ಮಾಣಿ : ಕ್ರೀಡೆ ಎಂಬುದು ಕೇವಲ ದೈಹಿಕ ಚಟುವಟಿಕೆಗೆ ಸೀಮಿತವಲ್ಲ; ಅದು ಯುವ ಮನಸ್ಸುಗಳನ್ನು ಒಗ್ಗೂಡಿಸುವ ಬಾಂಧವ್ಯದ ಶಕ್ತಿಯಾಗಿದ್ದು, ಸಂಘಟನಾ ಬಲವರ್ಧನೆಗೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ಹೇಳಿದರು.
ಅವರು ಗಣರಾಜ್ಯೋತ್ಸವದ ಅಂಗವಾಗಿ ದಿನಾಂಕ 26/01/2026 ರಂದು ಬಂಟ್ವಾಳ ತಾಲೂಕಿನ ಅನಂತಾಡಿಯ ಚಿತ್ತರಿಗೆ ಗದ್ದೆಯಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಲೀಗ್ ಮಾದರಿಯ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟ “ಯುವ ಫ್ಯಾಮಿಲಿ ಚಾಂಪಿಯನ್ಸ್ ಕ್ರಿಕೆಟ್ ಲೀಗ್ – 2026” ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕ್ರೀಡೆ ಶಿಸ್ತು, ಸಹಕಾರ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ. ಈ ದಿಶೆಯಲ್ಲಿ ಯುವವಾಹಿನಿ ಮಾಣಿ ಘಟಕ ಶ್ಲಾಘನೀಯ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯಾಯವಾದಿ ಶೋಭಾಲತಾ ಸುವರ್ಣ ಅವರು ತಮ್ಮ ಬಾಲ್ಯದ ಕ್ರೀಡಾ ಅನುಭವಗಳನ್ನು ಸ್ಮರಿಸುತ್ತಾ, ಇಂದಿನ ಒತ್ತಡಪೂರ್ಣ ಜೀವನ ಶೈಲಿಯಲ್ಲಿ ಕ್ರೀಡೆ ಮನಸ್ಸಿಗೆ ಸಮತೋಲನ ನೀಡುವ ಶಕ್ತಿಯಾಗಿದೆ ಎಂದು ಹೇಳಿದರು. ಯುವವಾಹಿನಿ ಸಂಘಟನೆ ಮುಂದಿನ ದಿನಗಳಲ್ಲಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಇನ್ನಷ್ಟು ಶಕ್ತಿಶಾಲಿಯಾಗಿ ರೂಪುಗೊಳ್ಳಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಶಿವರಾಜ್ ಪಿ.ಆರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಮಾಣಿ ಇದರ ಅಧ್ಯಕ್ಷ ಸುರೇಶ್ ಸೂರ್ಯ, ಉದ್ಯಮಿ ಗಣೇಶ್ ಬಡೆಕೋಡಿ, ಗ್ರಾಮ ಪಂಚಾಯತ್ ಸದಸ್ಯೆ ಶಶಿಕಲಾ ಪೂಜಾರಿ, ನವಭಾರತ್ ಯುವಕ ಸಂಘದ ಅಧ್ಯಕ್ಷ ಯೋಗೀಶ್ ಸಾಲ್ಯಾನ್ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಪ್ರಚಾರ ನಿರ್ದೇಶಕ ಶಿವಪ್ರಸಾದ್ ನೂಚಿಲ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಹರೀಶ್ ಪೂಜಾರಿ ಬಾಕಿಲ, ಸಂಘಟನಾ ಕಾರ್ಯದರ್ಶಿ ನಾಗೇಶ್ ಕೊಂಕಣಪದವು, ಮಾಣಿ ಘಟಕದ ಕಾರ್ಯದರ್ಶಿ ದೀಪಕ್ ಪೆರಾಜೆ, ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅನೇಕ ಸದಸ್ಯರು ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಒಟ್ಟು 8 ಕ್ರಿಕೆಟ್ ತಂಡಗಳು ಹಾಗೂ 4 ತ್ರೋಬಾಲ್ ತಂಡಗಳು ಭಾಗವಹಿಸಿದ್ದವು. ಕ್ರಿಕೆಟ್ ವಿಭಾಗದಲ್ಲಿ ಟೀಮ್ ದುರ್ಗಾ ಬಿಲ್ಲವಸ್ ಪೆರಾಜೆ ಪ್ರಥಮ ಸ್ಥಾನ ಪಡೆದುಕೊಂಡರೆ, ಟೀಮ್ ಬಿರುವೆರ್ – ಪಟ್ಲ, ಮಾಣಿ ದ್ವಿತೀಯ ಸ್ಥಾನ ಗಳಿಸಿತು. ತ್ರೋಬಾಲ್ ವಿಭಾಗದಲ್ಲಿ ಶಮಿತಾ (ನೆಟ್ಲಮುಡ್ನೂರು) ಮಾಲೀಕತ್ವದ ತಂಡ ಪ್ರಥಮ ಸ್ಥಾನ ಹಾಗೂ ಗೀತಾ ಗೋಳಿಕಟ್ಟೆ ಮಾಲೀಕತ್ವದ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಎಲ್ಲಾ ತಂಡಗಳ ಮಾಲೀಕರನ್ನು ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಶಿವರಾಜ್ ಪಿ.ಆರ್ ಅವರು ಗೌರವಿಸಿದರು. ಕಾರ್ಯಕ್ರಮದಲ್ಲಿ ಘಟಕದ ಕೋಶಾಧಿಕಾರಿ ಸಚಿನ್ ಪೆರಾಜೆ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಕಾರ್ಯದರ್ಶಿ ದೀಪಕ್ ಪೆರಾಜೆ ನೆರವೇರಿಸಿದರು.


