿಗೆಗೆ ಮಾರ್ಗದರ್ಶಕರಾಗಿ ಸಹಕರಿಸಿದ ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ ಡಾ. ರಾಕೇಶ್ ಕುಮಾರ್, ಹಾಗೂ ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ವಿದ್ಯಾ ರಾಕೇಶ್ ಅವರನ್ನು ಗೌರವಿಸಲಾಯಿತು.
ಸ್ಥಾಪಕ ಅಧ್ಯಕ್ಷ ಶೇಖರ್ ಅಮೀನ್ ಯುವವಾಹಿನಿ ಕಂಕನಾಡಿ ಘಟಕವು ನಡೆದು ಬಂದ ಹಾದಿಯನ್ನು ಪ್ರಸ್ತಾವನೆ ಮೂಲಕ ಮೆಲುಕು ಹಾಕಿದರು. ಘಟಕದ ಹಿರಿಯ ಸದಸ್ಯೆ ಪ್ರೇಮಾ ಅವರು ಪ್ರಾರ್ಥನೆಯ ಮೂಲಕ ಸಮಾರಂಭಕ್ಕೆ ಪಾವನತೆ ನೀಡಿದರು, ಘಟಕದ ಕಾರ್ಯದರ್ಶಿ ಧನುಷ್ ಧನ್ಯವಾದ ನೀಡಿದರು , ಕಾರ್ಯಕ್ರಮದ ನಿರೂಪಣೆಯನ್ನು ಮೇಘಾ ಹಾಗೂ ವೀಣಾ ಬಿ.ಕೆ. ನಿರ್ವಹಿಸಿದರು.


