Yuvavahini

NOV 04, 2012 5.09 AM IST

ಕೆ. ರಾಜೀವ ಪೂಜಾರಿ -ರಜತ ರಶ್ಮಿ -2012

ಸಂಸ್ಕಾರಗಳ ಮಹತ್ವ

ಚಿಂತನ

ಈ ವಿಶಾಲ ಜಗತ್ತು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹವಾಗುಣ, ಪ್ರಾಕೃತಿಕ ಲಕ್ಷಣ, ಮಣ್ಣಿನ ಗುಣ ಹೊಂದಿದೆ. ಹಾಗೆಯೇ ಈ ಜಗತ್ತಿನ ಸೃಷ್ಟಿಯಲ್ಲಿ ಮಾನವನ ಸೃಷ್ಟಿಯು ಅತ್ಯಂತ ಶ್ರೇಷ್ಟವಾದುದು. ಮಾನವ ಕುಲದ ವಿಕಾಸವಾದಂತೆ ಕಾಲಕ್ರಮೇಣ ನಾಗರಿಕತೆ ಬೆಳೆಯಿತು. ಮಾನವ ಅನ್ಯನ್ಯ ಕಾರಣಗಳಿಗಾಗಿ ತಂಡ ತಂಡವಾಗಿ ಬದುಕಲು ಆರಂಭಿಸಿದ. ವಿಭಿನ್ನ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿರುವ ಜಗತ್ತಿನಲ್ಲಿ ಮಾನವರು ಅವರವರು ಬದುಕುವ ನೆಲ ಜಲದ ಗುಣಗಳಿಗೆ ಅನುಗುಣವಾಗಿ ಬದುಕಬೇಕಾಯಿತು. ಇದರಿಂದ ವಿಭಿನ್ನ ಜೀವನ ರೀತಿ ಬೆಳೆಯಿತು. ಒಂದು ಪ್ರದೇಶದಲ್ಲಿ ಒಟ್ಟಿಗೆ ಬದುಕುವ ಜನರ ರೀತಿ, ನೀತಿಗಳು ವಿಶಿಷ್ಟವಾಗಿ ಆ ಪ್ರದೇಶಕ್ಕೆ ಹೊಂದಿಕೊಂಡು ಬದುಕುವ ರೀತಿ ಒಂದು ಸಂಸ್ಕೃತಿ ಎಂದಾಯಿತು. ಈ ಸಂಸ್ಕೃತಿಯೊಳಗೆ ಬದುಕುವರೇ ಪೂರಕ ರೀತಿ, ನೀತಿಗಳನ್ನು, ಕಟ್ಟು ಕಟ್ಟಳೆಗಳನ್ನು ಜನರು ಬೆಳೆಸಿ ಕೊಂಡರು. ಇವುಗಳು ಸಂಸ್ಕಾರವೆಂದು ಗುರುತಿಸಲ್ಪಟ್ಟವು. ಹಾಗೆ ಈ ಸಂಸ್ಕಾರವೆಂಬುದು ಜನರ ಬದುಕು, ಅವರ ನಂಬಿಕೆ, ಆರಾಧನೆ, ಆಹಾರ ಪದ್ಧತಿ, ನಡವಳಿಕೆ, ಆಚಾರ-ವಿಚಾರ, ವ್ಯವಹಾರಗಳನ್ನು ಪ್ರತಿಬಿಂಭಿಸುತ್ತದೆ. ಹೀಗೆ ಈ ಭೂಮಿಯ ಮೇಲೆ ಅನೇಕ ಸಂಸ್ಕೃತಿ, ಸಂಸ್ಕಾರಗಳು ಹುಟ್ಟಿಕೊಂಡವು. ಗ್ರೀಕ್ ಸಂಸ್ಕೃತಿ, ಪಾಶ್ಚಾತ್ಯ ಸಂಸ್ಕೃತಿಯಂತೆ ಹಿಂದೂ ಸಂಸ್ಕೃತಿಯು ಹುಟ್ಟಿ ಕೊಂಡಿತು. ಸಿಂಧೂನದಿ ಹರಿಯುವ ಇಕ್ಕೆಲ ತೀರದಲ್ಲಿ ಹುಟ್ಟಿ ಬೆಳೆದುದು ಹಿಂದೂ ಸಂಸ್ಕೃತಿ.

ಈ ಭೂಮಿಯ ಮೇಲಣ ಜನರ ಬದುಕು ಅಂದಿನಿಂದ ಇಂದಿಗೂ ವಿಭಿನ್ನ ರೀತಿಯದಾಗಿದೆ. ಒಂದೆಡೆ ವೈಜ್ಞಾನಿಕ ಬೆಳವಣಿಗೆಯೊಂದಿಗೆ ಆರ್ಥಿಕ ಬೆಳವಣಿಗೆಯಾಗಿ ನಾಗರಿಕ ಸಂಸ್ಕೃತಿಯ ಜನರು ಸಮೃದ್ಧಿಯ ಬದುಕು ಬದುಕಿದರೆ ಅಂದಿನಿಂದ ಇಂದಿಗೂ ಗುಡ್ಡಕಾಡು, ಅರಣ್ಯ ಬೆಟ್ಟಗಳಲ್ಲಿ ವಾಸಿಸುವ ಜನರು ಕಷ್ಟಕರ ಬದುಕು ನಡೆಸುತ್ತಿದ್ದಾರೆ. ನಾಗರಿಕ ಬದುಕಿನ ಸಂಸ್ಕೃತಿ, ಸಂಸ್ಕಾರಗಳೇ ಬೇರೆಯಾಗಿ, ಈ ಗುಡ್ಡ ಕಾಡಿನಲ್ಲಿ ಬದುಕುವ ಜನರ ಸಂಸ್ಕಾರಗಳೇ ಬೇರೆ ಇರುತ್ತವೆ. ಅಂದರೆ ಒಂದು ವರ್ಗದ, ಪ್ರದೇಶದ ಜನರ ಸಂಸ್ಕಾರದಿಂದ ಆ ಜನರ ಬದುಕನ್ನು ಅರ್ಥೈಸಿಕೊಳ್ಳಬಹುದು. ಅಕ್ಕಿ ಅದೆಷ್ಟು ಚೆನ್ನಾಗಿ ಆಗಿದೆ ಎನ್ನುವುದರ ಮೇಲೆ ಅಕ್ಕಿ ಮಿಲ್‌ನ ಕಾರ್ಯನಿರ್ವಹಣೆ, ಹೊಲದಲ್ಲಿ ಬರುವ ಫಸಲೇ ಬೆಳೆಯ ಸಮರ್ಪಕತೆಗೆ ಅಳತೆಗೋಲು ಇದ್ದಂತೆ, ಈ ಸಂಸ್ಕಾರದಿಂದ ಜನರ ಬದುಕನ್ನು ಕಲ್ಪಿಸಬಹುದಾಗಿದೆ.

ಈ ಎಲ್ಲ ಸಂಸ್ಕೃತಿ ಈ ಜಗತ್ತಿನಲ್ಲಿ ಯಾವಾಗ ಹುಟ್ಟಿಕೊಂಡವು ಎನ್ನುವುದು ನಿಖರವಾಗಿಲ್ಲವಾದರೂ ಇವು ತಮ್ಮದೇ ಆದ ನಂಬಿಕೆ, ಸಂಸ್ಕಾರಗಳನ್ನು ದಿನ ಕಳೆದಂತೆ, ಕಾಲ ಬದಲಾದಂತೆ ಹುಟ್ಟು ಹಾಕಿತು. ಅದರಂತೆ ಭಾರತೀಯ ಸಂಸ್ಕೃತಿಯೂ ಬೆಳೆದು ಪ್ರೀತಿ, ತಾಳ್ಮೆ, ಕ್ಷಮೆ, ನಿಸ್ವಾರ್ಥತೆಯಂತಹ ಸಾತ್ವಿಕ ಗುಣಗಳನ್ನು ಪ್ರತಿಬಿಂಬಿಸಿತು. ಅಂದರೆ ವಿಶ್ವದ ಜನರೆಲ್ಲ ದೇವರು, ಧರ್ಮದ ಬಗ್ಗೆ ಯೋಚಿಸಲೂ ಆಗದ ಸುಮಾರು 5000 ವರ್ಷಗಳ ಹಿಂದೆಯೇ ಉತ್ಕೃಷ್ಟ ನವ ನಾಗರಿಕತೆ ಭಾರತದಲ್ಲಿ ಕಂಗೊಳಿಸುತ್ತಿತ್ತು. ಈ ೫೦೦೦ ವರ್ಷಗಳಿಂದ ಭಾರತೀಯ ಸಂಸ್ಕೃತಿಯು ಬೇರು ಬಿಟ್ಟು ಇಡೀ ಜಗತ್ತಿಗೆ ಮಾನವೀಯತೆ ಮತ್ತು ನಾಗರಿಕತೆಯನ್ನು ನೀಡಿದೆ. ಭಾರತೀಯ ಸಂಸ್ಕೃತಿಯಲ್ಲಿ ಧರ್ಮ, ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯವೆಂಬುದು ವಿವಿಧತೆಯಲ್ಲಿ ಏಕತೆಯನ್ನು ಕಂಡಿದೆ. (ಏಕಂ ಸತ್‌ವಿಪ್ರಾ ಬಹುದಾವದಂತಿ) ಯಾವ ಪ್ರಾಣಿ ಪಕ್ಷಿಗೂ ಇರದ ಅಮೂಲ್ಯ ಚೈತನ್ಯ, ಬುದ್ಧಿ, ಮಾತು ಮಾನವನಿಗೆ ಇದೆ. ಅದನ್ನು ಸನ್ಮಾರ್ಗದಲ್ಲಿ ಬಳಸಿ ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎನ್ನುವ ಸಂಸ್ಕಾರವನ್ನು ನಮ್ಮ ಸಂಸ್ಕೃತಿ ಎಂದೋ ಕಂಡುಕೊಂಡು ಪ್ರತಿಪಾದಿಸಿದೆ.

ನಮ್ಮ ಸಂಸ್ಕೃತಿ ಸಂಸ್ಕಾರಗಳಲ್ಲಿ ’ಸರ್ವೇ ಜನಾ ಸುಖಿನೋಭವಂತು’ ಎನ್ನುವ ಚಿಂತನೆ ಇದೆ. ಜಗದ ಸುಖದಲ್ಲಿ ನನ್ನ ಸುಖವಿದೆ ಎನ್ನುವ ನೀತಿಯಿದೆ. ನೂರಾರು ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ, ಪರಂಪರೆ ಇರುವ ದೇಶವಾದರೂ ಇಲ್ಲಿ ನೀನು ಸ್ವಾರ್ಥಿಯಾಗಿ ನಿನ್ನೊಬ್ಬನನ್ನೇ ನೋಡಬೇಡ, ನಾಲ್ಕು ಜನರಿಗೆ ಉಪಕಾರಿಯಾಗಿ ಬದುಕು, ಯಾರು ಬೇರೆಯವರಿಗಾಗಿ ಬದುಕುತ್ತಾರೋ ಅವರೇ ನಿಜವಾಗಿ ಬದುಕುವವರು ಎನ್ನುವ ಉದಾತ್ತ ಸಾಂಸ್ಕೃತಿಕ ಬೇರುಗಳೇ ನಮ್ಮ ರಾಷ್ಟ್ರೀಯತೆಯಲ್ಲಡಗಿದೆ. ಒಳ್ಳೆಯ ಹಾದಿಯಲ್ಲಿ ನಡೆಯಬೇಕೆಂಬ ಕನಸನ್ನು ಹೊಂದಿರುವವರನ್ನು ಈ ಪ್ರಕೃತಿಯು ಎಂದೂ ಕೈಬಿಡುವುದಿಲ್ಲ ಎಂಬ ನಂಬಿಕೆ ನಮ್ಮ ಪ್ರಕೃತಿಯ ಆರಾಧನೆಯಲ್ಲಿದೆ. ವಿನಯದಿಂದ ಅದಮ್ಯವಾದ ಆತ್ಮವಿಶ್ವಾಸವಿದ್ದು ದೇವರು, ಜಗತ್ತು ಮತ್ತು ಆಧ್ಯಾತ್ಮಗಳಿಗೆ ಹೊಸ ಹೊಸ ಅರ್ಥಗಳನ್ನು ಕೊಡುತ್ತ ಭಾಗವತ ಧರ್ಮದ ಅಡಿಪಾಯವನ್ನು ಗಟ್ಟಿಗೊಳಿಸುವ ತ್ಯಾಗ, ಬಲಿದಾನದ ಪರಂಪರೆ ನಮ್ಮಲ್ಲಿದೆ. ಅಲ್ಲದೆ ದೇವತಾರಾಧನೆ, ಭೂತಾರಾದನೆ, ದೈವ ದೇವರುಗಳಿಗೆ ಅರ್ಪಣೆ ಇವೆಲ್ಲವು ಕೂಡಾ ನಮ್ಮ ಸಂಸ್ಕಾರಗಳ ಅಂಗವಾಗಿದೆ.

ಹಿಂದೆ ನಮ್ಮ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಜನರಲ್ಲಿ ನಂಬಿಕೆ, ಭಯ, ಭಕ್ತಿ ಇತ್ತು. ಯಾವುದೇ ಕಾರಣಕ್ಕೂ ನಮ್ಮ ಸಂಸ್ಕಾರಗಳಿಂದ ವಿಚಲಿತರಾಗುತ್ತಿರಲಿಲ್ಲ. ಹಿಂದೆ ವಿದೇಶಿ ಆಕ್ರಮಣಕಾರರು ಭಾರತದ ರಾಜರುಗಳ ಮೇಲೆ ದಾಳಿ ನಡೆಸಿ ಗೆದ್ದ ನಂತರ ಸೈನಿಕರ ಪತ್ನಿ, ಹೆಣ್ಮಕ್ಕಳ ಮೇಲೆ ಅತ್ಯಾಚಾರ ನಡೆಸಿದಾಗ ಎಷ್ಟೋ ಮಂದಿ ರಜಪೂತ ಹೆಂಗಸರು ಈ ಕಾರಣಕ್ಕಾಗಿಯೇ ಸಾಮೂಹಿಕ ಆತ್ಮಾಹುತಿ ಮಾಡಿಕೊಂಡ ವಿಚಾರ ನಮ್ಮ ಚರಿತ್ರೆಯಲ್ಲಡಗಿದೆ. ಎಂದು ನಾವು ನಮ್ಮ ಸಂಸ್ಕಾರಗಳಿಂದ, ಧರ್ಮ ಪಥದಿಂದ ವಿಚಲಿತರಾಗುತ್ತೇವೆಯೋ ಅಂದು ಮೋಸದ ಹಾಳು ಬಾವಿ ನಮಗೆದುರಾಗುತ್ತದೆ. ಸರಿ, ಕೆಲವೊಮ್ಮೆ ಮೌಢ್ಯಗಳು, ಧಾರ್ಮಿಕ ಅಪವ್ಯಯ, ಮತೀಯ ದರೋಡೆಗಳು ಕೆಲವೊಮ್ಮೆ, ಅತಿರೇಕ ಅಪಸಿದ್ಧಾಂತಗಳಾಗಿ ಎಲ್ಲಾ ಬಗೆಯ ಸಾಂಸ್ಕೃತಿಕ ಅಡಚಣೆ, ಸಂಕೇತ, ಸೊಬಗು, ಅಂದ ಚೆಂದಗಳನ್ನು ಕತ್ತಿ ಬೀಸಿ ನಿರಾಕರಿಸುತ್ತಿದ್ದರು.

ಭಾರತೀಯ ಸಮಾಜ ಒಂದು ಜನಾಂಗವಾಗಿ ಬದುಕಿದೆ. ಸಿಂಧೂ ನದಿಯ ಪ್ರಭಾವದಿಂದ ಹಿಂದೂ ಸಮಾಜ ಒಂದು ಜನಾಂಗ, ಸಮುದಾಯ, ಜೀವನ ವಿಧಾನ, ಜೀವನ ವೈವಿಧ್ಯವಾಗಿ ಮುಂದುವರಿದಿದೆ. ಅದರಲ್ಲೂ ನಮ್ಮ ಹಳೆಯ ಸಂಸ್ಕೃತಿಗಳಲ್ಲಿ ವೈವಿಧ್ಯ, ಸೌಂದರ್ಯ, ಗಹನತೆ, ಕಲಾ ವಿಸ್ತಾರ ಇದ್ದವು. ಆದರೆ ದುರದೃಷ್ಟವಶಾತ್ ಈ ಉನ್ನತ ಸಂಸ್ಕೃತಿಯನ್ನೊಳಗೊಂಡ ಸಂಸ್ಕಾರಯುತ ಸಮಾಜ ಜಾತಿ, ಉಪಜಾತಿಗಳೆಂಬ ಕವಲುಗಳಾಗಿ ಹರಡಿಕೊಂಡಿವೆ. ಭಾರತೀಯ ವೈದಿಕರಿಗೆ ವರ್ಣದ್ವೇಷ ಮಾಡಿರದಿದ್ದರೆ, ಮೂಡಿದ್ದರೂ ಜಾತಿ ಕಂದಕ ನಿರ್ಮಿಸಿರದಿದ್ದರೆ ಭಾರತೀಯರು ವಿಶ್ವದಲ್ಲಿಯೇ ಅತ್ಯಂತ ಸರ್ವಶ್ರೇಷ್ಠ ಮಾನವರೆನಿಸಿಕೊಳ್ಳುತ್ತಿದ್ದರು. ವೇದಗಳು ಮಡಿವಂತ ಬ್ರಾಹ್ಮಣರ ಬಿಗಿಯಾದ ಕಾವಲಿನಿಂದಾಗಿ ಸ್ತ್ರೀಯರ ಮತ್ತು ಸಮಾಜದಲ್ಲಿ ಶೂದ್ರರೆಂದು ಗುರುತಿಸಲ್ಪಟ್ಟವರ ಕೈಗೆ ಸಿಗದೇ ದೂರವೇ ಉಳಿಯಿತು. ದಶೋಪನಿಷತ್ತುಗಳು, ವೇದವ್ಯಾಸರ ಬ್ರಹ್ಮಸೂತ್ರ, ಮತ್ತು ಭಗವದ್ಗೀತೆ- ಇವು ಮೂರು ಸೇರಿ ವೇದಾಂತ ದರ್ಶನಗಳಿಗೆ ಆಧಾರವಾಗಿ ಈ ವೇದಾಂತ ಗಳು ಯಾವುದೇ ಜಾತಿ, ಮತ, ಕಾಲ, ಧರ್ಮಗಳನ್ನು ಪ್ರತಿಪಾದಿಸುವುದಿಲ್ಲ. ಇಲ್ಲಿ ಗಮನಿಸಬೇಕಾದ ಅತಿ ಮುಖ್ಯ ವಿಚಾರವೆಂದರೆ ರಾಮಾಯಣವನ್ನು ರಚಿಸಿದ ವಾಲ್ಮೀಕಿ ಬೇಡರ ಕುಲದಲ್ಲಿ ಜನಿಸಿದವನು, ಮಹಾಭಾರತವನ್ನು ರಚಿಸಿದ ವೇದವ್ಯಾಸರು ಓರ್ವ ಅಂಬಿಗ ಕನ್ಯೆಯಿಂದ ಜನಿಸಿದವರು. ಗಾಯತ್ರಿ ಮಂತ್ರವನ್ನು ರಚಿಸಿದ ವಿಶ್ವಾಮಿತ್ರ ಮುನಿಗಳು ಜನ್ಮತಃ ಕ್ಷತ್ರಿಯರು (ಕೌಶಿಕ ಮಹಾರಾಜ) ವಿಶ್ವವಿಖ್ಯಾತ ಕವಿ ಕಾಳಿದಾಸ ಕುರುಬ ಜನಾಂಗಕ್ಕೆ ಸೇರಿದವರು. ಭಗವಾನ್ ಶ್ರೀರಾಮ ಕ್ಷತ್ರಿಯ ಕುಲ ಸಂಜಾತರು ಮತ್ತು ಶ್ರೀಕೃಷ್ಣ ಗೋವಳ ಕುಲದವನು.

ತಮ್ಮ ಬದುಕಿನ ಕತ್ತಲೆಯನ್ನು ಕೆಡವುತ್ತಲೇ ಇತರರ ಹಾದಿಯ ಹಣತೆ ದೀಪವಾಗಬಲ್ಲ ಋಷಿಮುನಿಗಳು ಇದ್ದ ನಾಡಿದು. ಇಂತಹವರ ಕಥೆ ನಮ್ಮೊಳಗಿರುವ ಧೈರ್ಯದ ಕಿಡಿಯನ್ನು, ಆತ್ಮವಿಶ್ವಾಸವನ್ನು, ಜಗತ್ತು ಬದಲಿಸುವ ಶಕ್ತಿಯನ್ನು – ಬದುಕು ಭಾರವಾದ ಹೊತ್ತಿನಲ್ಲಿ ಜಾಗೃತಗೊಳಿಸಬಲ್ಲದು. ಅಂತಹ ಬಲಿಷ್ಠ ಸಾಂಸ್ಕೃತಿಕ ಪರಂಪರೆ ನಮ್ಮದು. ನಮ್ಮ ಸಂಸ್ಕೃತಿಯಲ್ಲಿ ಯಾವುದೇ ತತ್ವ ದರ್ಶನದ ಖಂಡನೆ ಇಲ್ಲ. ಉಪ ನಿಷದ್ದರ್ಶನದ ಎರಡು ವಿಕಾಸಗಳಾದ ಬೌದ್ಧ ದರ್ಶನ, ಶಾಂಕರ ದರ್ಶನವನ್ನು ಕಂಡ ಸಂಸ್ಕೃತಿ ನಮ್ಮದು. ಹಾಗೆಯೇ ನೂರಾರು ಧೀರ ಚಿಂತಕರನ್ನು ಸಮಾಜ ಸುಧಾರಕರನ್ನು, ಋಷಿಮುನಿಗಳನ್ನು ಜಗತ್ತಿನ ಮಾನವರ ಉದ್ಧಾರಕ್ಕಾಗಿ ನೀಡಿದ ಸಂಸ್ಕಾರವೂ ನಮ್ಮದು. ಉನ್ನತ ಕಲ್ಪನಾಶೀಲ, ಕವಿ ಹೃದಯದ ದಾರ್ಶನಿಕರಾಗಿ ಸಮಾಜ ಸುಧಾರಕನಾಗಿ ಸರ್ವಧರ್ಮ ಸಮನ್ವಯಕಾರನಾಗಿ ಬದುಕಿದ ಧೀರ ಚಿಂತಕ ಬ್ರಹ್ಮಶ್ರೀ ನಾರಾಯಣ ಗುರುವಿನಂತಹ ಮಾನವ ಶ್ರೇಷ್ಠ ದಾರ್ಶನಿಕರು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಬೆಳಗಿಸುವ ಕೆಲಸ ಮಾಡಿದ್ಧಾರೆ. ಹಾಗೆಯೇ ಜಗತ್ತಿನ ದಾರ್ಶನಿಕ ವಲಯದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿರುವ ಆಚಾರ್ಯ ಶಂಕರರು ಬೃಹತ್ತಾದ ದಾರ್ಶನಿಕ ಚರ್ಚೆಯನ್ನು ಪ್ರೇರಿಸಿ ಆ ವರೆಗಿನ ವಿವಿಧ ದರ್ಶನ ಮಾರ್ಗಗಳನ್ನು ಒಗ್ಗೂಡಿಸಿ ಭಾರತೀಯ ಚಿಂತನೆ ಪರಂಪರೆಗೆ ಕೇಂದ್ರೀಕೃತ ಅರ್ಥವೊಂದನ್ನು ನೀಡುವ ಕೆಲಸವನ್ನು ಮಾಡಿದವರು. ಬ್ರಹ್ಮಶ್ರೀ ನಾರಾಯಣ ಗುರುವರ್ಯರು ಕೂಡಾ ಇದೇ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದುದನ್ನು ನಾವು ಜ್ಞಾಪಿಸಿಕೊಳ್ಳಬಹುದು.

ಆದರೆ ಇಂದು ನಮ್ಮ ಬದುಕಿನ ವಿಧಾನ ಬದಲಾಗಿದೆ. ಭಾರತೀಯ ಪ್ರಾಚೀನ ಸುಸಂಸ್ಕೃತಿ ಇಂದು ಸಂದಿಗ್ಧತೆಯಲ್ಲಿದೆ. ಈ ಜಗತ್ತಿನ ಸಮಸ್ತವೂ ಚೈತನ್ಯ ಮಾತ್ರ. ಪ್ರತಿಯೊಂದು ವಸ್ತುವೂ ಮತ್ತೊಂದು ವಸ್ತುವಿನ ಸಂಪರ್ಕಕ್ಕೆ ಬಂದಾಗ ಸಂಪರ್ಕಿತ ವಸ್ತುವಿನ ಚೈತನ್ಯದ ಒಂದು ಭಾಗವನ್ನು ಕೆಲಕಾಲದ ಮಟ್ಟಿಗಾದರೂ ತನ್ನೊಂದಿಗೆ ಹೊಂದಿರುತ್ತದೆ. ಉತ್ತಮ ವಿಚಾರಗಳು ನಮ್ಮನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿಸುವ ಪ್ರೇರಕ ಶಕ್ತಿಯಾಗುತ್ತದೆ. ಆದರೆ ನಮ್ಮಲ್ಲಿ ಆಧುನಿಕತೆಯ ಸ್ಪರ್ಶ, ವಿದೇಶಿ ಸಂಸ್ಕೃತಿಯ ವ್ಯಾಮೋಹ, ಫ್ಯಾಶನ್‌ಗಳ ವ್ಯಾಮೋಹ ಇವುಗಳ ಲಗ್ಗೆಯಿಂದಾಗಿ ಅನಾದಿ ಕಾಲದಿಂದ ಅನುಸರಿಸಿದ ನಂಬಿಕೆ, ಸಂಸ್ಕೃತಿ, ಸಂಪ್ರದಾಯಗಳು ನಮ್ಮಿಂದ ದೂರ ಆಗಿವೆ. ನಾಗರಿಕತೆ ಇಷ್ಟು ಮುಂದುವರಿದಿದ್ದರೂ, ಮನಃಶಾಸ್ತ್ರೀಯ ಅಧ್ಯಯನಗಳು ಬಹಳ ಮುಂದೆ ಸಾಗಿದ್ದರೂ, ಕಾನೂನುಗಳು ಬಿಗಿಯಾಗಿ ದ್ದರೂ, ಮಾನವ ಸಂಬಂಧಗಳು ಹಿಂದೆಂದಿಗಿಂತಲೂ ಸೂಕ್ಷ್ಮವಾಗಿದ್ದರೂ, ಮಾನವ ಹಕ್ಕುಗಳು ಮತ್ತು ಅವುಗಳ ಹೋರಾಟಗಳು ತೀಕ್ಷ್ಣವಾಗಿದ್ದರೂ ಕೂಡಾ ನಮ್ಮ ಸಂಸ್ಕಾರ, ಸಂಪ್ರದಾಯಗಳು ಇನ್ನೂ ಜೀವಂತವಾಗಿವೆ ಎನ್ನುವುದನ್ನು ಮರೆತಂದಿದೆ. ಭೋಗ ಜೀವನವೇ ಬದುಕೆಂದು ಭ್ರಮಿಸುವ ಬದಲಾವಣೆ ಬಂದಿದೆ.

ಇಂದು ನಮ್ಮ ಯುವಜನತೆಯಲ್ಲಿ ರಜೋಗುಣ, ಬಲವಾಗಿ ರವಿಚಂದ್ರರಿಲ್ಲದ ಆಗಸದಂತೆ ಮನಸ್ಸು ಮಬ್ಬಾಗಿ ಅವಿವೇಕ ಸಾಮ್ರಾಜ್ಯ ನಡೆಸುತ್ತಿದೆ ಹಾಗೂ ಮೋಹ, ಅಜ್ಞಾನದಂತಹ ದೋಷಗಳು ಬೆಳೆಯಲು ದಾರಿ ಮಾಡಿದೆ. ಸರ್ವೇ ಜನಾಃ ಸುಖಿನೋಭವಂತು, ಸರ್ವಸಂತಃ ನಿರಾಮಯ, ಸರ್ವೇ ಭದ್ರತೆ ಪಶ್ಯಂತು, ಮಾಕಶ್ಚಿತ್ ದುಃಖಬಾಗ್ಭವೇತ್ ಎನ್ನುವ ಸತ್ ಚಿಂತನೆ ದೂರವಾಗಿ, ಇವುಗಳೆಲ್ಲ ಅಪ್ರಯೋಜಕ, ಅನಗತ್ಯ ಎಂಬ ಚಿಂತನೆ ಎಳೆಯರಲ್ಲಿ ಮೂಡಿದಂತಿದೆ. ಉದಾಹರಣೆಗೆ ಹುಟ್ಟು ಹಬ್ಬದ ಹೆಸರಿನಲ್ಲಿ ಮೋಜು ಮಸ್ತಿ-ಸ್ವೇಚ್ಛಾಚಾರ ಮಿತಿ ಮೀರಿ ನಡೆಯುತ್ತಿದೆ. ಹುಟ್ಟು ಹಬ್ಬವನ್ನು ಯಾವುದೇ ಹೋಂಸ್ಟೇಯಲ್ಲಿ ನಡೆಸುವುದು ನಮ್ಮ ಸಂಸ್ಕಾರವಲ್ಲ. ಇದರ ಒಂದು ಪುಟ್ಟ ಕಿಡಿಯೇ ಮೊನ್ನೆ ಮಂಗಳೂರನ ಪಡೀಲಿನಲ್ಲಿ ನಡೆದ ಘಟನೆ. ಸರಿ ಏಟು ಕೊಟ್ಟವರೂ, ಏಟು ತಿಂದವರೂ ಅಪಕ್ವ ಬಿಸಿ ರಕ್ತದವರು. ಇದು ವಿವೇಕದ ಕೊರೆತೆಯೋ, ಬೌದ್ಧಿಕ ದಾರಿದ್ರ್ಯವೋ, ಸಂಸ್ಕಾರದ ಅಭಾವವೋ ತಿಳಿಯದು. ಇಲ್ಲಿ ತಂದೆ ತಾಯಿಯರ ಜವಾಬ್ದಾರಿ ಏನು? ಒಳಗೊಂಡ ಯಾವುದೇ ಸಂಘ ಸಂಸ್ಥೆಗಳ ಪಾತ್ರ, ಜವಾಬ್ದಾರಿ ಏನು? ಎನ್ನುವ ಪ್ರಶ್ನೆ ಏಳುತ್ತದೆ. ಆದರೆ ಯಾವುದೇ ಸಂಘಟನೆ ಯಾ ವ್ಯಕ್ತಿಯ ಪ್ರೇರಣೆ, ಪ್ರಚೋದನೆಗೆ ಒಳಗಾಗಿ ದುಷ್ಕೃತ್ಯದಲ್ಲಿ ಭಾಗಿಯಾಗಿ ಬದುಕನ್ನು ಯಾರೂ ಹಾಳು ಮಾಡಿಕೊಳ್ಳಬಾರದು. ತಮ್ಮ ಕೈ ಬೆರಳುಗಳಿಂದಲೇ ತಮ್ಮ ಕಣ್ಣುಗಳನ್ನು ಕುಕ್ಕಿ ಮುಂದೆ ಯಾತನೆ ಪಡುವ ಪ್ರಮೇಯ ಯಾಕೆ? ಬಡತನದ ಬೇಗೆಯಲ್ಲಿ ಆದರಿಸುವ ಕೈಗಳಾಗಲೀ, ಹೃದಯಗಳಾಗಲೀ ಇಲ್ಲದೆ ಬದುಕನ್ನು ಕತ್ತಲೆಯಲ್ಲಿ ನಡೆಸುವ ಅದೆಷ್ಟೋ ಜೀವಿಗಳಿದ್ದಾರೆ. ಸಾಧ್ಯವಾದರೆ ಹೋಗಿ ಅವರಿಗೆ ಸಹಾಯ ಮಾಡಬಹುದಲ್ಲವೇ?

ಸತ್ ಜ್ಞಾನವೇ ನಮ್ಮ ಧರ್ಮ ಸಂಸ್ಕೃತಿಯ ಮೂಲ, ಸಂಸ್ಕಾರಗಳ ಅಡಿಪಾಯ. ಶತಮಾನಗಳಿಂದ ಮಸುಕಾದ ನಮ್ಮ ಪ್ರಾಚೀನ ಜ್ಞಾನ, ಸಂಸ್ಕೃತಿ-ಸಂಸ್ಕಾರಗಳನ್ನು ತೊಳೆದು ಬೆಳಗಿ ಜೊಳ್ಳನ್ನು ಎಸೆದು ರಸತುಂಬಿದ ಕಾಳುಗಳನ್ನು ಹೆಕ್ಕಿ, ಬಿತ್ತಿ ಬೆಳೆಸುವ ಕಾರ್ಯ ಶೀಘ್ರ ಆಗಬೇಕಿದೆ. ಇದರಿಂದ ನಮ್ಮ ಮೂಲ ಸ್ವಭಾವ ’ಆನಂದ’ವನ್ನು ಹೊರಗಿನ ಎಲ್ಲ ಸುಖದ ಅರಸುವಿಕೆಯಲ್ಲಿ ಕಾಣಬಹುದು. ಆಗ ಮಾತ್ರ ನಮ್ಮ ಪ್ರಾಚೀನ ಸಂಸ್ಕೃತಿ, ಸಂಸ್ಕಾರಗಳು ಈ ಜಗತ್ತಿನಲ್ಲಿಯೇ ಉತ್ಕೃಷ್ಟ ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ. ಸ್ವಾಮೀ ವಿವೇಕಾನಂದರಂತಹ ಜಗತ್ತಿನ ಶ್ರೇಷ್ಠ ಮುನಿಗಳು, ಋಷಿಗಳು, ಬ್ರಹ್ಮಶ್ರೀ ನಾರಾಯಣ ಗುರು, ಬಸವೇಶ್ವರರಂತಹ ಸಮಾಜ ಸುಧಾರಕರ ಬೋಧನೆಗಳನ್ನು ಈಗಲಾದರೂ ನೆನಪು ಮಾಡಿಕೊಳ್ಳುವುದು ವಿಹಿತ. ಮಾನವ ಜನ್ಮ ದೊಡ್ಡದು. ಅದನ್ನು ಹಾಳು ಮಾಡಿ ಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂದರು ಪುರಂದರದಾಸರು. ಈ ಭೂಮಿ ಮೇಲೆ ಯಾವ ಪ್ರಾಣಿ ಪಕ್ಷಿಗೂ ಇಲ್ಲದ ಅಮೂಲ್ಯ ಚೈತನ್ಯ, ಬುದ್ಧಿ, ಮಾತು ಮಾನವರಿಗೆ ಇದೆ. ಅದನ್ನು ಸನ್ಮಾರ್ಗದಲ್ಲಿ ಬಳಸೋಣ. ಪ್ರಸ್ತುತ ವ್ಯವಸ್ಥೆಗೆ ಅನುಗುಣವಾಗಿ ಹಿಂದಿನ ಆಚರಣೆ, ಸಂಸ್ಕಾರಗಳು ಬದಲಾಗದೆ, ನೈಜತೆಯನ್ನು ಉಳಿಸಿಕೊಂಡು, ಸೇವೆ ಮಾಡುವ ಅವಕಾಶ ಬಂದಾಗ ಅದನ್ನು ಸದುಪಯೋಗ ಮಾಡಿಕೊಂಡು ಜನತೆಯಲ್ಲಿ ಉತ್ತಮ ಭರವಸೆಯನ್ನು ಕೊಡುವ ಅರ್ಥವತ್ತಾದ ಕಾರ್ಯಕ್ರಮಗಳು ಎಲ್ಲ ಸಂಘಟನೆಗಳಲ್ಲಿ ಆಗಲಿ.

ಯುವಜನರೇ ಭವಿಷ್ಯದಲ್ಲಿ ಭರವಸೆ ಇಡಿ. ದಿಟ್ಟ ಮನೋಭಾವಕ್ಕೆ ಭದ್ರ ಬುನಾದಿ ಹಾಕಿ. ನಿಮ್ಮ ಬದುಕನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ- ಬೇರೆಯವರ ಬದುಕನ್ನು ಬದಲಾಯಿಸುವ ಪ್ರಯತ್ನ ಮಾಡಬೇಡಿ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!