ಕಾರ್ಕಳ: ಯುವವಾಹಿನಿ (ರಿ.) ಕಾರ್ಕಳ ಘಟಕದ ವತಿಯಿಂದ “ಗುರುಭೋ ನಮಃ – ಯುವಮನಸ್ಸಿಗೆ ಗುರು ಸಂದೇಶ” ಕಾರ್ಯಕ್ರಮವು ಜನವರಿ 3ರಂದು ಘಟಕದ ಪೂರ್ವಾಧ್ಯಕ್ಷರಾದ ಗಣೇಶ್ ಸಾಲ್ಯಾನ್ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮವನ್ನು ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ತತ್ವಗಳನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವ ಉದ್ದೇಶದಿಂದ ಸರಕಾರ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು ಹೊಂದಿರುವುದಾಗಿ ತಿಳಿಸಿದರು. ಯುವವಾಹಿನಿ ಕಾರ್ಕಳ ಘಟಕ ಗುರು ಸಂದೇಶ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದ್ದು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಈ ಘಟಕವು ಮಾದರಿ ಸಂಘಟನೆಯಾಗಿ ರೂಪುಗೊಂಡಿದೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಯುವವಾಹಿನಿ ಘಟಕದ ಅಧ್ಯಕ್ಷ ದಯಾನಂದ ಯು. ಕರ್ಕೇರ ಅವರು ಭಾಗವಹಿಸಿ, ನಾರಾಯಣ ಗುರುಗಳ ಸರಳ ಜೀವನ, ಉನ್ನತ ಚಿಂತನೆ ಹಾಗೂ ಸಮಾಜ ಸುಧಾರಣೆಯ ಹಾದಿಯನ್ನು ನೈಜ ಘಟನೆಗಳ ಮೂಲಕ ವಿವರಿಸಿದರು. ನಾರಾಯಣ ಗುರು ಮಂದಿರಗಳು ಪೂಜೆಗೆ ಮಾತ್ರ ಸೀಮಿತವಾಗದೆ, ಗುರುಗಳ ತತ್ವ ಸಂದೇಶವನ್ನು ಸಮಾಜಕ್ಕೆ ಸಾರುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಘಟಕದ ಪೂರ್ವಾಧ್ಯಕ್ಷ ತಾರನಾಥ್ ಕೋಟ್ಯಾನ್, ಬಿಲ್ಲವ ಸಂಘದ ಪ್ರಮುಖರಾದ ಸುಭಿತ್ ಎನ್.ಆರ್. ಹಾಗೂ ರತ್ನಾಕರ ವರಂಗ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಗದೀಶ್ ಪೂಜಾರಿ ಸೇನರಬೆಟ್ಟು, ಸಾಣೂರು ಬಿಲ್ಲವ ಸಂಘದ ಅಧ್ಯಕ್ಷ ಪ್ರವೀಣ್ ಕೋಟ್ಯಾನ್, ಘಟಕದ ಕಾರ್ಯದರ್ಶಿ ರಾಕೇಶ್ ಅಮೀನ್, ಪೂರ್ವಾಧ್ಯಕ್ಷರಾದ ಸುಧಾಕರ ಪೂಜಾರಿ, ಮಮತಾ ಅಂಚನ್, ಅರುಣ್ ಪೂಜಾರಿ ಮಾಂಜ ಮೊದಲಾದವರು ಉಪಸ್ಥಿತರಿದ್ದರು. ಶೇಖರ್ ಸುವರ್ಣ ನಕ್ರೆ ಅವರು ಗುರು ಪೂಜೆಯನ್ನು ನೆರವೇರಿಸಿದರು ಹಾಗೂ ಸನ್ನಿಧಿ ಪ್ರಾರ್ಥಿಸಲಾಯಿತು.
ಗುರುತತ್ವ ಪ್ರಚಾರ ನಿರ್ದೇಶಕ ಸಂದೇಶ್ ಕೋಟ್ಯಾನ್ ಅವರು ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದ ಆಶಯವನ್ನು ವಿವರಿಸಿದರು. ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ ಅವರು ಸ್ವಾಗತಿಸಿದರು. ಚೈತ್ರ ಕಬ್ಬಿನಾಲೆ ಅವರು ಕಾರ್ಯಕ್ರಮವನ್ನು ಸುಸೂತ್ರವಾಗಿ ನಿರೂಪಿಸಿದರು.


