ಬೆಂಗಳೂರು : ದೇವನಹಳ್ಳಿ ಮಕ್ಕಳಧಾಮ ಕ್ಯಾಂಪಸ್ನಲ್ಲಿ ಸ್ಪರ್ಶ ಟ್ರಸ್ಟ್ ಆಯೋಜಿಸಿದ್ದ “ಜಾಯ್ ಆಫ್ ಲರ್ನಿಂಗ್ – 2025” ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ಸದಸ್ಯರು ನಿಸ್ವಾರ್ಥ ಸೇವೆಯ ಮೂಲಕ ಸಮಾಜಮುಖಿ ಬದ್ಧತೆಯನ್ನು ಮೆರೆದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವಕಾಶವಂಚಿತ ಮಕ್ಕಳಿಗೆ ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಆತ್ಮವಿಶ್ವಾಸ, ಉತ್ಸಾಹ ಮತ್ತು ಬದುಕಿನ ಹೊಸ ಆಶಯ ತುಂಬುವ ಮಹತ್ವದ ಪ್ರಯತ್ನ ನಡೆಯಿತು.
ಡಿಸೆಂಬರ್ 13ರಂದು ಕಬಡ್ಡಿ, ವಾಲಿಬಾಲ್, ತ್ರೋಬಾಲ್, ರಿಲೇ, ಲಾಂಗ್ ಜಂಪ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಯುವವಾಹಿನಿ ಸದಸ್ಯರು ತೀರ್ಪುಗಾರರು ಹಾಗೂ ಸ್ವಯಂಸೇವಕರಾಗಿ ಸಕ್ರಿಯವಾಗಿ ಪಾಲ್ಗೊಂಡು ಸ್ಪರ್ಧೆಗಳ ಯಶಸ್ವಿ ನಿರ್ವಹಣೆಗೆ ಕಾರಣರಾದರು.

ಡಿಸೆಂಬರ್ 14ರಂದು ಮಕ್ಕಳಿಗಾಗಿ ಬುಕ್ ರೀಡಿಂಗ್, ಕಥೆ ಹೇಳುವಿಕೆ, ಕ್ವಿಜ್, ಭಾಷಣ, ಹಾಡು ಮತ್ತು ನೃತ್ಯ ಸೇರಿದಂತೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಆಯೋಜಿಸಲಾಯಿತು. ಈ ಎಲ್ಲಾ ಸ್ಪರ್ಧೆಗಳ ಸಂಯೋಜನೆ, ಮಕ್ಕಳ ಮಾರ್ಗದರ್ಶನ ಮತ್ತು ಶಿಸ್ತಿನ ವ್ಯವಸ್ಥೆಯಲ್ಲಿ ಯುವವಾಹಿನಿ ಸದಸ್ಯರು ಅಪಾರ ಶ್ರಮ ವಹಿಸಿದರು.
ಈ ಮಹತ್ವದ ಕಾರ್ಯಕ್ರಮಕ್ಕೆ ಯುವವಾಹಿನಿ ಅಧ್ಯಕ್ಷರೂ ಹಾಗೂ ಸ್ಪರ್ಶ ಟ್ರಸ್ಟ್ ಸಮಿತಿ ಸದಸ್ಯರೂ ಆಗಿರುವ ಶಶಿಧರ ಕೋಟ್ಯಾನ್ ಅವರು ಸಂಪೂರ್ಣ ನೇತೃತ್ವ ವಹಿಸಿದ್ದರು. ಅವರು ಕಳೆದ 15 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಿರಂತರವಾಗಿ ಮುನ್ನಡೆಸುತ್ತಿದ್ದು, 2010ರಲ್ಲಿ ಕೇವಲ 100 ಮಕ್ಕಳಿಂದ ಆರಂಭವಾದ ಈ ಕಾರ್ಯಕ್ರಮ ಇಂದು 1000ಕ್ಕಿಂತ ಹೆಚ್ಚು ಮಕ್ಕಳ ಭಾಗವಹಿಸುವಿಕೆಯಿಂದ ರಾಜ್ಯಮಟ್ಟದ ಸಾಮಾಜಿಕ ಚಳವಳಿಯಾಗಿ ಬೆಳೆದಿದೆ. ಕಾರ್ಯಕ್ರಮದಲ್ಲಿ ಯುವವಾಹಿನಿ ಮಾಜಿ ಅಧ್ಯಕ್ಷರಾದ ಶ್ರೀಧರ್ ಡಿ. ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದು, ಮಕ್ಕಳಿಗೆ ಪ್ರೋತ್ಸಾಹ ಮತ್ತು ಸ್ಫೂರ್ತಿ ನೀಡಿದರು. ಯುವವಾಹಿನಿ ಸದಸ್ಯರ ನಿಸ್ವಾರ್ಥ ಸೇವೆ, ಸಮಯ ಮತ್ತು ಶ್ರಮ ಈ ಕಾರ್ಯಕ್ರಮದ ಯಶಸ್ಸಿಗೆ ಭದ್ರವಾದ ಆಧಾರವಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ಯುವವಾಹಿನಿ ತನ್ನ ಪ್ರಾಮಾಣಿಕ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇಂತಹ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಯುವವಾಹಿನಿ ಸದಸ್ಯರ ಉತ್ಸಾಹಭರಿತ ಭಾಗವಹಿಸುವಿಕೆ ಮುಂದೆಯೂ ನಿರಂತರವಾಗಿ ಮುಂದುವರಿಯಲಿ ಎಂಬುದು ಎಲ್ಲರ ಹಾರೈಕೆ.


