ಮಂಗಳೂರು: ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ, ದಿನಾಂಕ 04-01-2026 ರ ಆದಿತ್ಯವಾರದಂದು ಯುವವಾಹಿನಿ (ರಿ.) ಕೆಂಜಾರು–ಕರಂಬಾರು ಘಟಕದ ವತಿಯಿಂದ ಕ್ಷೇತ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಬೆಳಿಗ್ಗೆ 10 ಗಂಟೆಗೆ ಕರಂಬಾರು ಮಾರಿಯಮ್ಮ ಕೋಟೆ ಬಬ್ಬುಸ್ವಾಮಿ ಪರಿವಾರ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ, ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಯುವವಾಹಿನಿ ಸದಸ್ಯರು, ಗ್ರಾಮಸ್ಥರು ಹಾಗೂ ಮಕ್ಕಳು ಸೇರಿ ಒಟ್ಟು 72 ಮಂದಿ ಒಂದೇ ಬಸ್ಸಿನಲ್ಲಿ ಪುಣ್ಯಕ್ಷೇತ್ರಕ್ಕೆ ತೆರಳಿದರು.

ದೇವಾಲಯದ ಕೆರೆಯಲ್ಲಿ ಸ್ನಾನ ಮಾಡಿ, ಅರ್ಚಕರ ಮಾರ್ಗದರ್ಶನದಲ್ಲಿ ಸುಮಾರು 200 ಮೀಟರ್ ಉದ್ದದ ಇತಿಹಾಸ ಪ್ರಸಿದ್ಧ ಗುಹೆಯೊಳಗೆ ಭಕ್ತಿಭಾವದಿಂದ ದೇವರ ಸ್ಮರಣೆ ಮಾಡುತ್ತಾ ದರ್ಶನ ಪಡೆದು, ಬಳಿಕ ಶ್ರೀ ಸೋಮನಾಥೇಶ್ವರ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಹಗಲು ತೇರು, ಬಲಿ ಸೇವೆ, ಪಲ್ಲಕ್ಕಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಪೂರ್ವಕವಾಗಿ ಕಣ್ತುಂಬಿಕೊಂಡರು.
ಅನಂತರ ಜಾಬಾಲಿ ಮುನಿಯ ಗುಡಿ, ಅದರ ಹಿಂದಿರುವ ಶಿವಲಿಂಗಗಳ ದರ್ಶನ, ರಕ್ತೇಶ್ವರಿ ಹಾಗೂ ನಾಗಬ್ರಹ್ಮ ದೇವರ ದರ್ಶನ, ಅನ್ನಪ್ರಸಾದ ಸ್ವೀಕಾರ ಹಾಗೂ ವ್ಯಾಗ್ರ ಚಾಮುಂಡಿ ದೈವದ ದರ್ಶನ ಪಡೆದು ಪರಿಸರ ವೀಕ್ಷಣೆ ನಡೆಸಲಾಯಿತು.
ಈ ಕ್ಷೇತ್ರದರ್ಶನ ಯಾತ್ರೆ ಯುವವಾಹಿನಿ (ರಿ.) ಕೆಂಜಾರು–ಕರಂಬಾರು ಘಟಕದ ಮಾಜಿ ಅಧ್ಯಕ್ಷರಾದ ಜಿತೇಶ್ ಸಾಲಿಯನ್ ಹಾಗೂ ದೀಪ್ ಕೀರಣ್ ಇವರ ನೇತೃತ್ವದಲ್ಲಿ ಶಿಸ್ತಿನಿಂದ ಮತ್ತು ಭಕ್ತಿಭಾವದಿಂದ ಯಶಸ್ವಿಯಾಗಿ ನೆರವೇರಿತು.


