ಪಣಂಬೂರು–ಕುಳಾಯಿ : ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ ದಿನಾಂಕ 19-01-2026 ಸೋಮವಾರ ಮಧ್ಯಾಹ್ನ 2.30ರಿಂದ 4.00 ಗಂಟೆಯವರೆಗೆ ಬೈಕಂಪಾಡಿಯ ಭಟ್ಟರಾಂಡ್ ರಶೆಲ್ ಶಾಲೆಯಲ್ಲಿ ಅಲ್ಲಿನ ಮಕ್ಕಳಿಗಾಗಿ ವ್ಯಸನ ಮುಕ್ತ ಜೀವನ ಮತ್ತು ಪರಿಸರ ಸ್ವಚ್ಛತೆ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಣಂಬೂರು ಠಾಣಾ ಅಧಿಕಾರಿ ಜ್ಞಾನ ಶೇಖರ್ ಮಾತನಾಡಿ, ಮಾದಕ ವ್ಯಸನಗಳಿಂದ ಯುವಕರು ಹೇಗೆ ದಾರಿ ತಪ್ಪುತ್ತಿದ್ದಾರೆ, ಅದರ ದುಷ್ಪರಿಣಾಮಗಳು ಏನೆಂಬುದನ್ನು ಮಕ್ಕಳಿಗೆ ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ವಿವರಿಸಿದರು. ಜೊತೆಗೆ ಸೈಬರ್ ಕ್ರೈಂ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿ, ಇಂತಹ ಅಪರಾಧಗಳಿಂದ ದೂರವಿರುವ ವಿಧಾನಗಳು ಹಾಗೂ ಕಾನೂನಿನ ಕೆಲವು ಮುಖ್ಯ ಕಾಯ್ದೆಗಳ ಕುರಿತು ಮಾಹಿತಿಯನ್ನು ನೀಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ, ಯುವವಾಹಿನಿ ಘಟಕದ ಸದಸ್ಯರೂ ಹಾಗೂ ಪರಿಸರ ಪ್ರೇಮಿಯಾಗಿರುವ ನಾಗರಾಜ್ ಬಜಾಲ್ ಅವರು, ಮನೆ ಹಾಗೂ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡುವ ಮಹತ್ವವನ್ನು ವಿವರಿಸಿದರು. ಕಸವನ್ನು ಹಸಿಕಸ ಮತ್ತು ಒಣಕಸವಾಗಿ ವಿಂಗಡಿಸುವ ವಿಧಾನ, ಪರಿಸರ ಸಂರಕ್ಷಣೆಯಲ್ಲಿ ಮರಗಳ ಪಾತ್ರ ಹಾಗೂ ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕುವ ಅಗತ್ಯತೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಘಟಕದ ಅಧ್ಯಕ್ಷರಾದ ಸುನಿಲ್ ಸಾಲ್ಯಾನ್ ಅವರು ಅತಿಥಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಯುವವಾಹಿನಿ ಘಟಕದ ವತಿಯಿಂದ ಭಟ್ಟರಾಂಡ್ ರಶೆಲ್ ಶಾಲೆಗೆ ವಾಲಿಬಾಲ್ ಮತ್ತು ತ್ರೋಬಾಲ್ಗಳನ್ನು ಕೊಡುಗೆಯಾಗಿ ನೀಡಲಾಯಿತು. ಅತಿಥಿಗಳಿಗೆ ಪರಿಸರ ಸ್ನೇಹಿ ಗಿಡಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ಸುನಿಲ್ ಸಾಲ್ಯಾನ್, ಕಾರ್ಯದರ್ಶಿ ಸಂದೀಪ್ ಕೋಟ್ಯಾನ್, ಪ್ರಥಮ ಹಾಗೂ ದ್ವಿತೀಯ ಉಪಾಧ್ಯಕ್ಷರು, ಕೋಶಾಧಿಕಾರಿ, ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಕೊನೆಯಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಲಾಯಿತು.


