ಶ್ರೀ ನಾರಾಯಣಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.) ಆಶ್ರಯದಲ್ಲಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆತಿಥ್ಯದಲ್ಲಿ, ಕುದ್ರೋಳಿ ತೀರ್ಥಾಟನಾ ಪ್ರಯುಕ್ತ, ಪೂಜ್ಯ ಬ್ರಹ್ಮಶ್ರೀ ನಾರಾಯಣಗುರುಗಳು ರಚಿಸಿದ ದೈವದಶಕಂ ಕೃತಿಯ ಕನ್ನಡ ಧ್ವನಿ ಸುರುಳಿ ಬಿಡುಗಡೆಯ ಕಾರ್ಯಕ್ರಮ ಇಂದು ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಭಕ್ತಿಭಾವಪೂರ್ಣವಾಗಿ ನಡೆಯಿತು.

ಶ್ರೀರಕ್ಷಾ ಎಸ್. ಎಚ್. ಪೂಜಾರಿ ಕೊಣಾಜೆ ಇವರ ಕಂಠಸ್ಪರ್ಶದಲ್ಲಿ ದೈವದಶಕಂನ ದಾರ್ಶನಿಕ ಸಂದೇಶಗಳು ಧ್ವನಿಯಾಗಿ ಮೂಡಿಬಂದ ಈ ಧ್ವನಿ ಸುರುಳಿ, ಆತ್ಮಚಿಂತನೆ, ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಶ್ರೋತೃಗಳ ಹೃದಯಕ್ಕೆ ತಲುಪಿಸುವ ಪ್ರಯತ್ನವಾಗಿದೆ.ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯುವವಾಹಿನಿ (ರಿ,) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಭಾಗವಹಿಸಿದರು. ದೈವದಶಕಂ ಕೇವಲ ಒಂದು ಆಧ್ಯಾತ್ಮಿಕ ಕೃತಿ ಮಾತ್ರವಲ್ಲ; ಅದು ಸಮಾಜದಲ್ಲಿ ಸಮಾನತೆ, ಸಹೋದರತ್ವ ಮತ್ತು ಆತ್ಮಜ್ಞಾನವನ್ನು ಬಿತ್ತುವ ಶಕ್ತಿಯುತ ದಾರ್ಶನಿಕ ಗ್ರಂಥವಾಗಿದ್ದು, ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ ಎಂದು ಅತಿಥಿಗಳು ಅಭಿಪ್ರಾಯಪಟ್ಟರು ಈ ಸಂದರ್ಭದಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಾಡಳಿತ ಸಮಿತಿ ಸದಸ್ಯರು, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು
ಭಕ್ತಿಭಾವ, ದಾರ್ಶನಿಕ ಚಿಂತನೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂಗಮವಾಗಿ ನಡೆದ ಈ ದೈವದಶಕಂ ಕನ್ನಡ ಧ್ವನಿ ಸುರುಳಿ ಬಿಡುಗಡೆಯ ಕಾರ್ಯಕ್ರಮವು, ನಾರಾಯಣಗುರುಗಳ ಸಂದೇಶವನ್ನು ಇಂದಿನ ತಲೆಮಾರಿಗೆ ಹೊಸ ರೂಪದಲ್ಲಿ ತಲುಪಿಸುವ ಮಹತ್ವದ ಪ್ರಯತ್ನವಾಗಿ ಗಮನಸೆಳೆಯಿತು.


