ಕೂಳೂರು : ಯುವವಾಹಿನಿ ಸಂಸ್ಥೆಯು ಯಾವ ಉದ್ದೇಶದಿಂದ ಪ್ರಾರಂಭವಾಯಿತು ಎಂಬುದನ್ನು ಅರಿತು ಆ ದಿಕ್ಕಿನಲ್ಲಿ ಮುನ್ನಡೆಯುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದು ಶ್ರೀ ಕೃಷ್ಣ ಭಜನಾ ಮಂದಿರ, ವಿದ್ಯಾನಗರದ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಸುವರ್ಣ ಹೇಳಿದರು.

ಅವರು ದಿನಾಂಕ 18-01-2026ರಂದು ಕೂಳೂರು ಫಲ್ಗುಣಿ ಸಭಾಂಗಣದಲ್ಲಿ ನಡೆದ ಯುವವಾಹಿನಿ (ರಿ) ಕೂಳೂರು ಘಟಕದ ಪದಗ್ರಹಣ–2026 ಹಾಗೂ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ಯುವವಾಹಿನಿ ಸಂಸ್ಥೆಯನ್ನು ಸ್ಥಾಪಿಸಿದ ಉದ್ದೇಶವನ್ನು ಅರಿತು ಯುವ ಪೀಳಿಗೆಯು ಮುಂದಿನ ಹಂತಕ್ಕೆ ಸಾಗಬೇಕಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಲತೀಶ್ ಪೂಜಾರಿ ವಹಿಸಿದ್ದರು. ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ ಅವರು 2025–26ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಘಟಕದ ಕಾರ್ಯಚಟುವಟಿಕೆಗಳನ್ನು ಒಳಗೊಂಡ “ಮಾತೃ ಸ್ಪರ್ಶ” ಕಿರುಹೊತ್ತಿಗೆಯನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿ.ಎ. ಶ್ರವಣ್ ಕುಮಾರ್ ಬಿಡುಗಡೆ ಮಾಡಿದರು. ಕಿರುಹೊತ್ತಿಗೆಯ ಸಂಪಾದಕಿ ವೀಣಾ ಭಾಸ್ಕರ್ ಬಿಡುಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಆಯ್ಕೆ ಸಮಿತಿ ಸಂಚಾಲಕರಾದ ಇಂದಿರಾ ಸುರೇಶ್ ಅವರು 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಘೋಷಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. 2026–27ನೇ ಸಾಲಿನ ನೂತನ ಅಧ್ಯಕ್ಷರಾಗಿ ಗೀತಾ ವಸಂತ್, ಕಾರ್ಯದರ್ಶಿಯಾಗಿ ವಂದೀಪ್ ಕೆ. ಸುವರ್ಣ, ಕೋಶಾಧಿಕಾರಿಯಾಗಿ ಸುಮಾ ಕೋಡಿಕಲ್, ಪ್ರಥಮ ಉಪಾಧ್ಯಕ್ಷರಾಗಿ ಮುಕೇಶ್, ದ್ವಿತೀಯ ಉಪಾಧ್ಯಕ್ಷರಾಗಿ ತುಳಸೀ ಸುಜೀರ್ ಆಯ್ಕೆಯಾದರು.

ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಅವರು ಮಾತನಾಡಿ, ಕೂಳೂರು ಘಟಕವನ್ನು ಮುನ್ನಡೆಸಿದ ಅಧ್ಯಕ್ಷರುಗಳು ಹಾಕಿರುವ ಅಡಿಪಾಯ ಮತ್ತು ಅವರು ರೂಪಿಸಿದ ದಾರಿ ಮುಂದಿನ ಅಧ್ಯಕ್ಷರಿಗೆ ದಾರಿ ದೀಪವಾಗಿದೆ ಎಂದು ಹೇಳಿದರು. ನೂತನ ಅಧ್ಯಕ್ಷರಾದ ಗೀತಾ ವಸಂತ್ ಮಾತನಾಡಿ, ಯುವವಾಹಿನಿ ಸಂಸ್ಥೆಯು ಸದಸ್ಯರಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ತನಗೆ ದೊರೆತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ತಿಳಿಸಿದರು. ಸದಸ್ಯರ ಸಹಕಾರದೊಂದಿಗೆ ಮುನ್ನಡೆಯುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ನಿರೂಪಕಿ ಪ್ರಜ್ಞಾ ಒಡಿಲ್ನಾಳ ಸಾಧನೆಯನ್ನು ಗುರುತಿಸಿ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ವಿದ್ಯಾರ್ಥಿ ವೇತನ ವಿತರಣೆ :
ಇದೇ ಸಂದರ್ಭದಲ್ಲಿ 37 ವಿದ್ಯಾರ್ಥಿಗಳಿಗೆ ಸುಮಾರು ರೂ. 2,00,000/- ಮೊತ್ತದ ವಿದ್ಯಾನಿಧಿಯನ್ನು ವಿತರಿಸಲಾಯಿತು. ಘಟಕದ ಅಧ್ಯಕ್ಷರನ್ನು ಕುಟುಂಬ ಸಮೇತರಾಗಿ ಸನ್ಮಾನಿಸಲಾಯಿತು. ಅಧ್ಯಕ್ಷರಾದ ಲತೀಶ್ ಪೂಜಾರಿ ಮಾತನಾಡಿ, ಯುವವಾಹಿನಿ ಸಂಸ್ಥೆಯು ನಮಗೆ ಏನು ನೀಡುತ್ತದೆ ಎಂಬುದಕ್ಕಿಂತ ನಾವು ಸಂಸ್ಥೆಗೆ ಏನು ನೀಡಬೇಕು ಎಂಬುದನ್ನು ಯೋಚಿಸಬೇಕು ಎಂದರು. ಒಬ್ಬ ಸಾಧಾರಣ ವ್ಯಕ್ತಿಗೂ ಅಧ್ಯಕ್ಷ ಸ್ಥಾನ ನೀಡುವ ಏಕೈಕ ಸಂಸ್ಥೆ ಯುವವಾಹಿನಿ ಎಂಬುದಾಗಿ ಅವರು ಹೆಮ್ಮೆ ವ್ಯಕ್ತಪಡಿಸಿದರು. 2025–26ನೇ ಸಾಲಿನಲ್ಲಿ ಘಟಕಕ್ಕೆ ಸೇವೆ ಸಲ್ಲಿಸಿದ ಸದಸ್ಯರನ್ನು ಅವರು ಅಭಿನಂದಿಸಿದರು.
ವೇದಿಕೆಯಲ್ಲಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಿರಂಜನ್ ಉಪಸ್ಥಿತರಿದ್ದರು. ಅಧ್ಯಕ್ಷರು ಸ್ವಾಗತಿಸಿದರು. ಮೋಕ್ಷ ಪ್ರಾರ್ಥನೆಯನ್ನು ನೆರವೇರಿಸಿದರು . ಶೈಲೇಶ್ ಬೈಕಂಪಾಡಿ ಹಾಗೂ ಮಧುಶ್ರೀ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ರೋಹಿತ್ ವಂದಿಸಿದರು



